Asianet Suvarna News Asianet Suvarna News

ನೂರು ಸಿದ್ದರಾಮಯ್ಯ ಬಂದರೂ ಬಿಜೆಪಿ ಭಯಪಡಲ್ಲ: ಸಚಿವ ಕಾರಜೋಳ

ಬಿಜೆಪಿ ಅವರು ನನ್ನನ್ನೇ ಟಾರ್ಗೆಟ್‌ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರೆ ನಾನು ಏನು ಮಾಡಲಿಕ್ಕಾಗುತ್ತೆ? ಸಿದ್ದರಾಮಯ್ಯರನ್ನು ಟಾರ್ಗೆಟ್‌ ಮಾಡುವ ಪ್ರಶ್ನೆಯೇ ಇಲ್ಲ: ಕಾರಜೋಳ

Minister Govind Karjol Slams Former CM Siddaramaiah grg
Author
First Published Sep 25, 2022, 11:15 AM IST

ಬಾಗಲಕೋಟೆ(ಸೆ.25):  ನೂರು ಸಿದ್ದರಾಮಯ್ಯನವರು ಬಂದರೂ ಬಿಜೆಪಿ ಭಯಪಡುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕಂಡ್ರೆ ಬಿಜೆಪಿಗೆ ಭಯ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ನಮ್ಮ ಪಕ್ಷದಲ್ಲಿ ಒಬ್ಬರೆ ಶಾಸಕರು ಇದ್ದಾಗಲೂ ಭಯಪಟ್ಟಿಲ್ಲ. ಅಧಿಕಾರಕ್ಕೆ ಬರುವಷ್ಟರ ಮಟ್ಟಿಗೆ ಹೋರಾಟ ಮಾಡಿ ಗೆದ್ದಿದ್ದೇವೆ. ಬಿಜೆಪಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ರಾಜಕೀಯ ಪಕ್ಷ. ಕಾಂಗ್ರೆಸ್ಸಿಗಿಂತ ಹೆಚ್ಚು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದದ್ದು ಬಿಜೆಪಿ ಎಂದರು.

ಬಿಜೆಪಿ ಅವರು ನನ್ನನ್ನೇ ಟಾರ್ಗೆಟ್‌ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರೆ ನಾನು ಏನು ಮಾಡಲಿಕ್ಕಾಗುತ್ತೆ? ಸಿದ್ದರಾಮಯ್ಯರನ್ನು ಟಾರ್ಗೆಟ್‌ ಮಾಡುವ ಪ್ರಶ್ನೆಯೇ ಇಲ್ಲ. ಮೈಸೂರಿನವರು ಸಿದ್ದರಾಮಯ್ಯ ಅವರ 30 ವರ್ಷದ ರಾಜಕಾರಣ ಮಾಡಿದ್ದನ್ನ ನೋಡಿ ಸೋಲಿಸಿದ್ದು ನೋಡಿದ್ದೇವೆ. ಜನ ಬಹಳ ಬುದ್ಧಿವಂತರಿದ್ದಾರೆ. ಪ್ರತಿಯೊಬ್ಬರ ಮತ್ತು ಪಕ್ಷಗಳ ಕಾರ್ಯಶೈಲಿ ತೂಗಿ ಅಳೆದು ನೋಡಿ ಜನ ಮತ ಹಾಕುತ್ತಾರೆ ಎಂದು ತಿಳಿಸಿದರು.

RAJASTHAN CLP MEET: ತುರ್ತು ಸಭೆ ಕರೆದ ಕಾಂಗ್ರೆಸ್‌; ಇಂದು ರಾಜಸ್ಥಾನ ನೂತನ ಸಿಎಂ ಆಯ್ಕೆ..?

ಕಾಂಗ್ರೆಸ್‌ನಲ್ಲಿ ಮೂರು ಗುಂಪು:

ಕಾಂಗ್ರೆಸ್‌ನಲ್ಲಿ ಈಗಾಗಲೇ ಮೂರು ಗುಂಪುಗಳಾಗಿವೆ. ಸಿದ್ದರಾಮಯ್ಯ ಅವರದ್ದು ಒಂದು ಗುಂಪು, ಡಿ.ಕೆ.ಶಿವಕುಮಾರ್‌ ಅವರದ್ದು ಒಂದು ಗುಂಪು, ವೀರಶೈವರನ್ನು ಕಾಂಗ್ರೆಸ್‌ ಕಡೆಗಣಿಸಿದ್ದಾರೆ ಅಂತೇಳಿ ಶಾಮನೂರು ಶಿವಶಂಕರಪ್ಪನವರು ಹಿಡಿದುಕೊಂಡು ಕೆಲವರು ಓಡಾಡುತ್ತಿದ್ದಾರೆ. ರಾಜಕಾರಣದಲ್ಲಿ ಮತದಾರರೇ ಮಾಲೀಕರು. ಯಾರು ಬೇಕು ಅಂತ ಜನ ತೀರ್ಮಾನ ಮಾಡುತ್ತಾರೆ ಎಂದರು.

ಕೇರಳ ಸೇರಿದಂತೆ ದೇಶದ 30 ರಾಜ್ಯಗಳಲ್ಲಿ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ. ಗುಲಾಬ್‌ ನಬೀ ಆಜಾದ್‌ ಅವರಂತ ಹಿರಿಯ ಕಾಂಗ್ರೆಸ್ಸಿಗರು ಮನನೊಂದು ಪಕ್ಷ ತೊರೆದಿದ್ದಾರೆ. ಸಿಎಂ ಗೆಹ್ಲೊಟ್‌ ಅವರು ಪಕ್ಷ ತೊರೆಯುವ ಹಾದಿಯಲ್ಲಿದ್ದಾರೆ. ಕಾಂಗ್ರೆಸ್‌ನ ಕೆಲವರು ಜೈಲಿಗೆ ಹೋಗಿ ಬೇಲ್‌ ಮೇಲೆ ಓಡಾಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ದುರಾಡಳಿತದಿಂದ ಸರ್ವನಾಶವಾಗುತ್ತಿದ್ದು, ಒಂದೆರಡು ರಾಜ್ಯಗಳಲ್ಲಿ ಸ್ವಲ್ಪ ಉಸಿರಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಆ ರಾಜ್ಯಗಳಲ್ಲೂ ಕಾಂಗ್ರೆಸ್‌ ನಿರ್ನಾಮವಾಗಲಿದೆ.

ದೀಪಕ್ಕೆ ದಿಕ್ಕಿಲ್ಲದ ಮನೆಯಂತಾದ ಕಾಂಗ್ರೆಸ್‌ ಪಕ್ಷ

2024ರ ಲೋಕಸಭಾ ಚುನಾವಣೆ ಮುಗಿದ ನಂತರ ಕಾಂಗ್ರೆಸ್‌ ಪಕ್ಷ ದೀಪಕ್ಕೆ ದಿಕ್ಕಿಲ್ಲದ ಮನೆಯಂತಾಗುತ್ತದೆ. ಕಾಂಗ್ರೆಸ್‌ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ಕಾಂಗ್ರೆಸ್‌ ಪಕ್ಷ ಮುಳಗುವ ಹಡಗು. ಅಂತಹ ಹಡಗಿನಲ್ಲಿ ಜನ ಕೂರುವುದಿಲ್ಲ. ಗಾಂಧಿ ​ಕುಟುಂಬ 2024ರ ನಂತರ ನಿವೃತ್ತ ನೌಕರರಂತೆ ಮನೆಯೊಳಗೆ ಕೂರುತ್ತಾರೆ ಎಂದರು.

ಮೋದಿ ಇಲ್ಲದೆ ವಿಶ್ವದ ಸಮಸ್ಯೆ ಬಗೆಯರಿಯಲ್ಲ :

ದೇಶದಲ್ಲಿ ಮೋದಿ ಆಡಳಿತ ಮಾಡುವುದನ್ನು ನೋಡಿ ಈಗ ದೇಶ ಅಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಬೇಕಾಗಿರುವಂತಹ ವ್ಯಕ್ತಿಯಾಗಿದ್ದಾರೆ. ಮೋದಿ ಇಲ್ಲ ಅಂದರೆ, ರಾಜ್ಯ, ದೇಶದಲ್ಲಿ ಅಷ್ಟೇ ಅಲ್ಲ, ವಿಶ್ವದಲ್ಲಿಯೂ ಯಾವುದೇ ಸಮಸ್ಯೆ ಬಗೆಹರಿಯಲ್ಲ ಎಂದು ತಿಳಿಸಿದರು.

ಕೆಂಪಣ್ಣನ ಅರೋಪ ಸುಳ್ಳು :

ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣನನ್ನು ಮಾಡುತ್ತಿರುವ ಶೇ.40 ಕಮೀಷನ್‌ ಆರೋಪ ಸುಳ್ಳು ಹೇಳಿಕೆಯಾಗಿದೆ. ಕೆಂಪಣ್ಣನನ್ನು ಕಾಂಗ್ರೆಸ್‌ ನಾಯಕರು ಟೂಲ್‌ ಆಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರ ಆರೋಪಗಳು ರಾಜಕೀಯ ಪ್ರೇರಿತ ಆರೋಪಗಳಾಗಿವೆ. ಯಾವುದೂ ನಿಜವಾದ ಆರೋಪಗಳಲ್ಲ. 20 ವರ್ಷದಿಂದ ಆತ ಯಾವುದಾದ್ರೂ ಕೆಲಸ ತಗೊಂಡಿದ್ದರೆ ತೋರಿಸಿ. ಇಂತಹ ಕೆಲಸ ಮಾಡಿದೆ, ಇಂತಹ ವ್ಯಕ್ತಿಗೆ ಇಷ್ಟುಕಮೀಷನ್‌ ಕೊಟ್ಟೆಅಂತ ಹೇಳಲಿ. ಕೆಂಪಣ್ಣನಿಗೆ ತನಿಖಾ ಸಂಸ್ಥೆಯವರು ನೋಟಿಸ್‌ ಕೊಟಿದ್ದರೂ ಬಂದು ಯಾವುದೇ ಹೇಳಿಕೆ ಕೊಡಲಿಲ್ಲ. ದೆಹಲಿಯಿಂದಲೂ ತನಿಖೆಗೆ ಕರೆದರೂ ಬರಲಿಲ್ಲ ಎಂದರು.

ಯತ್ನಾಳ್‌ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್‌: ವಿಜಯೇಂದ್ರ

ಕಾಂಗ್ರೆಸ್‌ ಸುಳ್ಳು ಆರೋಪವನ್ನು ಸತ್ಯ ಮಾಡಲು ಹೊರಟಿದೆ. ಸಿಎಂ ವಿರುದ್ಧ ಪೇ ಸಿಎಂ ಅಂತ ಆರೋಪ ಮಾಡಿದರೆ ಗೌರವ ಬರುತ್ತಾ? ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಮಾಡುತ್ತಿರುವ ಆರೋಪಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಜನ ಇನ್ನೂ ಬುದ್ದಿ ಕಲಿಸುತ್ತಾರೆ. ಕಾಂಗ್ರೆಸ್‌ ಇನ್ನೂ ಹೀನಾಯ ಸ್ಥಿತಿ ತಲುಪುತ್ತೆ. ಸಿಎಂ ವಿರುದ್ಧ ಕಾಂಗ್ರೆಸ್‌ ಅಷ್ಟೇ ಅಲ್ಲ ಬಿಜೆಪಿ ಸೇರಿದಂತೆ ಯಾವ ಪಕ್ಷದವರಾದರೂ ಈ ಮಟ್ಟಕ್ಕೆ ಇಳಿಯಬಾರದು. ಇದರಿಂದ ನೈತಿಕತೆಯ ಅಧಃಪತನ ಆಗುತ್ತೆ. ಆಡಳಿತ ಮಾಡುವವರ ವಿರುದ್ಧ ಸುಳ್ಳು ಆರೋಪ ಮಾಡುವುದು ಸಲ್ಲ. ಏನಾದರೂ ಆರೋಪ ಮಾಡುವುದಾದರೆ ದಾಖಲೆ ಸಮೇತ ಮಾಡಬೇಕು ಎಂದು ತಿಳಿಸಿದರು.

ಬೇರೆಲ್ಲೂ ಚುನಾವಣೆ ಎದುರಿಸಲ್ಲ:

ಗೋವಿಂದ ಕಾರಜೋಳ ಅವರು ಮತಕ್ಷೇತ್ರ ಬದಲಾವಣೆ ಮಾಡುತ್ತಾರೆ ಎಂದು ಉಹಾಪೋಹ ಹುಟ್ಟಿಸುತ್ತಿದ್ದಾರೆ. ನಾನು ಮುಧೋಳ ಕ್ಷೇತ್ರ ಬಿಟ್ಟು ಎಲ್ಲಿಯೂ ಚುನಾವಣೆ ಎದುರಿಸಲ್ಲ. ನನ್ನ ಕೊನೆ ಉಸಿರಿರೋವರೆಗೂ ಮುಧೋಳ ನಂಟು ಇರುತ್ತದೆ. ನಾನು ಮುಧೋಳ ಬಿಟ್ಟು ಹೋಗಲ್ಲ. ನನ್ನ ರಾಜಕೀಯ ತೀರ್ಮಾನವನ್ನು ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷ ನನ್ನನ್ನ ಎಲ್ಲಿ ಕೆಲಸಕ್ಕೆ ಹಚ್ಚಬೇಕು ಅನ್ನೋ ತೀರ್ಮಾನ ಮಾಡುತ್ತದೆ ಎಂದರು.

ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ನಿಶ್ಚಿತ

ಎಸ್ಸಿ,ಎಸ್ಟಿಮೀಸಲಾತಿ ಹೆಚ್ಚಳದ ಬಗ್ಗೆ ಸಿಎಂ ಬೊಮ್ಮಾಯಿ ಅವರು ಸದನದಲ್ಲಿ ಮಾತನಾಡಿದ್ದು, 8 ದಿನಗಳಲ್ಲಿ ಸರ್ವಪಕ್ಷಗಳ ಸಭೆ ಕರೆಯುತ್ತೇವೆ ಎಂದಿದ್ದಿದ್ದಾರೆ. ನಾವು ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳ ಮಾಡುತ್ತೇವೆ. ಅದರಲ್ಲಿ ಮುಚ್ಚುಮರಿ ಇಲ್ಲ ಅಂತ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.  
 

Follow Us:
Download App:
  • android
  • ios