Asianet Suvarna News Asianet Suvarna News

ಕಾಂಗ್ರೆಸ್‌ ಆಡಳಿತ ದೇಶಕ್ಕೆ ಮಾರಕ: ಸಚಿವ ಹಾಲಪ್ಪ ಆಚಾರ್‌

ದೇಶವನ್ನು ಇಷ್ಟುವರ್ಷಗಳ ಕಾಲ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ಕುಟುಂಬಕ್ಕಾಗಿ ದುರಾಡಳಿತ ಮಾಡಿ, ದೇಶಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಆರೋಪಿಸಿದ್ದಾರೆ. 

Minister Halappa Achar Outraged Against Congress At Koppal gvd
Author
First Published Mar 20, 2023, 2:20 AM IST

ಕೊಪ್ಪಳ (ಮಾ.20): ದೇಶವನ್ನು ಇಷ್ಟುವರ್ಷಗಳ ಕಾಲ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ಕುಟುಂಬಕ್ಕಾಗಿ ದುರಾಡಳಿತ ಮಾಡಿ, ದೇಶಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಆರೋಪಿಸಿದ್ದಾರೆ. ಭಾಗ್ಯನಗರದ ಪಾನಘಂಟಿ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಹಿಳಾ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 65 ವರ್ಷ ಆಡಳಿತ ಮಾಡಿದ ಕಾಂಗ್ರೆಸ್‌ ದೇಶಕ್ಕಾಗಿ ಏನೇನೂ ಮಾಡಲಿಲ್ಲ. ದೇಶದ ಜನರ ಬಡತನದ ಹೆಸರಿನಲ್ಲಿಯೇ ಅಧಿಕಾರ ನಡೆಸಿತೆ ಹೊರತು ಬಡತನ ನಿವಾರಣೆಗಾಗಿ ಶ್ರಮಿಸಲಿಲ್ಲ. ಆದರೆ, ಈಗ ಬಿಜೆಪಿ ವಿಶ್ವವೇ ಭಾರತದ ಕಡೆ ನೋಡುವಂತಹ ಆಡಳಿತ ನೀಡಿದೆ. 

ಅಭಿವೃದ್ಧಿ ದೇಶಗಳನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿ ಮುನ್ನುಗ್ಗುತ್ತಿದೆ. ಮಹಿಳೆಯರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಸ್ವಾವಲಂಬಿ ಬದುಕಿಗೆ ನೆರವಾಗಿದೆ. ನರೇಂದ್ರ ಮೋದಿ ಅವರು ಆಡಳಿತಕ್ಕೆ ಬಂದ ಮೇಲೆ ಬಡ ಮಹಿಳೆಯರ ಕಣ್ಣೀರು ಒರೆಸುವ ಕೆಲಸಗಳಾಗಿವೆ ಎಂದರು. ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದ ಮಹಿಳೆಯರು ಹೊಗೆಯಿಂದ ಆರೋಗ್ಯ ಹಾಳಾಗುತ್ತಿತ್ತು. ಇದನ್ನು ಕಾಂಗ್ರೆಸ್‌ ಸರ್ಕಾರ ಗಮನಿಸಲೇ ಇಲ್ಲ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಡವರಿಗೂ ಉಚಿತ ಗ್ಯಾಸ್‌ ಸಂಪರ್ಕ ನೀಡುವ ಮೂಲಕ ಹೊಗೆಮುಕ್ತ ಅಡುಗೆ ಮನೆ ನಿರ್ಮಾಣ ಮಾಡಿದರು. ಕಾಂಗ್ರೆಸ್‌ನವರಿಗೆ ಭೂಮಿಪೂಜೆ ಮಾಡುವುದಷ್ಟೇ ಗೊತ್ತು. 

ಮೋದಿ, ಬೊಮ್ಮಾಯಿ ಆಡಳಿತದಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ಖಚಿತ: ಸಚಿವ ಹಾಲಪ್ಪ ಆಚಾರ್‌

ಅವರಿಗೆ ಬಡವರ ಕಷ್ಟ ಅರಿವಾಗಿಲ್ಲ. ಆದರೀಗ ಗ್ಯಾರಂಟಿ ಕಾರ್ಡ್‌ ಹಿಡಿದುಕೊಂಡು ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ. ಇಷ್ಟು ವರ್ಷ ಆಡಳಿತ ನಡೆಸಿದಾಗ ಗ್ಯಾರಂಟಿ ಯೋಜನೆ ನೀಡದೆ ಈಗ ಗ್ಯಾರಂಟಿ ಕಾರ್ಡ್‌ ನೀಡಿದರೆ ಏನರ್ಥ ಎಂದು ಕಿಡಿಕಾರಿದರು. ಕಾಂಗ್ರೆಸ್‌ ನಡಿಗೆ-ಕೃಷ್ಣೆ ಕಡೆಗೆ ಎನ್ನುವ ಪಾದಯಾತ್ರೆ ಕೇವಲ ಪೂಜೆಗೆ ಸೀಮಿತವಾಯಿತು. ಅವರ ಸುಳ್ಳು ಭರವಸೆಗಳು, ಮೋಸ ಉತ್ತರ ಕರ್ನಾಟಕದ ಮತದಾರರು ಮರೆತಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದರು. ಸಂಸದ ಸಂಗಣ್ಣ ಕರಡಿ ಮಾತನಾಡಿ, ಮಹಿಳೆಯರಿಗೆ ಆರ್ಥಿಕ ನಿರ್ವಹಣೆ ಬಗ್ಗೆ ತಿಳಿವಳಿಕೆ ಇರುತ್ತದೆ. ಇದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೇ ಸಾಕ್ಷಿ. 

ಅವರು ನೀಡಿದ ಉತ್ತಮ ಆರ್ಥಿಕ ಬಜೆಟ್‌ನಿಂದಾಗಿ ದೇಶದ ಆರ್ಥಿಕ ಪ್ರಗತಿ ಸಾಧಿಸುತ್ತಿದೆ. ಸ್ವತಃ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರೂ ಮಹಿಳೆಯರ ಪರ ಕಾಳಜಿ ಹೊಂದಿದ್ದಿಲ್ಲ. ನರೇಂದ್ರ ಮೋದಿ ಅವರು ಆಡಳಿತಕ್ಕೆ ಬಂದ ಮೇಲೆ ಮಹಿಳೆಯರಿಗೆ ಪ್ರಾಧಾನ್ಯ ನೀಡಲಾಗುತ್ತಿದೆ ಎಂದು ಹೇಳಿದರು. ಆರ್ಥಿಕವಾಗಿ ಬಲ ಹೊಂದುವ ಕಾರ್ಯಕ್ರಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡುತ್ತಿವೆ. ಮೋದಿ ಅವರ ಆಡಳಿತವನ್ನು ವೈರಿ ರಾಷ್ಟ್ರಗಳು ಮೆಚ್ಚಿವೆ. ಕೊಪ್ಪಳ ಕ್ಷೇತ್ರದಲ್ಲಿ ಹಲವು ರೈಲ್ವೆ ಕಾಮಗಾರಿಗಳು ಆಗಿವೆ. ಅಲ್ಲದೇ ಮುಂಬರುವ ದಿನಗಳಲ್ಲಿ ವಾಯುಮಾರ್ಗಗಳು ಆಗಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.

ಎಂಎಲ್‌ಸಿ ಹೇಮಲತಾ ನಾಯಕ್‌ ಮಾತನಾಡಿ, ಎಲ್ಲ ಕ್ಷೇತ್ರದ ಜನತೆಗೂ ಯೋಜನೆ ತಲುಪಿಸಿದ ಕೀರ್ತಿ ಬಿಜೆಪಿಗೆ ಸೇರುತ್ತದೆ. ಬ್ಯಾಂಕ್‌ ಮುಖ ನೋಡದ ಮಹಿಳೆಯರಿಗೆ ಜನಧನ್‌ ಖಾತೆ ಮಾಡುವ ಮೂಲಕ ಹೊಸ ಶಕೆ ಪ್ರಾರಂಭಿಸಿದರು. ಆಶಾ, ಅಂಗನವಾಡಿ, ಸಂಜೀವಿನಿ, ಅಡುಗೆ ಕಾರ್ಯಕರ್ತೆಯರ ಸಬಲೀಕರಣಕ್ಕೆ ಬಿಜೆಪಿ ಒತ್ತು ನೀಡಿದೆ ಎಂದು ಹೇಳಿದರು. ಮಹಿಳಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಶಶಿಕಲಾ ಬಿಗ್ಲಿ, ಪುರುಷನಷ್ಟೇ ಮಹಿಳೆ ಸಮಾನಳು. ಬಿಜೆಪಿ ಮಹಿಳೆಯರ ಘನತೆ, ಗೌರವ ಹೆಚ್ಚಿಸಿದೆ. ಚುನಾವಣೆಗಾಗಿ ಮನೆ ಬಾಗಿಲಿಗೆ ಮತ ಕೇಳಲು ಬರುವ ಬೇರೆ ಪಕ್ಷಗಳು ಕೆಲಸಗಳೇನು ಮಾಡಿವೆ ಎಂದು ಪ್ರಶ್ನಿಸಿ. 

ಕಾಂಗ್ರೆಸ್‌ ನಾಯಕರಿಗೆ ದೇಶ ಮೊದಲು ಎಂಬ ತತ್ವದಲ್ಲಿ ನಂಬಿಕೆ ಇಲ್ಲ: ಸಿ.ಟಿ.ರವಿ

ಕಾಂಗ್ರೆಸ್‌, ಜೆಡಿಎಸ್‌ನವರು ಗೆಲ್ಲುವ ತನಕ ಪ್ರಜೆಗಳ ಬಳಿ ಬರುತ್ತಾರೆ.ನಂತರ ಮುಖ ಮಾಡಿಯೂ ನೋಡುವುದಿಲ್ಲ. ಅಂಥವರನ್ನು ಅಧಿಕಾರದಿಂದ ದೂರವೇ ಇರುವಂತೆ ಮಾಡಬೇಕಾಗಿದೆ ಎಂದರು. ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶರಣಮ್ಮ ತಾಮರಡ್ಡಿ, ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ, ಕಾರ್ಯದರ್ಶಿ ಶೋಭಾನಗರಿ, ಜಿಲ್ಲಾ ಪ್ರಭಾರಿ ಭಾಗೀರಥಿ ಪಾಟೀಲ, ಜಿಲ್ಲಾಧ್ಯಕ್ಷೆ ವಾಣಿಶ್ರೀ ಮಠದ, ನಗರ ಅಧ್ಯಕ್ಷೆ ಗೀತಾ ಮುತ್ತಿಗಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Follow Us:
Download App:
  • android
  • ios