ಜನರಿಗೆ ಸಮಸ್ಯೆ ಬಂದಾಗ ನಾವೆಲ್ಲ ಭಾರತೀಯರು ಎಂಬಂತೆ ಕೆಲಸ ಮಾಡಬೇಕು. ಅದನ್ನೇ ನಾವು ಮಾಡಿದ್ದೇವೆ. ನೆರೆ ರಾಜ್ಯದೊಂದಗಿನ ಸಂಬಂಧ ಉತ್ತಮಗೊಳಿಸಲು ಇದೊಂದು ಹೆಜ್ಜೆಯಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಬೆಂಗಳೂರು (ಮೇ.23): ನಮ್ಮ ಮತ್ತು ಆಂಧ್ರಪ್ರದೇಶ ಸರ್ಕಾರದಲ್ಲಿರುವ ಪಕ್ಷಗಳ ಸಿದ್ಧಾಂತಗಳು ಬೇರೆಬೇರೆ. ಆದರೆ, ಜನರಿಗೆ ಸಮಸ್ಯೆ ಬಂದಾಗ ನಾವೆಲ್ಲ ಭಾರತೀಯರು ಎಂಬಂತೆ ಕೆಲಸ ಮಾಡಬೇಕು. ಅದನ್ನೇ ನಾವು ಮಾಡಿದ್ದೇವೆ. ನೆರೆ ರಾಜ್ಯದೊಂದಗಿನ ಸಂಬಂಧ ಉತ್ತಮಗೊಳಿಸಲು ಇದೊಂದು ಹೆಜ್ಜೆಯಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಆಂಧ್ರಕ್ಕೆ ಕುಮ್ಕಿ ಆನೆಗಳ ಹಸ್ತಾಂತರ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಆಂಧ್ರಪ್ರದೇಶದ ಕಾಡಾನೆ ದಾಳಿ ತಡೆಗೆ ನೆರವಾಗುವಂತೆ ಪವನ್ ಕಲ್ಯಾಣ್ ಕೋರಿದ ಕೂಡಲೇ ಕುಮ್ಕಿ ಆನೆಗಳ ಹಸ್ತಾಂತರಕ್ಕೆ ನಿರ್ಧರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಪ್ರಸ್ತಾವ ಇಟ್ಟಾಗ ಅವರು ಒಪ್ಪಿಗೆ ನೀಡಿದರು. ಹಾಗೆಯೇ, ನಮ್ಮಿಂದ ಪಡೆಯುವ ಕುಮ್ಕಿ ಆನೆಗಳನ್ನು ಉತ್ತಮವಾಗಿ ನೋಡಿಕೊಳ್ಳಿ ಎಂದು ಪವನ್ ಕಲ್ಯಾಣ್ ಅವರಲ್ಲಿ ಮನವಿ ಮಾಡಿದ್ದೇವೆ ಎಂದಿದ್ದಾರೆ. ಅಲ್ಲದೆ, ಈಶ್ವರ್ ಖಂಡ್ರೆ ಮಾತನ್ನಾರಂಭಿಸುವುದಕ್ಕೂ ಮುನ್ನ ಪ್ರಕೃತಿಯ ಮಹತ್ವ ಸಾರುವ ಸಂದೇಶವನ್ನು ತೆಲುಗಿನಲ್ಲಿ ವಾಚಿಸಿದರು.
ಕಸ ವಿಲೇವಾರಿಗೆ ₹4791 ಕೋಟಿ ಟೆಂಡರ್ ಪ್ರಕ್ರಿಯೆಗೆ ಸಂಪುಟ ಸಭೆಯಲ್ಲಿ ತೀರ್ಮಾನ: ಡಿ.ಕೆ.ಶಿವಕುಮಾರ್
ನವಲಿ ಡ್ಯಾಂ ಬಗ್ಗೆ ಸಭೆ ನಿಗದಿ: ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ಹೆಚ್ಚುವರಿ ನೀರು ಶೇಖರಣೆ ದೃಷ್ಟಿಯಿಂದ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಸಂಬಂಧ ಕರ್ನಾಟಕದೊಂದಿಗೆ ಸಭೆ ನಡೆಸಲು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದು ಎಂದು ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ತಿಳಿಸಿದರು. ವಿಧಾನಸೌಧದಲ್ಲಿ ರಾಜ್ಯದ ಕುಮ್ಕಿ ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಸಂಬಂಧ ಚಂದ್ರಬಾಬು ನಾಯ್ಡು ಅವರೊಂದಿಗೆ ಸಭೆ ನಡೆಸಲು ದಿನಾಂಕ ನಿಗದಿ ಮಾಡಿಕೊಡುವಂತೆ ಮನವಿ ಮಾಡಿದರು.
ಅದಕ್ಕೆ ಪ್ರತಿಯಾಗಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಭರವಸೆ ನೀಡಿದ ಪವನ್ ಕಲ್ಯಾಣ್, ಕರ್ನಾಟಕವು ನಮ್ಮ ಸಹೋದರ ರಾಜ್ಯ. ಆಂಧ್ರಪ್ರದೇಶದ ಮಾನವ-ಆನೆ ಸಂಘರ್ಷ ತಡೆಯಲು ಕುಮ್ಕಿ ಆನೆಗಳನ್ನು ನೀಡುವ ಮೂಲಕ ಕರ್ನಾಟಕ ಸೌಹಾರ್ದಯುತವಾಗಿ ನಡೆದುಕೊಂಡಿದೆ. ಅದರ ಮುಂದಿನ ಭಾಗವಾಗಿ ತುಂಗಭದ್ರಾ ಜಲಾಶಯದಲ್ಲಿ ಶೇಖರಣೆಯಾಗಿರುವ ಹೂಳು ತೆಗೆಯಲು ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಆಂಧ್ರ ಸಿಎಂ ಅವರೊಂದಿಗೆ ಸಭೆ ನಡೆಸಲು ದಿನಾಂಕ ನಿಗದಿ ಮಾಡುವಂತೆ ಡಿ.ಕೆ.ಶಿವಕುಮಾರ್ ಕೋರಿದ್ದಾರೆ. ಅದರಂತೆ ನಾಯ್ಡು ಅವರೊಂದಿಗೆ ಚರ್ಚೆ ನಡೆಸಿ ಸಭೆಯ ದಿನಾಂಕ ನಿಗದಿ ಮಾಡಲಾಗುವುದು ಹಾಗೂ ಕರ್ನಾಟಕಕ್ಕೆ ಅಗತ್ಯ ನೆರವನ್ನೂ ನೀಡಲಾಗುವುದು ಎಂದು ಭರವಸೆ ನೀಡಿದರು.
ಇಂದಿನಿಂದ 16 ಜಿಲ್ಲಾಸ್ಪತ್ರೆಗಳಲ್ಲಿ ಕಿಮೋಥೆರಪಿ ಕೇಂದ್ರ ಶುರು: ಸಚಿವ ದಿನೇಶ್ ಗುಂಡೂರಾವ್
ಅದಕ್ಕೂ ಮುನ್ನ ಮಾತನಾಡಿದ ಡಿ.ಕೆ.ಶಿವಕುಮಾರ್, ತುಂಗಭದ್ರ ನದಿಯ ನಮ್ಮ ಪಾಲಿನ ನೀರು ಬಳಕೆಗೆ ಜಲಾಶಯದಲ್ಲಿ ಶೇಖರಣೆಯಾಗಿರುವ ಹೂಳು ತೆಗೆಯಬೇಕಿದೆ. ಅದಕ್ಕಾಗಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಬೇಕಿದ್ದು, ಅದಕ್ಕಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಬೇಕಿದೆ. ಹೀಗಾಗಿ ದಿನಾಂಕ ನಿಗದಿ ಮಾಡುವಂತೆ ಈಗಾಗಲೇ ಕೋರಿದ್ದು, ಪವನ್ ಕಲ್ಯಾಣ್ ಅವರು ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚಿಸಿ ಸಭೆ ನಿಗದಿ ಮಾಡಬೇಕು ಎಂದು ಮನವಿ ಮಾಡಿದರು.