ಈ ಲೋಕಸಭಾ ಚುನಾವಣೆಯಲ್ಲಿ ನೀನು ಗೆಲ್ಲುವುದಿಲ್ಲ. ನನ್ನ ಆಸ್ತಿಯ ಬಗ್ಗೆ ಮಾತನಾಡುತ್ತಿಯಾ? ನಿಂದೆಷ್ಟಿತ್ತು? ನಿಮ್ಮ ಅಣ್ಣಂದು ಎಷ್ಟಿತ್ತು? ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ ಎಂಬುದರ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ಬಾ.

ಬೆಳಗಾವಿ (ಏ.15): ಈ ಲೋಕಸಭಾ ಚುನಾವಣೆಯಲ್ಲಿ ನೀನು ಗೆಲ್ಲುವುದಿಲ್ಲ. ನನ್ನ ಆಸ್ತಿಯ ಬಗ್ಗೆ ಮಾತನಾಡುತ್ತಿಯಾ? ನಿಂದೆಷ್ಟಿತ್ತು? ನಿಮ್ಮ ಅಣ್ಣಂದು ಎಷ್ಟಿತ್ತು? ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ ಎಂಬುದರ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ಬಾ. 48 ಎಕರೆ ಇದೆಯೋ ಒಂದು ಸಾವಿರ ಇದೆಯೋ ಚರ್ಚೆ ಮಾಡೋಣ ಬಾರಯ್ಯ ಎಂದು ವಿಧಾನಸಭೆಯಲ್ಲಿ ಕರೆದೆ‌. ಆದರೆ, ಬರಲಿಲ್ಲ ಹೋಗಿ ಬಿಟ್ಟ ಆಸಾಮಿ ಎಂದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. ನಗರದ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿಸ್ಟರ್‌ ಕುಮಾರಸ್ವಾಮಿ ನೀನು ಹೆದರಿ ಪಕ್ಕದ ಜಿಲ್ಲೆಗೆ ಹೋಗಿದ್ದೀಯ. 

ನೀನು ಮೋಸಗಾರ, ಸುಳ್ಳುಗಾರ. ನಾನು ಕಲ್ಲು ಲೂಟಿ ಮಾಡಿದೆನೋ, ಮೋಸ ಮಾಡಿದೆನೋ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ನೀನು ಎಂತಹ ಸುಳ್ಳುಗಾರ ಎಂಬುದು ಗೊತ್ತಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಿಯೋ ಕುಳಿತು ಎದೆಗಾರಿಕೆ ಪ್ರದರ್ಶಿಸುವುದು ಬೇಡ. ಹಿಂದೆ ಹೇಳಿದಂತೆ ಈಗಲೂ ಎನ್‌ಡಿಎ ಪಾರ್ಟನರ್‌ಗೆ ಸವಾಲು ಹಾಕುತ್ತೇನೆ. ನಮ್ಮಿಬ್ಬರ ನಡುವೆ ಒಂದು ಚರ್ಚೆ ನಡೆಯಲಿ. ಇದಕ್ಕೂ ಮೊದಲು ವಿಧಾನಸಭೆಯಲ್ಲಿ ಚರ್ಚೆ ಮಾಡುವಂತೆ ಹೇಳಿದ್ದೆ. ಆದರೆ, ಅವರು ಬರಲಿಲ್ಲ. ಈಗಲೂ ಅದೇ ಸವಾಲನ್ನು ನವೀಕರಿಸುತ್ತೇನೆ. ವಿಧಾನಸಭೆಯಲ್ಲಿ ಚರ್ಚೆ ನಡೆದರೆ ಉತ್ತಮ. ಇಲ್ಲವೇ ಮಾಧ್ಯಮದವರು ಆಯೋಜಿಸಿದರೂ ನಡೆಯುತ್ತದೆ. ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಕುಟುಕಿದರು.

ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ನನಗೆ ಶಕ್ತಿ ತುಂಬಬೇಕು: ಡಿ.ಕೆ.ಶಿವಕುಮಾರ್

ಮಹಿಳೆಯರು ಹೊರಕ್ಕಿಳಿಯಬೇಕು: ಹೆಣ್ಣು ಮಕ್ಕಳು ತಿರುಗಿ ಬಿದ್ದ ಮೇಲೆ ಕುಮಾರಸ್ವಾಮಿ ಅವರಿಗೆ ಈಗ ಜ್ಞಾನೋದಯವಾಗಿದೆ. ನನ್ನ ವಿರುದ್ಧ ಟೀಕಿಸಿದ್ದಾರೆ. ಇರಲಿ ಅವರಿಗೂ ನನಗೂ ಇದ್ದಿದ್ದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಯನ್ನು ನಾವೆಲ್ಲರೂ ಖಂಡಿಸಬೇಕು. ನಾನು ಮಹಿಳಾ ಸಂಘಟನೆಗಳಿಗೆ ಕರೆ ಕೊಡುತ್ತೇನೆ. ನಿಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಪ್ರತಿಭಟನೆ ಮಾಡಿ, ಪ್ರತಿಯೊಂದು ತಾಲೂಕಿನಲ್ಲಿ ಹೋರಾಟ ಮಾಡಬೇಕು. ಒಂದು ಪಕ್ಷದ ಅಧ್ಯಕ್ಷನಾಗಿ ನಾನು ಈ ಕರೆ ಕೊಡುತ್ತಿದ್ದೇನೆ ಎಂದು ಮಹಿಳೆಯರನ್ನು ಹುರುದುಂಬಿಸಿದರು.

ಕುಮಾರಸ್ವಾಮಿಗೆ ಪಿಕ್​ ಪಾಕೆಟ್​ ಮಾಡಿ ರೂಢಿ ಇದೆ. ಅದಕ್ಕೆ ಗ್ಯಾರಂಟಿಗಳನ್ನು ಪಿಕ್​​ ಪಾಕೆಟ್​ ಎಂದು ಹೇಳಿದ್ದಾರೆ. ಕುಮಾರಸ್ವಾಮಿಯ ವಿಷಾದ ನಮಗೆ ಬೇಡ. ಕೊಲೆ ಮಾಡಿ ನಂತರ ವಿಷಾದ ಎಂದು ಹೇಳಿದರೆ ಹೇಗೆ? ಹಿಟ್​ ಆ್ಯಂಡ್​ ರನ್​ಗೆ ಕುಮಾರಸ್ವಾಮಿ ಬಹಳ ಫೇಮಸ್​ ಎಂದು ಕುಟುಕಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಬಗ್ಗೆ ಪೆಗ್‌ ಹಾಕಿಕೊಂಡು ಮಲಗಬೇಕಾಗುತ್ತದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂಜಯ ಪಾಟೀಲಗೆ ಈಗಾಗಲೇ ಉತ್ತರ ಸಿಕ್ಕಿದೆ. ಪೆಗ್ ಸಿಸ್ಟಂ ಅನ್ನು ಹೊಸ ಲೀಗಲ್ ಮ್ಯಾನುಫ್ಯಾಕ್ಚರ್ ಮಾಡಿಕೊಂಡಿದ್ದಾರೇನೋ. ಇಂತಹ ನೂರು ಜನ ಸಂಜಯ ಪಾಟೀಲರಂತವರನ್ನು ಅರಗಿಸಿಕೊಳ್ಳುವ ಶಕ್ತಿ ನಮ್ಮ ಮಂತ್ರಿಗಿದೆ ಎಂದರು.

Lok Sabha Elections 2024: ಕಾಂಗ್ರೆಸ್‌ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು?: ಎಚ್.ಡಿ.ದೇವೇಗೌಡ

ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಆಗುವುದಿಲ್ಲ. ಸರಳತೆ ಇರುವ ವ್ಯಕ್ತಿಗೆ ಟಿಕೆಟ್‌ ಕೊಟ್ಟಿದ್ದೇವೆ. ನಾವು ಗೆಲ್ಲುತ್ತೇವೆ. ಮಠಾಧೀಶರ ಆಶೀರ್ವಾದ ನಮಗೆ ಇರಲಿ. ಪಕ್ಷದ ಅಭ್ಯರ್ಥಿ ಈಗ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್‌ ಸರ್ಕಾರ ಪತನವಾಗುತ್ತದೆ ಎಂಬ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನನ್ನ ಲೆವೆಲ್‌ಗೆ ಯಾರಾದರೂ ಮಾತನಾಡಿದರೆ ಮಾತನಾಡುತ್ತೇನೆ. ನನಗೆ ಮ್ಯಾಚ್‌ ಆಗುವವರ ಹೇಳಿಕೆಗೆ ಮಾತ್ರ ಉತ್ತರಿಸುತ್ತೇನೆ ಎಂದರು.