ಸಂಪುಟ ಕಸರತ್ತು ಜೋರಾಗಿದ್ದರೆ, ಮತ್ತೊಂದೆಡೆ ಸಚಿವ ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲದೇ ಅವರಿಗೆ ಸಚಿವ ಸ್ಥಾನ ನೀಡುವವರೆಗೂ ಹೋರಾಟ ಮಾಡ್ತೇನೆ ಬಹಿರಂಗವಾಗಿ ಹೇಳಿದ್ದಾರೆ.

ಬೆಂಗಳೂರು, (ನ. 25): ಸಂಪುಟ ಕಸರತ್ತು ನಡೆದಿರುವ ಮಧ್ಯೆಯೇ ಸಚಿವ ರಮೇಶ್ ಜಾರಕಿಹೊಳಿ ಅವರು ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

Add Asianetnews Kannada as a Preferred SourcegooglePreferred

"

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಿ.ಪಿ.ಯೋಗೇಶ್ವರ್ ತುಂಬಾ ಪರಿಚಯ ಹಾಗೂ ಆತ್ಮೀಯರು. ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ಹೋರಾಟ ಮಾಡುತ್ತೇನೆ. ಕೊನೆಯವರೆಗೂ ಅವರ ಪರ ಬ್ಯಾಟಿಂಗ್ ಮಾಡುತ್ತೇನೆ. ಆದರೆ ಸಚಿವ ಸ್ಥಾನ ನೀಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟಿದ್ದು. ಪಕ್ಷದ ಕೆಲವು ಶಾಸಕರು ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಅವರ ಪರವಾಗಿ ನಾನು ಕೆಲಸ ಮಾಡುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಹೇಳಿದರು.

ಸಾಹುಕಾರ್ ಮನೆಯಲ್ಲಿ ಬಿಜೆಪಿ ಶಾಸಕರ ರಹಸ್ಯ ಸಭೆ: ಇಲ್ಲಿದೆ ಇನ್‍ಸೈಡ್ ಮಾಹಿತಿ

 ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ. ಆದರೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಅವರ ಹಿತ ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ ಎಂದು ಪರೋಕ್ಷವಾಗಿ ಮೂಲ ಬಿಜೆಪಿ ಶಾಸಕರಿಗೆ ತಿರುಗೇಟು ನೀಡಿದರು.

ಇನ್ನು ತಮ್ಮ ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ ಬಗ್ಗೆ ಪ್ರತಿಕ್ರಿಯಿಸಿ, ಸಚಿವೆ ಶಶಿಕಲಾ ಜೊಲ್ಲೆ ನನ್ನ ಸೋದರಿ. ಅವರು ನಮ್ಮನೆಗೆ ಬರೋದ್ರಲ್ಲಿ ಏನು ವಿಶೇಷತೆ ಇಲ್ಲ. ಹೈಕಮಾಂಡ್ ಯಾರನ್ನು ಕೈ ಬಿಡ್ತಾರೋ. ಯಾರನ್ನು ಸೇರಿಸಿಕೊಳ್ಳೊತ್ತೋ ಆ ನಿರ್ಧಾರಕ್ಕೆ ನಾನು ಬದ್ದನಿರ್ತೇನೆ. ಅದರ ಬಗ್ಗೆ ನಾನು ಏನು ತಲೆ ಕೆಡೆಸಿಕೊಂಡಿಲ್ಲ ಎಂದು ಹೇಳಿದರು.

ಮೊನ್ನೇ ಅಷ್ಟೇ ಸಿ.ಪಿ.ಯೋಗೇಶ್ವರ್ ಅವರ ಪರ ಮಾತನಾಡುವುದು ಬೇಡವೆಂದು ಕೆಲ ಬಿಜೆಪಿ ನಾಯಕರು ರಮೇಶ್ ಜಾರಕಿಹೊಳಿ ಅವರನ್ನ ಭೇಟಿ ಮಾಡಿ ಮನವಿ ಮಾಡಿದ್ದರು. ಆದ್ರೆ, ಇದೀಗ ಸಾಹುಕಾರ ಯೋಗೇಶ್ವರ್ ಪರ ಬ್ಯಾಟಿಂಗ್ ಮಾಡುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಸದ್ಯ ರಮೇಶ್ ಜಾರಕಿಹೊಳಿ ಅವರು ಸಂಪುಟ ಕಸರತ್ತಿನ ಮಧ್ಯೆ ಕೇಂದ್ರ ಬಿಂದುವಾಗಿದ್ದಾರೆ. ಅಲ್ಲೇ ಬಿಜೆಪಿಯಲ್ಲಿ ಸ್ಟ್ರಾಂಗ್ ಲೀಡರ್ ಆಗುತ್ತಿದ್ದಾರೆ.