ಸಿದ್ದರಾಮಯ್ಯನೇ ಕಳೆದ ಬಾರಿ 5 ವರ್ಷ ಸಿಎಂ ಆಗಿದ್ದಾಗ ಯಾಕೆ ಅವರು ಗಡಿ ಸಮಸ್ಯೆ ಬಗೆಹರಿಸಿಲ್ಲ ಎಂದು ಪ್ರಶ್ನಿಸಿರುವ ಸಚಿವ ಗೋವಿಂದ ಕಾರಜೋಳ ಬೆಳಗಾವಿ ಗಡಿಭಾಗದ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ ಅವರ ಹೇಳಿಕೆಗೆ ಏಕವಚನದಲ್ಲೇ ಉತ್ತರಿಸುವ ಮೂಲಕ ತಿರುಗೇಟು ನೀಡಿದ್ದಾರೆ.

ಬಾಗಲಕೋಟೆ (ಡಿ.19): ಸಿದ್ದರಾಮಯ್ಯನೇ ಕಳೆದ ಬಾರಿ 5 ವರ್ಷ ಸಿಎಂ ಆಗಿದ್ದಾಗ ಯಾಕೆ ಅವರು ಗಡಿ ಸಮಸ್ಯೆ ಬಗೆಹರಿಸಿಲ್ಲ ಎಂದು ಪ್ರಶ್ನಿಸಿರುವ ಸಚಿವ ಗೋವಿಂದ ಕಾರಜೋಳ ಬೆಳಗಾವಿ ಗಡಿಭಾಗದ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ ಅವರ ಹೇಳಿಕೆಗೆ ಏಕವಚನದಲ್ಲೇ ಉತ್ತರಿಸುವ ಮೂಲಕ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಗಡಿ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ ತನ್ನ ಅವಧಿಯಲ್ಲಿ ಏಕೆ ಸರಿಪಡಿಸಲಿಲ್ಲ? ಸುಮ್ಮನೆ ಬಾಯಿಚಪಲಕ್ಕೆ ಏನೇನೊ ಮಾತಾಡಬಾರದು. 60 ವರ್ಷ ಕಾಂಗ್ರೆಸ್‌ನವರೇ ಆಡಳಿತ ಮಾಡಿದರು. ಆಗ ಎಲ್ಲವನ್ನು ಸರಿ ಮಾಡಬಹುದಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

60 ವರ್ಷ ತ್ರಿಬಲ್‌ ಎಂಜಿನ್‌ ಸರ್ಕಾರ ಇತ್ತಲ್ಲ ಯಾಕೆ ಮಾಡಲಿಲ್ಲ? ಸಮಸ್ಯೆ ಬಗೆಹರಿಸಬೇಡಿ ಎಂದು ಯಾರಾದರೂ ಆಣೆ ಹಾಕಿದ್ದರಾ ಎಂದು ಪ್ರಶ್ನಿಸಿದರು. 1924ರಲ್ಲಿ ಮಹಾತ್ಮಗಾಂಧಿ ಅವರು ನಡೆಸಿದ ಬೆಳಗಾವಿ ಅಧಿವೇಶನದಲ್ಲಿ ಗಾಂಧಿ ಅವರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಒಪ್ಪಿರಲಿಲ್ಲ. ಈಗ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಶಂಭೂರಾಜ್‌ ದೇಸಾಯಿ ಅವರು ಬೆಳಗಾವಿ ನಮ್ಮ ಹಕ್ಕು, ಬೆಳಗಾವಿ ಮರಾಠಿಗರಿಗಾಗಿ ನಾನು ಮತ್ತೆ ಬೆಳಗಾವಿಗೆ ಹೋಗುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ. ಅವನಿಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸ್‌ ಯಾತ್ರೆ ವಿಚಾರದಲ್ಲಿ ಪಕ್ಷದ ನಿರ್ಧಾರವೇ ಅಂತಿಮ: ಡಿ.ಕೆ.ಶಿವಕುಮಾರ್‌

ಬೆಳಗಾವಿ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳ ಕುರಿತು ಅಂದುಕೊಂಡಷ್ಟು ಚರ್ಚೆ ನಡೆಯುತ್ತಿಲ್ಲ. ಅಧಿವೇಶನದ ಉದ್ದೇಶ ಈಡೇರುವುದೂ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತಿದೆ. ಉತ್ತರ ಕರ್ನಾಟಕದ ಶಾಸಕರು ಏನೇನು ಚರ್ಚೆ ಆಗಬೇಕು ಎಂಬುದರ ಕುರಿತು ನಿರ್ಣಯ ಕೈಗೊಳ್ಳಬೇಕು. ಇಲಾಖಾವಾರು ಒಂದೊಂದಾಗಿ ಚರ್ಚೆ ಮಾಡಿದರೆ, ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಇದರಿಂದ ಸರ್ಕಾರದ ಗಮನವನ್ನು ಸುಲಭವಾಗಿ ಸೆಳೆಯಬಹುದು. ಇದು ಸಾರ್ವಜನಿಕರಿಗೂ ಗೊತ್ತಾಗುತ್ತೆ. ಈ ಬಗ್ಗೆ ಒತ್ತು ಕೊಡುವ ಕೆಲಸ ಆಗಬೇಕು ಎಂದರು.

ಡಾ.ವಿದ್ಯಾ ಕುಂದರಗಿ ಸೃಜನಶೀಲ ಬರಹಗಾರರು: ಬಸವರಾಜ ಹೊರಟ್ಟಿ

ಅಧಿವೇಶನದಲ್ಲಿ ಉತ್ತರ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳು ಕಡಿಮೆ ಇರುವ ಬಗ್ಗೆ ಚರ್ಚೆ ಆಗಬೇಕು. ಮಹಾದಾಯಿ ಬಗ್ಗೆ ಚರ್ಚೆ ಆಗಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ನಮಗೆ ಸಿಕ್ಕ ನೀರು ಬಳಕೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ಆಗಬೇಕು. ಆದರೆ, ಅದು ಆಗುತ್ತಿಲ್ಲ ಇದು ಬೇಸರದ ಸಂಗತಿ ಎಂದು ಹೇಳಿದರು. ಅಧಿವೇಶನದ ವೇಳೆ ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿ ಫ್ಯಾಶನ್‌ ಆಗಿಬಿಟ್ಟಿದೆ. ಯಾವುದೋ ಊರಿನವರೋ ಸಂಘಟನೆಯವರೋ ಬಂದು ಕೂತು ಬಿಡುತ್ತಾರೆ. ಎಲ್ಲ ಶಾಸಕರು, ಮಂತ್ರಿಗಳು ಅವರ ಭೇಟಿಗೆ ಬರಬೇಕು ಎಂದು ಹೇಳುತ್ತಾರೆ. ಸುವರ್ಣಸೌಧದ ಮುಂದೆ ಅಡ್ಡ ಹಾಕಿಕೊಂಡು ಕೂತಲ್ಲಿ ಕಾಲ ಕಳೆದು ಹೋದರೆ ಏನೂ ಪ್ರಯೋಜನವಿಲ್ಲ. ಸಾರ್ವಜನಿಕರಿಗೂ ಹೆಚ್ಚು ಅವಕಾಶ ಕೊಡಬೇಕು. ನೀವು ಏನು ಹೇಳಬೇಕಿದೆ. ಅದರ ಬಗ್ಗೆ ಧರಣಿ ಕೂರುವುದಲ್ಲ ಸರ್ಕಾರಕ್ಕೆ ಮನವಿ ಕೊಡಬೇಕು ಎಂದರು.