ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನದ ಸಿಡಿಗುಂಡು ಸ್ಫೋಟಗೊಂಡಿದೆ. ಬೇಡವಾದ ಖಾತೆ ಕೊಟ್ಟಿದ್ದಕ್ಕೆ ನೂತನ ಸಚಿವ ಮುನಿಸಿಕೊಂಡಿದ್ದಾರೆ.

ಬೆಂಗಳೂರು, (ಜ.21):  ಇಷ್ಟು ದಿನ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ರಂಪಾಟ ನಡೆದಿದ್ರೆ, ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಖಾತೆ ಕ್ಯಾತೆ ಶುರುವಾಗಿದೆ. 

Add Asianetnews Kannada as a Preferred SourcegooglePreferred

ಹೌದು...ಎಚ್‌,ನಾಗೇಶ್ ಅವರ ರಾಜೀನಾಮೆಯಿಂದ ಖಾಲಿ ಇದ್ದ ಅಬಕಾರಿ ಇಲಾಖೆಯನ್ನು ಎಂಟಿಬಿ ನಾಗರಾಜ್ ಅವರಿಗೆ ನೀಡಲಾಗಿದೆ. ಆದ್ರೆ, ಅವರು ಇದನ್ನು ನಯವಾಗಿ ನಿರಾಕರಿಸಿದ್ದಾರೆ. ವಿ.ಸೋಮಣ್ಣ ಬಳಿ ಇರುವ ವಸತಿ ಖಾತೆ ಬೇಕೆಂದು ಎಂಟಿಬಿ ನಾಗರಾಜ್ ಬೇಡಿಕೆ ಇಟ್ಟಿದ್ದರು. ಆದ್ರೆ, ಇದೀಗ ಬೇರೆ ಖಾತೆ ಸಿಕ್ಕಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ.

ಖಾತೆ ಬದಲಾವಣೆ ಮಾಡಿದ್ದಕ್ಕೆ ಅಸಮಾಧಾನ ಸ್ಫೋಟ: ಇದಕ್ಕೆ ಹೊಸ ಸೂತ್ರ ಹೆಣೆದ ಸಿಎಂ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸುರುವ ಅಬಕಾರಿ ಸಚಿವ ಎಂಟಿಬಿ ನಾಗರಾಜ್, ಅಬಕಾರಿಲೀ‌ ನಾನೇನು ಮಾಡಲಿ? ಅಬಕಾರಿ ಬೇಡ ಎಂದು ಸಿಎಂ ಅವರಿಗೆ ಹೇಳಿದ್ದೇನೆ ಎಂದು ಅಸಮಾಧಾನ ಹೊರಹಾಕಿದರು.

ಮೈತ್ರಿ ಸರ್ಕಾರದಲ್ಲಿ ವಸತಿ ಸಚಿವ ಆಗಿದ್ದನ್ನ ಬಿಟ್ಟು ಬಂದೆ. ವಸತಿ ಇಲಾಖೆ ಆದರೆ ಬಡವರಿಗೆ ಮನೆ ಕೊಡಬಹುದು. ವಸತಿ ಖಾತೆ ನೀಡಿದ್ದರೇ ಸ್ಲಂಗಳ ಡೆವಲಪ್ಮೆಂಟ್ ‌ಮಾಡಲು ಅವಕಾಶ ಇತ್ತು. ಆದರೆ ಅಬಕಾರಿ ಇಲಾಖೆಯಲ್ಲಿ ನಾನೇನು ಮಾಡಲಿ? ಅಬಕಾರಿ ಇಲಾಖೆ ನಾನು ಕೆಲಸ ಮಾಡೋ ಖಾತೆ ಅಲ್ಲ. ಯಾರೋ ಸರ್ಕಾರ ಕಂಪನಿಯಿಂದ ಪರ್ಚೇಸ್ ಮಾಡಿ ಡೀಲರ್​​​ಗಳಿಗೆ ಕೊಡ್ತಾರೆ. ಅವರು ದುಡ್ಡು ಕೊಡ್ತಾರೆ ಅಷ್ಟೇ ಎಂದು ಹೇಳಿದರು.

ಸಾರ್ವಜನಿಕವಾಗಿ ಕೆಲಸ ಮಾಡಿ ಪಕ್ಷಕ್ಕೆ ಒಳ್ಳೆ ಹೆಸರು ತರುವ ಖಾತೆ ಕೊಡಿ ಎಂದಿದ್ದೀನಿ, ವಸತಿ ಖಾತೆಗಿಂತಲೂ ಒಳ್ಳೆ ಖಾತೆ ಕೊಡತೀವಿ ಎಂದು ಹೇಳಿದ್ದರು. ಆದರೆ ಈಗ ಅಬಕಾರಿ ಖಾತೆ ಕೊಟ್ಟಿದ್ದಾರೆ. ಇದು ನಾನು ಕೆಲಸ ಮಾಡೋ ಖಾತೆ ಅಲ್ಲ. ಈ ಖಾತೆ ಬೇಡ ಅಂತ ಹೇಳಿ ಬಂದಿದ್ದೀನಿ ಎಂದು ಸ್ಪಷ್ಟಪಡಿಸಿದರು.