ಕೆಲ್ಸ ಮಾಡಿದ್ರೆ, ಸೀರೆ, ಕುಕ್ಕರ್ ಕೊಟ್ಟು ಏಕೆ ಕೂಲಿ ಕೇಳ್ತಾವ್ರೆ: ಡಿಕೆಸು ವಿರುದ್ಧ ಮುನಿರತ್ನ ವಾಗ್ದಾಳಿ
ಬರಿಗೈಯಲ್ಲಿ ಬಂದು ಕೆಲಸ ಮಾಡಿ ಕೂಲಿ ಕೊಡಿ ಅಂತಾರೆ. ಆದರೆ, ಇಲ್ಲೊಬ್ರು ಸೀರೆ, ಕುಕ್ಕರ್ ಕೊಟ್ಟು ಕೂಲಿ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ವಿರುದ್ಧ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ರಾಮನಗರ (ಏ.05): ಬರಿಗೈಯಲ್ಲಿ ಬಂದು ಕೆಲಸ ಮಾಡಿ ಕೂಲಿ ಕೊಡಿ ಅಂತಾರೆ. ಆದರೆ, ಇಲ್ಲೊಬ್ರು ಸೀರೆ, ಕುಕ್ಕರ್ ಕೊಟ್ಟು ಕೂಲಿ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ವಿರುದ್ಧ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಬಿಜೆಪಿ - ಜೆಡಿಎಸ್ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಸದರಾಗಿ 10 ವರ್ಷ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಪಟ್ಟಿ ಬಿಡುಗಡೆ ಮಾಡಲಿ ಎಂದು ಸವಾಲೆಸೆದ ಅವರು, ಕೊರೋನಾ ಸಂದರ್ಭದಲ್ಲಿ ನಾನೇ ಹೆಣ ಮಣ್ಣು ಮಾಡಿದೆ ಅಂತಾರೆ. ಯಾರಾದರು ಮುಖ ತೆಗಿಸಿ ನೋಡಿದ್ದರಾ. ಆಗ ಜನರಿಗೆ ಏನಾದರು ಕೊಟ್ಟಿದ್ದರ ದಾಖಲೆ ಇದ್ದರೆ ಕೊಡಿ ಎಂದರು.
ವೈದ್ಯ ವೃತ್ತಿಯಲ್ಲಿ ಡಾ. ಮಂಜುನಾಥ್ ಅವರು ಲಕ್ಷಾಂತರ ಜನರಿಗೆ ಆಪರೇಷನ್ ಮಾಡಿದ್ದಾರೆ. ಆದರೀಗ ಇಬ್ಬರ ಹೃದಯ ಬಡಿತ ಜಾಸ್ತಿ ಆಗಿದೆ. ಹೆಂಗೋ ಕುಕ್ಕರ್, ತವ ಕೊಟ್ಟು ಗೆಲ್ಲುತ್ತಿದ್ದೆವು. ಈಗ ಡಾಕ್ಟರ್ ಬಂದು ವಕ್ಕರಿಸಿಕೊಂಡಿದ್ದಾರಂತ ಟೆನ್ಷನ್ ಆಗಿದೆ. ಮಂಜುನಾಥ್ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಅವರೆಂದೂ ದೇವೇಗೌಡ ಮತ್ತು ಕುಮಾರಸ್ವಾಮಿ ಹೆಸರೇಳಿಕೊಂಡು ಹುದ್ದೆ ಬಯಸಿದವರಲ್ಲ. ಅವರ ಮೇಲೆ ಒಂದು ಆರೋಪ ಮಾಡಿ ನೋಡೋಣ. ಮಂಜುನಾಥ್ಗೆ ವೋಟ್ ಮಾಡಿದರೆ ದೇವಾನು ದೇವತೆಗಳು ತಥಾಸ್ತು ಅಂತಾವೆ. ಅವರಿಗೆ ವೋಟ್ ಹಾಕದಿದ್ದರೆ ಯಮ ನರಕಕ್ಕೆ ಕಳುಹಿಸುತ್ತಾನೆ ಎಂದು ಹೇಳಿದರು.
ರಾಮನಗರ ಕ್ಷೇತ್ರ ಶಾಸಕರು ಗಂಡಸ್ತನ, ತಾಕತ್ತು ಇಲ್ವಾ ಅಂತಾರೆ. ಹೌದಪ್ಪ ನಿನಗೆ ಧಮ್ಮು, ದಾಖತ್ ಇರುವುದನ್ನು ಮತ ಪಡೆದು ತೋರಿಸಪ್ಪ ನೋಡೋಣ. ಮತದಾರರಿಗೆ 5 ಸಾವಿರ ರು. ಕಾರ್ಡ್ ಕೊಟ್ಟು ಆ ಮುಗ್ದ ಯುವಕನನ್ನು ಸೋಲಿಸಿದ್ದೀರಾ. ಆ ದೇವರು ನಿಮ್ಮ(ಜನರ)ನ್ನು ಕ್ಷಮಿಸಲ್ಲ. ನಿಖಿಲ್ಗೆ ಮಾಡಿದ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಮಂಜುನಾಥ್ ಅವರಿಗೆ ಮತ ಹಾಕಿ ಋಣ ಮುಕ್ತರಾಗಿ ಎಂದರು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮೆದಳು ಸ್ಯಾಟ್ ಲೈಟ್ ತರ ಇದ್ದಂತೆ. ಅವರಿಬ್ಬರು ಮಂಜುನಾಥ್ ಅವರನ್ನು ಹುಡುಕಿದರೆ ವಿನಃ ನಾವ್ಯಾರು ಅಲ್ಲ. ಅವರ ಸೇವೆ ಮೆಚ್ಚಿ, ದೇಶಕ್ಕೆ ಅಗತ್ಯವಿದೆ ಅಂತ ಕರೆದಿದ್ದಾರೆ ಎಂದು ಮುನಿರತ್ನ ಹೇಳಿದರು.
ಮೋದಿ ಆಡಳಿತದಿಂದ ಮಾತ್ರ ದೇಶಕ್ಕೆ ವಿಶ್ವಗುರು ಪಟ್ಟ ಸಾಧ್ಯ: ಬೊಮ್ಮಾಯಿ
ಜೈ ಕಾಂಗ್ರೆಸ್ ಎಂದ ಮುನಿರತ್ನ: ರಾಮನಗರ: ಘೋಷಣೆ ವೇಳೆ ರಾಜರಾಜೇಶ್ವರಿ ನಗರ ಕ್ಷೇತ್ರ ಬಿಜೆಪಿ ಶಾಸಕ ಮುನಿರತ್ನ ಜೈ ಕಾಂಗ್ರೆಸ್ ಎಂದು ಕೂಗಿದ ಪ್ರಸಂಗ ನಡೆಯಿತು. ನಗರದ ಚಾಮುಂಡೇಶ್ವರಿ ಸ್ಕಿಲ್ ಮಿಲ್ ಗ್ರೌಂಡ್ ನಲ್ಲಿ ಬಿಜೆಪಿ - ಜೆಡಿಎಸ್ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮುನಿರತ್ನರವರು ಭಾಷಣದುದ್ದಕ್ಕೂ ಕಾಂಗ್ರೆಸ್ ನಾಯಕರನ್ನು ಟೀಕಿಸಿದರು. ಭಾಷಣ ಮುಗಿಸಿ ಘೋಷಣೆ ಕೂಗುವ ವೇಳೆ ಬಾಯಿ ತಪ್ಪಿ ಜೈ ಕಾಂಗ್ರೆಸ್ ಎಂದು ಕೂಗಿ ಅಚ್ಚರಿ ಮೂಡಿಸಿದರು.