Asianet Suvarna News Asianet Suvarna News

Lok Sabha Election 2024: ದೇಶದಲ್ಲಿ ಧರ್ಮ-ಅಧರ್ಮಗಳ ನಡುವೆ ಚುನಾವಣೆ: ಸಚಿವ ಮುನಿಯಪ್ಪ

ದೇಶದಲ್ಲಿ ಧರ್ಮ-ಅಧರ್ಮಗಳ ನಡುವೆ ಲೋಕಸಭಾ ಚುನಾವಣೆ ನಡೆಯುತ್ತಿದೆ. ಒಂದು ಕಡೆ ಕಾರ್ಪೋರೇಟ್ ಕಂಪನಿಗಳನ್ನು ಉದ್ಧರಿಸುವ ಸರ್ಕಾರವಿದ್ದರೆ, ಮತ್ತೊಂದೆಡೆ ಸಮಾಜದಲ್ಲಿನ ಎಲ್ಲಾ ಜಾತಿ ವರ್ಗಗಳನ್ನು ಸಮಾನತೆಯಿಂದ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು.

Lok Sabha Election 2024 Minister KH Muniyappa Slams On BJP Party gvd
Author
First Published Apr 15, 2024, 5:28 PM IST

ವಿಜಯಪುರ (ಏ.15): ದೇಶದಲ್ಲಿ ಧರ್ಮ-ಅಧರ್ಮಗಳ ನಡುವೆ ಲೋಕಸಭಾ ಚುನಾವಣೆ ನಡೆಯುತ್ತಿದೆ. ಒಂದು ಕಡೆ ಕಾರ್ಪೋರೇಟ್ ಕಂಪನಿಗಳನ್ನು ಉದ್ಧರಿಸುವ ಸರ್ಕಾರವಿದ್ದರೆ, ಮತ್ತೊಂದೆಡೆ ಸಮಾಜದಲ್ಲಿನ ಎಲ್ಲಾ ಜಾತಿ ವರ್ಗಗಳನ್ನು ಸಮಾನತೆಯಿಂದ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎನ್ನುವ ಇಂಡಿಯಾ ಮೈತ್ರಿ ಕೂಟ ಸೆಣಸಾಡುತ್ತಿದ್ದು, ಅಂತಿಮವಾಗಿ ಧರ್ಮಕ್ಕೆ ಜಯ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಹೋಬಳಿಯ ಭಟ್ರೇನಹಳ್ಳಿಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬಿಜ್ಜವಾರ ಜಿಪಂ ವ್ಯಾಪ್ತಿ ಪಂಚಾಯಿತಿ ಮತದಾರರ ಬಳಿ ಚಿಕ್ಕಬಳ್ಳಾಪುರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಪರ ಮತಯಾಚಿಸಿ ಮಾತನಾಡಿದರು.

ಕಳೆದ ೧೦ ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ, ಬಡವರು, ಮಧ್ಯಮ ವರ್ಗದವರ ಏಳಿಗಾಗಿ ಏನೂ ಮಾಡಲಿಲ್ಲ. ಹಿಂದೆ ಯುಪಿಎ ಸರ್ಕಾರದಲ್ಲಿ ಮಾಡಿದ್ದ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಬಡವರಿಗೆ ಉಪಯೋಗವಾಗುವಂತಹ ಯಾವ ಕಾರ್ಯಕ್ರಮಗಳೂ ಮಾಡಲಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ನಿರುದ್ಯೋಗ ಸಮಸ್ಯೆ ಜಾಸ್ತಿ ಮಾಡಿದೆ. ಆದರೆ, ಈ ಬಾರಿ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರದ ಅಧಿಕಾರಕ್ಕೆ ಬಂದರೆ, ರೈತರ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಘೋಷಿಸಿದೆ. ಎಲ್ಲಾ ಬಡವರಿಗೆ ಶೇ.೫೦ ಮೀಸಲಾತಿ ನೀಡುವುದು, ೨೫ಕ್ಕೂ ಹೆಚ್ಚು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ರಾಜ್ಯ ಸರ್ಕಾರದ ೫ ಗ್ಯಾರಂಟಿಗಳನ್ನು ಜನರಿಗೆ ಮನವರಿಕೆ ಮಾಡಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ೨೫ ಸಾವಿರ ಮತಗಳ ಮುನ್ನಡೆ ಕೊಡಬೇಕು ಎಂದರು.

ಮೋದಿಗೆ ಅಧಿಕಾರ ಸಿಕ್ಕರೆ ರಾಜ್ಯದ ಪ್ರಗತಿ ಕುಂಠಿತ: ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಮಾತನಾಡಿ, ಯುವಕರಿಗೆ ಉದ್ಯೋಗ ನೀಡುವುದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡುವುದು, ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು ನಮ್ಮ ಬದ್ಧತೆಯಾಗಿದೆ. ನನ್ನ ವಿರುದ್ಧಗಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಯ ವಿರುದ್ಧ ಗೋಬ್ಯಾಕ್ ಘೋಷಣೆಗಳು ಕೇಳಿ ಬರುತ್ತಿವೆ. ರೈತರ ವಿರೋಧಿಯಾಗಿ ಕೇಂದ್ರದ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲನ್ನು ಕಂಡಾಗ ಸಾಕಷ್ಟು ಮಂದಿ ವೈದ್ಯರು, ನರ್ಸ್ಗಳು, ಸೇರಿದಂತೆ ಉದ್ಯಮಿಗಳು ಸಂಭ್ರಮಾಚರಣೆ ಮಾಡಿಕೊಂಡಿದ್ದಾರೆ. ಆದ್ದರಿಂದ ಕ್ಷೇತ್ರದಲ್ಲಿ ಜನರಲ್ಲಿ ಆಕ್ರೋಶವಿದೆ. ಬಡವರು, ಮಹಿಳೆಯರು, ಅಲ್ಪಸಂಖ್ಯಾತರ ಪರವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ಕೊಡಬೇಕು ಎಂದರು.

ಶೀಘ್ರದಲ್ಲೇ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ: ನಿಖಿಲ್ ಕುಮಾರಸ್ವಾಮಿ

ರಾಜ್ಯ ಉಸ್ತುವಾರಿ ಅಭಿಷೇಕ್ ದತ್ತಾ, ಹಿರಿಯ ಕಾಂಗ್ರೆಸ್ ಮುಖಂಡ ಮುನಿನರಸಿಂಹಯ್ಯ, ಬಯಪಾ ಅಧ್ಯಕ್ಷ ಶಾಂತಕುಮಾರ್, ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜಗನ್ನಾಥ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಾಜಣ್ಣ, ಕಾಂಗ್ರೆಸ್ ನಾಯಕಿ ಅನಂತಕುಮಾರಿಚಿನ್ನಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ನಾಗೇಶ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ, ಕೆಪಿಸಿಸಿ ಸದಸ್ಯ ಚಿನ್ನಪ್ಪ, ವಿಜಯಪುರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ವೀರೇಗೌಡ, ಚೈತ್ರಾವೀರೇಗೌಡ, ಸಿ.ಕೆ.ರಾಮಚಂದ್ರಪ್ಪ, ಕೆ.ಸಿ.ಮಂಜುನಾಥ್, ಲಕ್ಷ್ಮಣ್ ಗೌಡ, ಚಂದೇನಹಳ್ಳಿ ಮುನಿಯಪ್ಪ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾಜು, ಭಟ್ರೇನಹಳ್ಳಿ ನಾರಾಯಣಪ್ಪ, ಮುನಿಆಂಜಿನಪ್ಪ, ರಾಧಮ್ಮ, ಮಾಧವಿ, ವಿನೋದಮ್ಮ, ಅಕ್ಕಯಮ್ಮ, ಚಂದ್ರಪ್ಪ, ಹಾರೋಹಳ್ಳಿ ರಘು, ಕೃಷ್ಣಮೂರ್ತಿ, ಮುದುಗುರ್ಕಿ ಮೂರ್ತಿ, ಮಾರಪ್ಪ, ದೊಡ್ಡಸಾಗರಹಳ್ಳಿ ಶ್ರೀನಿವಾಸ್, ಪ್ರಕಾಶ್ ಹಾಜರಿದ್ದರು.

Follow Us:
Download App:
  • android
  • ios