ತುಮಕೂರು ಪ್ರವಾಸದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳೆಯರ ರಕ್ಷಣೆಗಾಗಿ 'ಅಕ್ಕ ಪಡೆ' ಎಂಬ ಹೊಸ ಪಡೆಯನ್ನು ಘೋಷಿಸಿದ್ದಾರೆ. ಇದರೊಂದಿಗೆ, ಅಂಗನವಾಡಿಗಳ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆ ಮತ್ತು ಬಾಕಿ ಇರುವ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಭರವಸೆ.
ತುಮಕೂರು ಪ್ರವಾಸದಲ್ಲಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹಲವು ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನವೆಂಬರ್ 28ಕ್ಕೆ ನಾವು ಅಂಗನವಾಡಿ ಆರಂಭಿಸಿ 50 ವರ್ಷ ಆಯಿತು. ಕರ್ನಾಟಕದಿಂದಲೇ ಅಂಗನವಾಡಿ ಶುರುವಾಗಿದ್ದು. 1975 ರಲ್ಲಿ ಇಂದಿರಾಗಾಂಧಿ ಅವರು ಪ್ರಾರಂಭ ಮಾಡಿದರು. ಮೈಸೂರಿನ ಟಿ.ನರಸೀಪುರದಲ್ಲಿ ಮೊದಲು ಆರಂಭವಾಗಿತ್ತು. ಐವತ್ತು ವರ್ಷದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಆಚರಿಸುತ್ತಿದ್ದೇವೆ. ಇಲಾಖೆಯಿಂದ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಅದಕ್ಕಾಗಿ ಪೂರ್ವಭಾವಿ ಆಗಿ 10 ಜಿಲ್ಲೆಗಳಲ್ಲಿ ಪೂರ್ವಭಾವಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದು ಕೇವಲ ಸಂಭ್ರಮವಲ್ಲ ಇಂದಿರಾಗಾಂಧಿ ಅವರ ಕನಸನ್ನು ಯಾವ ರೀತಿ ತೆಗೆದುಕೊಂಡು ಹೋಗಬೇಕು ಎಂಬುದನ್ನು ಘೋಷಣೆ ಮಾಡುತ್ತೇವೆ. ನವೆಂಬರ್ 28 ನಮ್ಮ ಇಲಾಖೆ ಗೆ ಅತೀ ಮುಖ್ಯವಾದ ದಿನ ಎಂದು ಹೇಳಿದರು.
ಅಕ್ಕ ಪಡೆ ಬಗ್ಗೆ ವಿವರಣೆ
ಅಕ್ಕ ಪಡೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿ, ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿ ಜಿಲ್ಲೆಯಲ್ಲೂ, ಅದರಲ್ಲೂ ನಗರ ಕೇಂದ್ರಗಳಲ್ಲಿ 10 ಮಹಿಳೆಯರು ಇರುತ್ತಾರೆ. ಅವರ ಜತೆಗೆ ಇಬ್ಬರು ಮಹಿಳಾ ಪೊಲೀಸರು ಇರುತ್ತಾರೆ. ಪೊಲೀಸ್ ಇಲಾಖೆ ಮತ್ತು ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಕ್ಕಪಡೆ ಕಾರ್ಯ ನಿರ್ವಹಿಸುತ್ತೆ. ಅದರಲ್ಲಿ ಎನ್ ಸಿಸಿ, ಹೋಮ್ ಗಾರ್ಡ್ ಗಳು ಕೂಡ ಇರುತ್ತಾರೆ. ಅವರಿಗೊಂದು ವಾಹನ, ಅದಕ್ಕೊಬ್ಬ ಚಾಲಕ ಇರುತ್ತಾರೆ. ಶಾಲೆ, ಕಾಲೇಜುಗಳು , ಬಸ್ ನಿಲ್ದಾಣ ಸೇರಿದಂತೆ ಜನಸಂದಣಿ ಪ್ರದೇಶ, ಮಹಿಳಾ ಹಾಸ್ಟೆಲ್ ಗಳು, ಪಾರ್ಕ್,ದೇವಸ್ಥಾನ, ಮನೆ, ಜನವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ರೋಡ್ ರೋಮಿಯೋಗಳು, ಮಹಿಳೆಯರನ್ನು ಚುಡಾಯಿಸುವಂತಹ ವಿಚಾರಗಳನ್ನು ಅಣ್ಣಾ ತಮ್ಮಂದಿರ ಹತ್ತಿರ ಹೇಳಿಕೊಳ್ಳಲು ಸಾಧ್ಯವಿಲ್ಲ. ಮನೆಯಲ್ಲಿ ದೌರ್ಜನ್ಯಕ್ಕೆ ಒಳಗಾದರೂ ಸುಮ್ಮನಿರುತ್ತಾರೆ. ಹೀಗಾಗಿ ಕಮಾಂಡೋ ಡ್ರೆಸ್ ಧರಿಸಿ ಅಕ್ಕ ಪಡೆ ಗಸ್ತು ತಿರುಗುತ್ತಾರೆ. ಪೊಲೀಸ್ ಇಲಾಖೆಯದ್ದೇ ನಂಬರ್ ಇದೆ, ಅದಕ್ಕೆ ಕರೆ ಮಾಡಿದರೆ ಅವರ ಹೆಸರನ್ನು ಗೌಪ್ಯವಾಗಿಟ್ಟು ಅವರ ರಕ್ಷಣೆಗೆ ಹೋಗುತ್ತೇವೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ರಕ್ಷಣೆ ಅಕ್ಕಪಡೆಯ ಕೆಲಸ. ಮಹಿಳೆಯರು, ಮಕ್ಕಳು ಸೈಬರ್ ಕ್ರೈಂಗೆ ಹೆಚ್ಚು ಒಳಗಾಗುತ್ತಿದ್ದಾರೆ. ಜಾಗೃತಿ ಮೂಡಿಸಲು ಅಕ್ಕಪಡೆ ಕಾರ್ಯೋನ್ಮುಖವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಶೀಘ್ರವೇ ಹೊಸ ಅಂಗನವಾಡಿ
ಸಾಕಷ್ಟು ಅಂಗನವಾಡಿ ಕಟ್ಟಡಗಳು ಬಾಡಿಗೆ ಕಟ್ಟಡದಲ್ಲಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವೆ, ರಾಜ್ಯದಲ್ಲಿ 69,500 ಅಂಗನವಾಡಿಗಳನ್ನು ನಡೆಸುತ್ತಿದ್ದೇವೆ. 50 ಸಾವಿರ ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ. ಇಡೀ ದೇಶದಲ್ಲೇ 50 ಸಾವಿರ ಸ್ವಂತ ಕಟ್ಟಡ ಇರುವುದು ಕರ್ನಾಟಕದಲ್ಲಿ ಮಾತ್ರ. ಇದನ್ನು ಹೇಳಲು ಹೆಮ್ಮೆ ಅನಿಸುತ್ತದೆ. ಪ್ರತಿವರ್ಷ 2000 ಅಂಗನವಾಡಿ ಕಟ್ಟಡ ಕಟ್ಟಲು ಯೋಜಿಸಿದ್ದೇವೆ. ನಾನು ಸಚಿವೆ ಆದ ಮೇಲೆ 2500 ಅಂಗನವಾಡಿ ಕಟ್ಟಡಕ್ಕೆ ಮಂಜೂರು ಆಗಿ ಕೆಲವು ಕಾಮಗಾರಿ ನಡೆಯುತ್ತಿದೆ. ಕೆಲವು ಮುಗಿದಿವೆ. ಮುಂದಿನ ದಿನಗಳಲ್ಲಿ ಉಳಿದ ಕಟ್ಟಡಗಳನ್ನು ನಿರ್ಮಿಸಲಾಗುವುದು. ಶಿಥಿಲವಾಗಿರುವ ಅಂಗನವಾಡಿ ಕಟ್ಟಡಗಳ ಕಾಮಗಾರಿ ಕೂಡ ಕೈಗೆತ್ತಿಕೊಂಡಿದ್ದೇವೆ ಎಂದು ಹೇಳಿದರು.
2 ತಿಂಗಳ ಗೃಹಲಕ್ಷ್ಮೀ ಸದ್ಯದಲ್ಲೇ
ಗೃಹಲಕ್ಷ್ಮೀ ಹಣ ಬಾಕಿ ವಿಚಾರವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸೆಪ್ಟೆಂಬರ್ - ಅಕ್ಟೋಬರ್ ಇವೆರಡು ತಿಂಗಳ ಹಣ ಬರಬೇಕು, ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ. ನಮ್ಮ ಗೃಹಲಕ್ಷ್ಮೀಯನ್ನು ಕಾಪಿ ಮಾಡಿಕೊಂಡು ಬಿಜೆಪಿ ಅವರು ಎಲ್ಲಾ ಕಡೆ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕವನ್ನು ರೋಲ್ ಮಾಡಲ್ ಮಾಡಿಕೊಂಡು ಹೋಗುತ್ತಿದ್ದಾರೆ. ಸೆಪ್ಟೆಂಬರ್ ,ಅಕ್ಟೋಬರ್ ಕಂತನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಖಾತೆ ಬದಲಾವಣೆ ಬಗ್ಗೆ ಹೇಳಿಕೆ
ಇನ್ನು ಸಂಪುಟ ಪುನರ್ ರಚನೆಯಲ್ಲಿ ಖಾತೆ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಬಹಳ ಸಂತೋಷದಿಂದ ಈ ಖಾತೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಏನೇ ಇದ್ದರೂ ಹೈಕಮಾಂಡ್ ನಿರ್ಧಾರ. ನಮ್ ಖಾತೆ ಬೇರೆ ಕೊಡಿ, ನಾವು ಮಂತ್ರಿ ಆಗಿರಬೇಕು ಅನ್ನೋದೆಲ್ಲಾ ನಾವು ಮಾತಾಡಬಾರದು. ಸಾಮಾನ್ಯ ಕಾರ್ಯಕರ್ತೆಯಾಗಿ ಬಂದಿದ್ದೇನೆ, ನಮ್ಮ ಹೈಕಮಾಂಡ್ ತೀರ್ಮಾನವೇ ನಮ್ಮ ತೀರ್ಮಾನ ಎಂದರು.
ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ
ಗ್ಯಾರೆಂಟಿ ಲಾಭ ಪಡೆದ ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಿಲ್ಲ ಎಂಬ ಕೆ.ಎನ್.ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಣ್ಣ ಸರ್ ಯಾವ ಅರ್ಥದಲ್ಲಿ ಮಾತನಾಡಿದ್ದಾರೆಯೋ ಗೊತ್ತಿಲ್ಲ. ಬಹಶಃ ಅವರ ಕಡೆ ಕೇಳಿದರೆ ಉತ್ತರ ಸಿಗುತ್ತದೆ, ಅವರನ್ನು ಕೇಳಿದರೆ ಸೂಕ್ತ ಉತ್ತರ ಸಿಗುತ್ತದೆ ಎಂದರು.
ಡಿಕೆಶಿಗೆ ಸಿಎಂ ಸ್ಥಾನ ಸಿಗುತ್ತಾ?
ಡಿ.ಕೆ.ಶಿವಕುಮಾರ್ ಗೆ ಸಿಎಂ ಸ್ಥಾನದ ನಿರೀಕ್ಷೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವೆ, ನಾನು ಒಂದೇ ಮಾತನ್ನು ಯಾವಾಗಿದ್ದರೂ ಹೇಳುತ್ತೇನೆ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತೆ. ಪಕ್ಷ ಏನ್ ಹೇಳುತ್ತೋ, ಶಿಸ್ತಿನ ಸಿಪಾಯಿಗಳಾಗಿ ಕೇಳ್ತೀವಿ. ಅವರು ಇವತ್ತು ಆಗ್ತಾರೋ , ನಾಳೆ ಆಗ್ತಾರೋ ಅವೆಲ್ಲಾ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.

