ಕಳೆದ ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಇದೀಗ ಲೋಕಸಭೆ ಚುನಾವಣೆಯ ಫಲಿತಾಂಶವನ್ನು ಕೂಡಾ ತನ್ನ‌ ತೆಕ್ಕೆಗೆ ಸೆಳೆದುಕೊಳ್ಳಲು ರಣತಂತ್ರಗಳನ್ನು ರೂಪಿಸುತ್ತಿದೆ. 

ಭರತ್‌ ರಾಜ್ ಕಲ್ಲಡ್ಕ‌, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ 

Add Asianetnews Kannada as a Preferred SourcegooglePreferred

ಕಾರವಾರ(ಆ.12): ವಿಧಾನಸಭಾ ಚುನಾವಣೆಯಲ್ಲಿ ಕಾದಾಟ ನಡೆಸಿದ್ದ ಸರ್ವ ಪಕ್ಷಗಳು ಇದೀಗ ಲೋಕಸಭೆಯ ಚುನಾವಣೆಯನ್ನು ಎದುರಿಸಲು ಅಣಿಯಾಗುತ್ತಿವೆ. ಕಳೆದ ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಇದೀಗ ಲೋಕಸಭೆ ಚುನಾವಣೆಯ ಫಲಿತಾಂಶವನ್ನು ಕೂಡಾ ತನ್ನ‌ ತೆಕ್ಕೆಗೆ ಸೆಳೆದುಕೊಳ್ಳಲು ರಣತಂತ್ರಗಳನ್ನು ರೂಪಿಸುತ್ತಿದೆ. 

ಉತ್ತರಕನ್ನಡ ಜಿಲ್ಲೆಯಲ್ಲಿ ಈವರೆಗೂ ಬಿಜೆಪಿಯೇ ತನ್ನ ಬಾವುಟವನ್ನು ಹಾರಿಸಿದ್ದು, ಈ ಬಾರಿಯೂ ತನ್ನದೇ ಧ್ವಜ ಹಾರಿಸಬೇಕೆನ್ನುವುದು ಬಿಜೆಪಿಯ ಪ್ಪ್ಯಾನ್. ಸಂಸದರಾಗಿರುವ ಅನಂತ ಕುಮಾರ್ ಹೆಗಡೆ ಜಿಲ್ಲೆಯಲ್ಲಿ ಆರು ಬಾರಿ ಗೆದ್ದು ಒಂದು ಬಾರಿ ಮಾರ್ಗರೇಟ್ ಆಳ್ವ ಅವರ ವಿರುದ್ಧ ಸೋಲನ್ನು ಅನುಭವಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿ ಪಟ್ಟ ಅಲಂಕರಿಸಿದಾಗ ದಾಖಲೆಯ ಮತಗಳೊಂದಿಗೆ ಗೆದ್ದಿದ್ದ ಅನಂತ ಕುಮಾರ್ ಹೆಗಡೆಯವರು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮದ ರಾಜ್ಯ ಸಚಿವರಾಗಿದ್ದರು. ಆದರೆ, ಸಂಸದರ ನೇರ, ನಿಷ್ಠುರ ನುಡಿ ಹಾಗೂ ಇತರ ಕಾರಣಗಳಿಂದ ಕೇಂದ್ರ ಸಚಿವ ಸ್ಥಾನ‌ ಇತರರ ಪಾಲಾಗಿತ್ತು. ಇದರ ಬಳಿಕ ಸಂಸದ ಅನಂತ ಕುಮಾರ್ ಹೆಗಡೆ ಕೂಡಾ ಸಾಕಷ್ಟು ಸೈಲೆಂಟಾಗಿದ್ದದ್ದಲ್ಲದೇ, ಬಿಎಸ್‌ಎನ್ಎಲ್, ರಾಷ್ಟ್ರೀಯ ಹೆದ್ದಾರಿ ಹಾಗೂ ದಿಶಾ ಸಭೆಯಲ್ಲಿ ಹೊರತುಪಡಿಸಿ ಬೇರೆಲ್ಲೂ ಕಾಣುತ್ತಿರಲಿಲ್ಲ. ಅಲ್ಲದೇ, ಈ ಬಾರಿ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹಲವೆಡೆ ಭಾಷಣಗಳಲ್ಲಿ ಪರೋಕ್ಷವಾಗಿ ಕೂಡಾ ತಿಳಿಸಿದ್ದರು. ಇದರಿಂದಾಗಿ ಈ ಬಾರಿ ಲೋಕಸಭೆ ಚುನಾವಣೆಗೆ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಕಾಣಿಸಿಕೊಂಡಿದ್ದಾರೆ. 

ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡೇ ಮಾಡುತ್ತೇವೆ: ಸಚಿವ ಮಂಕಾಳ ವೈದ್ಯ

ಉತ್ತರಕನ್ನಡ ಜಿಲ್ಲೆ ಕೇಂದ್ರ ಬಿಜೆಪಿ ಪಾಲಿಗೆ ಭದ್ರ ಕೋಟೆಯಾಗಿರುವುದಲ್ಲದೇ, ಪ್ರಧಾನಿ ನರೇಂದ್ರ ಮೋದಿ ಹವಾ ಸಾಕಷ್ಟು ಇರೋದ್ರಿಂದ ಇಲ್ಲಿ ಬಿಜೆಪಿ ಪಾಳಯದಿಂದ ಯಾರು ನಿಂತರೂ ಗೆಲುವು ಪಕ್ಕಾ.‌ ಹೀಗಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಂಡಿದ್ದ ಬಿಜೆಪಿ ಅಭ್ಯರ್ಥಿಗಳು ಇದೀಗ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಾಗಿ ಮತ್ತೆ ತಮ್ಮ ಹಣೆ ಬರಹಗಳನ್ನು ತಿದ್ದಲು ಪ್ರಯತ್ನ ಮುಂದುವರಿಸಿದ್ದಾರೆ. 

ಬಿಜೆಪಿಯ ಮಾಜಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಸುನೀಲ್ ಹೆಗಡೆ, ರೂಪಾಲಿ ನಾಯ್ಕ್ ಪ್ರಸ್ತುತ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಕೇಂದ್ರದ ಪ್ರಮುಖರ ಜತೆ ಒಂದು ಹಂತದ ಮಾತುಕತೆಯೂ ನಡೆಸಿದ್ದಾರೆ. ಈ ಬಾರಿ ಅನಂತ‌ಕುಮಾರ್ ಹೆಗಡೆ ಎಂಟನೇ ಬಾರಿ ಸ್ಪರ್ಧಿಸದಿದ್ದಲ್ಲಿ ಬಿಜೆಪಿ ಪಾಳಯದಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆಯಲಿದೆ. ವಿಧಾನಸಭಾ ಚುನಾವಣೆಯಲ್ಲಿ ಈ ಮೂರು ಅಭ್ಯರ್ಥಿಗಳು ಕ್ರಮವಾಗಿ ಕಾಂಗ್ರೆಸ್‌ನ ಭೀಮಣ್ಣ ನಾಯ್ಕ್, ಆರ್.ವಿ.ದೇಶ್‌ಪಾಂಡೆ, ಅತೀ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು. 

ವಿಧಾನಸಭಾ ಚುನಾವಣೆಯಲ್ಲಿ ಮೋದಿ ಹವಾ ಹಾಗೂ ಭೇಟಿ ಅಭ್ಯರ್ಥಿಗಳ ಪಾಲಿಗೆ ಗೆಲುವು ತಂದು ಕೊಟ್ಟಿಲ್ಲವಾದ್ರೂ, ಲೋಕಸಭಾ ಚುನಾವಣೆಯಲ್ಲಿ ಜನರು ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಇಚ್ಛಿಸಿರುವುದರಿಂದ ಅನಂತ ಕುಮಾರ್ ಹೆಗಡೆ ಬದಲು ಮೋದಿ‌ ಹೆಸರಲ್ಲಿ ಯಾರು ಸ್ಪರ್ಧಿಸಿದರೂ ಗೆಲುವು ಖಂಡಿತ. ಈ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ಟಿಕೆಟ್‌ಗಾಗಿ ಪೈಪೋಟಿಯಲ್ಲಿದ್ದು, ಒಂದು ವೇಳೆ ಈ ಬಾರಿಯೂ ಸಂಸದ ಅನಂತ ಕುಮಾರ್ ಹೆಗಡೆಯವರೇ ಮತ್ತೆ ಚುನಾವಣೆಗೆ ನಿಲ್ಲಲು ನಿರ್ಧರಿಸಿದಲ್ಲಿ ಎಲ್ಲಾ ಟಿಕೆಟ್ ಆಕಾಂಕ್ಷಿಗಳು ಸೈಲೆಂಟಾಗುವುದು ಕೂಡಾ ಅಷ್ಟೇ ಸತ್ಯ. 

ಈ ಸಂಬಂಧ ಪ್ರತಿಕ್ರಯಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ್ ಅವರು=, ಯಾವುದೇ ಟಿಕೆಟ್ ವಿತರಣೆ ವಿಚಾರವೂ ಹೈಕಮಾಂಡ್ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.