ಮಹಾರಾಷ್ಟ್ರ ಹಾಗೂ ಹರ್ಯಾಣ ಚುನಾವಣೆ ಕರ್ನಾಟಕ ರಾಜಕೀಯದ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದ್ದು, ಇಲ್ಲಿನ ಉಪ ಚುನಾವಣೆಯ ಬಗ್ಗೆಯೇ ಅನುಮಾನ ಶುರುವಾಗಿದೆ. 

ಬೆಂಗಳೂರು [ಅ.25]: ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ಚುನಾವಣಾ ಫಲಿತಾಂಶವು ಬಿಜೆಪಿಗೆ ನಿರೀಕ್ಷಿತ ಮಟ್ಟದಲ್ಲಿ ಆಶಾದಾಯಕವಾಗಿಲ್ಲದ ಕಾರಣಕ್ಕಾಗಿ ರಾಜ್ಯದ ಉಪಚುನಾವಣೆ ನಡೆಯಲಿದೆಯೇ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಮೂಡಿದೆ.

Add Asianetnews Kannada as a Preferred SourcegooglePreferred

ಬರುವ ಡಿ.5ಕ್ಕೆ ರಾಜ್ಯದಲ್ಲಿ ಉಪಚುನಾವಣೆ ನಿಗದಿಯಾಗಿದೆ. ಆದರೆ, ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣಾ ಫಲಿತಾಂಶದ ಪರಿಣಾಮ ರಾಜ್ಯದ ಮೇಲೂ ಬೀರುವ ಸಾಧ್ಯತೆ ಇದೆ. ರಾಜ್ಯದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯ ನೆರವು ನೀಡುವಲ್ಲಿ ಕೇಂದ್ರ ವಿಫಲವಾಗಿದೆ. ಅಲ್ಲದೇ, ರಾಜ್ಯ ರಾಜಕೀಯ ಬೆಳವಣಿಗೆಗಳು ಸಹ ಕೇಂದ್ರಕ್ಕೆ ಪೂರಕವಾಗಿಲ್ಲ. ಹೀಗಾಗಿ ಉಪಚುನಾವಣೆಯನ್ನು ನಡೆಸದಂತೆ ಕಾರ್ಯತಂತ್ರ ರೂಪಿಸುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿವೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗಳು ಸಹ ಇದಕ್ಕೆ ಪುಷ್ಟಿನೀಡುವಂತಿವೆ. ಚುನಾವಣಾ ಆಯೋಗವು ಸ್ವಾಯತ್ತ ಸಂಸ್ಥೆಯಾಗಿ ಕೆಲಸ ಮಾಡುವ ಬದಲು ಕೇಂದ್ರದ ನಿರ್ದೇಶನ ಮೇರೆಗೆ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಉಪಚುನಾವಣೆ ರದ್ದಾದರೂ ಅಶ್ಚರ್ಯವಿಲ್ಲ ಎಂದು ಮುಖಂಡರು ಹೇಳಿಕೆ ನೀಡಿರುವುದು ಕುತೂಹಲಕರವಾಗಿದೆ.

ಬೈ ಎಲೆಕ್ಷನ್‌ನಲ್ಲಿ ಪಕ್ಷಾಂತರಿಗಳಿಗೆ ಸೋಲು: ರಾಜ್ಯದ ಅನರ್ಹ ಶಾಸಕರಿಗೂ ಇದೇ ಗತಿನಾ?...

ಒಂದು ವೇಳೆ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ ಪ್ರಕರಣವನ್ನು ಮತ್ತೆ ವಿಧಾನಸಭೆಯ ಸ್ಪೀಕರ್‌ ಅಂಗಳಕ್ಕೆ ವರ್ಗಾಯಿಸಿದಲ್ಲಿ ಆಗ ಅನರ್ಹ ಶಾಸಕರು ಮತ್ತೊಮ್ಮೆ ರಾಜೀನಾಮೆ ಕೊಡದೆ ಪ್ರತ್ಯೇಕ ಗುಂಪು ರಚಿಸಿಕೊಂಡು ಬಿಜೆಪಿಯನ್ನು ಬೆಂಬಲಿಸಬಹುದು. ಆದರೆ, ಇದರಿಂದ ಆ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗಲಿಕ್ಕಿಲ್ಲ. ಮುಂದೆ ಪರಿಸ್ಥಿತಿ ತಿಳಿಗೊಂಡು ಬಿಜೆಪಿ ಪರ ವಾತಾವರಣ ಸೃಷ್ಟಿಯಾದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆ ಎದುರಿಸಬಹುದು ಎಂಬ ಮಾತು ಕೇಳಿಬರುತ್ತಿವೆ