Asianet Suvarna News Asianet Suvarna News

ಬಿಜೆಪಿಯಿಂದ ಲಿಂಗಾಯುತರ ರಕ್ಷಣೆ ಸಾಧ್ಯವಿಲ್ಲ- ಸಿದ್ದರಾಮಯ್ಯ

ಬಿಜೆಪಿಯವರು ಲಿಂಗಾಯತರನ್ನು ರಕ್ಷಣೆ ಮಾಡುತ್ತಾರೆ ಎಂಬುದು ಶುದ್ಧ ಸುಳ್ಳು, ವೀರಶೈವ ಲಿಂಗಾಯತರನ್ನು ತುಳಿಯಲು ಬಿ.ಎಲ್‌. ಸಂತೋಷ ತಂಡ ಕಾರ್ಯೋನ್ಮುಖವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Lingayat community cannot be protected by BJP says  Siddaramaiah at dharwad rav
Author
First Published Apr 30, 2023, 8:47 AM IST | Last Updated Apr 30, 2023, 8:47 AM IST

ಹರಪನಹಳ್ಳಿ (ಏ.30) : ಬಿಜೆಪಿಯವರು ಲಿಂಗಾಯತರನ್ನು ರಕ್ಷಣೆ ಮಾಡುತ್ತಾರೆ ಎಂಬುದು ಶುದ್ಧ ಸುಳ್ಳು, ವೀರಶೈವ ಲಿಂಗಾಯತರನ್ನು ತುಳಿಯಲು ಬಿ.ಎಲ್‌. ಸಂತೋಷ ತಂಡ ಕಾರ್ಯೋನ್ಮುಖವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪಟ್ಟಣದ ಎಚ್‌ಪಿಎಸ್‌ ಕಾಲೇಜು ಮೈದಾನದಲ್ಲಿ ಶನಿವಾರ ಕಾಂಗ್ರೆಸ್‌ ಅಭ್ಯರ್ಥಿ ಎನ್‌. ಕೊಟ್ರೇಶ್‌ ಅವರ ಪರ ಬಹಿರಂಗ ಸಭೆಯ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯಡಿಯೂರಪ್ಪ (BS Yadiyurappa)ಅವರಿಂದ ಎರಡು ವರ್ಷದಲ್ಲಿ ರಾಜೀನಾಮೆ ಕೊಡಿಸಿ ಕಣ್ಣೀರು ಹಾಕಿಸಿದರು. ಬಹಳಷ್ಟುವರ್ಷಗಳ ಕಾಲ ಬಿಜೆಪಿಯನ್ನು ಕಟ್ಟಿದ್ದ ಜಗದೀಶ ಶೆಟ್ಟರ್‌(Jagadish shettar), ಲಕ್ಷ್ಮಣ ಸವದಿ(Laxman savadi) ಅವರನ್ನು ಪಕ್ಷ ಬಿಡುವಂತೆ ಮಾಡಿದರು. ವೀರಶೈವ ಲಿಂಗಾಯಿತರಿಗೆ ಅಗೌರವ ತೋರಿಸಿದವರು ಬಿಜೆಪಿಯವರು. ಈ ರೀತಿ ವೀರಶೈವ ಲಿಂಗಾಯಿತರನ್ನು ತುಳಿಯಲು ಬಿ.ಎಲ್‌. ಸಂತೋಷ್‌ ತಂಡ ಕಾರ್ಯೋನ್ಮುಖವಾಗಿದೆ ಎಂದು ಅವರು ಹೇಳಿದರು.

ಅಧಿಕಾರವಿದ್ದಾಗ ಕೆಲಸ ಮಾಡದೆ ಮತ ಕೇಳಲು ಬಂದ ಆಂಜನೇಯ: ಶಾಸಕ ಎಂ ಚಂದ್ರಪ್ಪ ಟಾಂಗ್

ಬಿಜೆಪಿಯಲ್ಲಿ ಯಾರಿಗೂ ರಕ್ಷಣೆ ಇಲ್ಲ. ಬಿಜೆಪಿಯವರು ಜನರ ಆಶೀರ್ವಾದ ಪಡೆದುಕೊಂಡು ಅಧಿಕಾರಕ್ಕೆ ಬಂದಿಲ್ಲ. ಅಪರೇಷನ್‌ ಕಮಲದ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಈಗಿರುವ ಸರ್ಕಾರ ಅನೈತಿಕವಾದುದು. ಅವರಿಗೆ ಮತ ಕೇಳಲು ನೈತಿಕತೆ ಇಲ್ಲ. ಅಧಿಕಾರಕ್ಕೆ ಬಂದ ನಂತರ ಅವರು ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಶಾಸಕ ಮಾಡಾಳು ವಿರೂಪಾಕ್ಷಪ್ಪ ಜೈಲು ಸೇರಿದ್ದು, ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಮಾಡಿಕೊಂಡಿರುವುದು ಇವೆಲ್ಲ ಬಿಜೆಪಿ ಅತ್ಯಂತ ಭ್ರಷ್ಟಸರ್ಕಾರ ಇದೆ ಎನ್ನುವುದನ್ನು ತೋರಿಸುತ್ತದೆ. ಇವರದ್ದು ಅಲಿಬಾಬ್‌ ಮತ್ತು ನಲವತ್ತು ಕಳ್ಳರ ಸರ್ಕಾರವಾಗಿದೆ ಎಂದು ಬಿಜೆಪಿಯನ್ನು ಟೀಕಿಸಿದರು.

ವಿಧಾನಸೌಧಕ್ಕೆ ಹೋದರೆ ಗೊತ್ತಾಗುತ್ತದೆ ಅಲ್ಲಿಯ ಗೋಡೆಗಳು ಲಂಚ, ಲಂಚ ಲಂಚ ಎನ್ನುತ್ತಿವೆ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ, ನರೇಂದ್ರ ಮೋದಿ ಹೇಳಿದಂತೆ ಯಾವುದೂ ಮಾಡಿಲ್ಲ, ಆದ್ದರಿಂದ ಶೇ. 40ರಷ್ಟುಕಮಿಷನ್‌ನ ಬಿಜೆಪಿ ಸರ್ಕಾರವನ್ನು ತೊಲಗಿಸಿ ಎಂದರು.

ಎಂ.ಪಿ. ಲತಾ ಉಚ್ಚಾಟಿಸುವೆವು:

ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರಿಗೆ ಕೊಟ್ರೇಶ ಪರವಾಗಿ ಕೆಲಸ ಮಾಡಿ, ಮುಂದೆ ಸಹಾಯ ಮಾಡುವುದಾಗಿ ಹೇಳಿದ್ದೆ. ಆದರೆ ಜನರು ನಿಂತುಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಿ ನಿಂತುಕೊಂಡಿದ್ದಾರೆ. ನಾನು ಹೇಳಿ ನಿಲ್ಲಿಸಿದ್ದೇನೆ ಎನ್ನುವುದು ಶುದ್ಧ ಸುಳ್ಳಾಗಿದೆ. ಈಗಲಾದರೂ ಕಣದಿಂದ ನಿವೃತ್ತಿಯಾಗಿ ಕೊಟ್ರೇಶ್‌ ಅವರಿಗೆ ಬೆಂಬಲಿಸಲಿ. ಪಕ್ಷದ ವಿರುದ್ಧ ಸ್ಪರ್ಧಿಸಿರುವ ಎಂ.ಪಿ. ಲತಾ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟನೆ ಮಾಡಲಾಗುವುದು ಎಂದು ಅವರು ಹೇಳಿದರು.

ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಮಾತನಾಡಿ, ಕೈಗೆ ಸಿಗದಿರುವ ಬಿಜೆಪಿ ಶಾಸಕರಿಗೆ ಇನ್ನೊಮ್ಮೆ ಹರಪನಹಳ್ಳಿ ಕಡೆ ತಲೆಹಾಕದಂತೆ ನೋಡಿಕೊಳ್ಳಿ ಎಂದರು. ಕಾಂಗ್ರೆಸ್‌ ಅಭ್ಯರ್ಥಿ ಎನ್‌. ಕೊಟ್ರೇಶ್‌ ಮತಯಾಚಿಸಿ ಮಾತನಾಡಿ, ಹರಪನಹಳ್ಳಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಈ ಭಾಗದಲ್ಲಿ ಕೃಷಿ ಕೂಲಿಕಾರರು ಹೆಚ್ಚಿದ್ದಾರೆ. ಹೀಗಾಗಿ ಇದು ನೀರಾವರಿ ಪ್ರದೇಶವಾಗಬೇಕಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನನಗೆ ಮತ ನೀಡಿ ಎಂದು ಕೋರಿದರು.

ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ : ಪ್ರಲ್ಹಾದ್ ಜೋಶಿ ವಿಶ್ವಾಸ

ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌, ಪ್ರಕಾಶ ರಾಠೋಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಲೂರು ಅಂಜಪ್ಪ, ಎಸ್‌. ಮಂಜುನಾಥ, ಪ್ರೇಮಕುಮಾರ, ಮುಖಂಡರಾದ ಡಿ. ಬಸವರಾಜ, ಪಿ.ಟಿ. ಭರತ, ಎಚ್‌.ಕೆ. ಹಾಲೇಶ್‌, ಎಂ. ರಾಜಶೇಖರ, ಶಶಿಧರ ಪೂಜಾರ, ಪಿ.ಎಲ್‌. ಪೋಮ್ಯನಾಯ್ಕ, ಎಚ್‌.ಬಿ.ಪರಶುರಾಮಪ್ಪ, ಅಂಬಾಡಿ ನಾಗರಾಜ, ಮುತ್ತಿಗಿ ಜಂಬಣ್ಣ, ಎಂ.ಟಿ. ಸುಭಾಶ್ಚಂದ್ರ, ರಾಜಶೇಖರ ಸವಣೂರು, ಬಿ. ನಜೀರ ಆಹ್ಮದ್‌, ವಕೀಲರಾದ ಜಿ. ಪ್ರಕಾಶ, ಹಲಗೇರಿ ಮಂಜುನಾಥ, ಹನುಮಂತಪ್ಪ ಇದ್ದರು.

Latest Videos
Follow Us:
Download App:
  • android
  • ios