ದಲಿತ ನಾಯಕ ಖರ್ಗೆ ಸಿಎಂ ಎಂದು ಸಿದ್ದರಾಮಯ್ಯ ಘೋಷಿಸಲಿ: ಎನ್.ಮಹೇಶ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸವಾಲು ಹಾಕಿದ ಶಾಸಕ ಎನ್.ಮಹೇಶ
ಜಮಖಂಡಿ(ಜು.28): ಸಿಎಂ ಆಗುವ ಭ್ರಮೆಯಲ್ಲಿ ಆಚರಣೆ ಮಾಡಿಕೊಳ್ಳುತ್ತಿರುವ ಸಿದ್ದರಾಮೋತ್ಸವದ ವೇದಿಕೆಯಲ್ಲಿ ದಲಿತ ನಾಯಕ ಮಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡುತ್ತೇವೆಂದು ಸಿದ್ದರಾಮಯ್ಯ ಘೋಷಣೆ ಮಾಡಲಿ ನೋಡೋಣ ಎಂದು ಕೊಳ್ಳೆಗಾಲ ಶಾಸಕ ಎನ್.ಮಹೇಶ ಸವಾಲು ಹಾಕಿದರು. ಇಲ್ಲಿನ ಬಸವಭವನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಎಸ್ಸಿ ಮೋರ್ಚಾ ಕಾರ್ಯಕರ್ತರ ಹಾಗೂ ಮುಖಂಡರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸುತ್ತಾರೆ ಎಂಬಂತೆ ಸಿಎಂ ಕುರ್ಚಿಗೆ ಐದಾರು ಜನ ಈಗಿನಿಂದಲೇ ಟವೆಲ್ ಹಾಕಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಭ್ರಮೆಯಲ್ಲಿದ್ದು, ಕಾಂಗ್ರೆಸ್ ದಲಿತಪರ ಪಕ್ಷವೆಂದು ಬಿಂಬಿಸಿ ದಲಿತ ನಾಯಕರಿಗೆ ಅವಕಾಶ ನೀಡದೇ ದಲಿತ ಸಮುದಾಯದಕ್ಕೆ ದ್ರೋಹ ಮಾಡುತ್ತಿದ್ದಾರೆ. ದಲಿತ ವಿರೋಧಿ ಕಾಂಗ್ರೆಸ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಂತ್ಯಸಂಸ್ಕಾರಕ್ಕೆ ಆರು ಅಡಿ ಜಾಗ ನೀಡದೇ ಸಂವಿಧಾನ ಶಿಲ್ಪಿಗೆ ದ್ರೋಹ ಮಾಡಿದ ದಲಿತರ ವಿರೋಧಿ ಪಕ್ಷವಾಗಿದೆ ಎಂದರು.
ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ದ್ರೋಹ ಮಾಡಿರುವ ಬಗ್ಗೆ ದಲಿತ ಸಮುದಾಯಕ್ಕೆ ತಿಳಿದಿದೆ. ದಲಿತರ ನಡೆ ಬಿಜೆಪಿ ಕಡೆಗೆ ಆರಂಭಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಿಂದುಳಿದ ಮತ್ತು ದಲಿತ ಸಮುದಾಯಕ್ಕೆ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಿಜೆಪಿ ಸ್ವಾವಲಂಬಿಗಳಾಗುವ ಅವಕಾಶವನ್ನು ದಲಿತರಿಗೆ ನೀಡುತ್ತಿದೆ. ಸಿದ್ದರಾಮಯ್ಯನವರು ಪಕ್ಷದಿಂದ ಪಕ್ಷಕ್ಕೆ ಹಾರಿ ಹೊಟ್ಟೆಪಾಡಿಗೆ ರಾಜಕಾರಣ ಮಾಡಿಕೊಂಡಿದ್ದಾರೆ. ಈಗ ಕಾಲ ಬದಲಾಗಿದೆ. ದಲಿತರು ಬಿಜೆಪಿ ಸೇರುತ್ತಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಕಾಂಗ್ರೆಸ್ನಲ್ಲಿ ಸಿಎಂ ಚರ್ಚೆ ನಡುವೆಯೇ ಖರ್ಗೆ-ಪರಂ ದೀರ್ಘ ಸಭೆ: ಸಸ್ಪೆನ್ಸ್ ಭೇಟಿ
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿದರು. ಜಿ.ಎಸ್.ನ್ಯಾಮಗೌಡರ, ಅಮರಾಯ ಅಷ್ಟಗಿ, ಗೀತಾ ಕೂಗನೂರ, ಮನು ಸಿದ್ದಾರ್ಥ, ಈಶಪ್ಪ ಹಿರೇಮನಿ, ಪ್ರಕಾಶ ಕಾಳೆ, ಅಜಯ ಕಡಪಟ್ಟಿ, ಮಹಾದೇವ ನ್ಯಾಮಗೌಡ, ವಿಜಯಲಕ್ಷಿ ಉಕಮನಾಳ, ಡಾ.ವಿಜಯಲಕ್ಷ್ಮಿ ತುಂಗಳ, ಪ್ರಕಾಶ ಹುಗ್ಗೆನ್ನವರ, ರಮೇಶ ಆಲಬಾಳ, ಶಿವಾನಂದ ತವಲಿ, ಯಲ್ಲಪ್ಪ ನಾರಾಯಣ, ಯಲ್ಲಪ್ಪ ಬೆಂಡಿಗೇರಿ, ಶಶಿಧರ ದೊಡಮನಿ, ಈಶ್ವರ ಆದೆಪ್ಪ ನ್ನವರ ವೇದಿಕೆಯಲ್ಲಿ ಇದ್ದರು.
ಇದೇ ಸಂದರ್ಭದಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದ 150 ಕ್ಕೂ ಹೆಚ್ಚು ಜನರು ಬಿಜೆಪಿ ಪಕ್ಷಕ್ಕೆ ಸೇರ್ಪೆಡೆಗೊಂಡರು. ಮಲ್ಲು ಹುದಗಿ ದೇಶಭಕ್ತಿ ಗೀತೆ ಹಾಡಿದರು. ಯಮನೂರ ಮೂಲಂಗಿ ಸ್ವಾಗತಿಸಿದರು. ರಾಜು ಕಲಾದಗಿ ವಂದಿಸಿದರು.
ಕಾಂಗ್ರೆಸ್ ಪಕ್ಷ ಸುಡುವ ಮನೆ: ಚಲವಾದಿ ನಾರಾಯಣಸ್ವಾಮಿ
ತಮ್ಮ ಜೀವಿತಾವಧಿಯಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾಂಗ್ರೆಸ್ ಪಕ್ಷ ಸುಡುವ ಮನೆಯಾಗಿದ್ದು, ಅಲ್ಲಿ ದಲಿತರಿಗೆ ಭವಿಷ್ಯವಿಲ್ಲ. ದಲಿತರು ಕಾಂಗ್ರೆಸ್ ಪಕ್ಷಕ್ಕೆ ಹೋದರೆ ಅದು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಹತ್ತಾರು ಬಾರಿ ಹೇಳಿದ್ದಾರೆ. ಅಂಬೇಡ್ಕರ ಅವರು ಹೇಳಿರುವ ಈ ಮಾತುಗಳನ್ನು ನಾವು ನೆನಪಿನಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ಹೇಳಿದರು.
ಇಲ್ಲಿನ ಸರ್ಕಾರಿ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ ಪೂರ್ವದಲ್ಲಿ ಸ್ವಾತಂತ್ರಕ್ಕಾಗಿ ಕಾಂಗ್ರೆಸ್ ಎಂಬುದು ಒಂದು ಸಂಘಟನೆ ಮಾತ್ರವಾಗಿತ್ತು. ಸ್ವಾತಂತ್ರ್ಯಾ ನಂತರ ಸ್ವತಃ ಗಾಂಧೀಜಿಯವರೇ ಕಾಂಗ್ರೆಸ್ ವಿಸರ್ಜಿಸಿ, ಅನ್ಯ ಹೆಸರಿನಿಂದ ರಾಜಕೀಯ ಪಕ್ಷ ಮಾಡಿಕೊಳ್ಳಬೇಕೆಂದು ಹೇಳಿದ್ದರೂ ನೆಹರು ಅವರು ಅದನ್ನು ಮನ್ನಿಸದೇ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಎಂಬ ಬ್ರಾಂಡ್ನೇಮ್ ಅನ್ನು ಬಳಸಿಕೊಂಡರು. ಅದರ ಫಲವಾಗಿಯೇ ಇಂದಿನವರೆಗೂ ಕಾಂಗ್ರೆಸ್ ಪಕ್ಷ ನೆಹರೂ-ಗಾಂಧಿ ಕುಟುಂಬಸ್ಥರ ಮುಂದಾಳತ್ವಕ್ಕೆ ಮಾತ್ರ ಸೀಮಿತವಾಗಿದೆ ಎಂದರು.
ಕಾಂಗ್ರೆಸ್ನಲ್ಲಿ ಸಿಎಂ ರೇಸ್ ಕಾಳಗ, ಡಿಕೆಶಿ ಎಚ್ಚರಿಕೆ ಬಳಿಕ ಮತ್ತೋರ್ವ ಹಿರಿಯ ನಾಯಕ ಎಂಟ್ರಿ!
ಸಿದ್ದರಾಮಯ್ಯ ಗೆಲ್ಲುವಂಥ ಒಂದೂ ಕ್ಷೇತ್ರ ರಾಜ್ಯದಲ್ಲಿ ಇಲ್ಲ. ಅವರಲ್ಲಿ ಗೆಲ್ಲುವ ಶಕ್ತಿ ಕೂಡ ಇಲ್ಲ. ಅವರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತಕ್ಷೇತ್ರ ಪ್ರತಿನಿಧಿಗಳ ಬಲದಿಂದ ಗೆಲವು ಸಾಧಿಸುತ್ತಿದ್ದಾರೆ ಹೊರತು ತಮ್ಮ ಸ್ವಂತ ಶಕ್ತಿಯಿಂದ ಗೆಲ್ಲಲು ಅವರಿಗೆ ಸಾಧ್ಯವಿಲ್ಲ. ಬಿಜೆಪಿ ದಲಿತರನ್ನು ರಬ್ಬರ್ಸ್ಟಾಂಪ್ ರೀತಿ ಬಳಸಿಲ್ಲ. ಬದಲಿಗೆ ಸಿದ್ದರಾಮಯ್ಯನವರೇ ದಲಿತರನ್ನು ರಬ್ಬರ್ಸ್ಟ್ಯಾಂಪ್ ರೀತಿಯಲ್ಲಿ ಬಳಸಿಕೊಂಡಿದ್ದಾರೆ ಎಂದು ದೂರಿದರು.
ದೇಶದಲ್ಲಿ ಕಾಂಗ್ರೆಸ್ ನಿರ್ನಾಮದ ದಾರಿಯಲ್ಲಿದೆ. ಕರ್ನಾಟಕದಲ್ಲಿಯೂ ತನ್ನ ಮೌಲ್ಯ ಕಳೆದುಕೊಂಡಿದೆ. ಡಾ.ಅಂಬೇಡ್ಕರ್ ಬರೆದ ಸಂವಿಧಾನದಿಂದ ನನಗೆ ಈ ಪುಣ್ಯಭೂಮಿಯಲ್ಲಿ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಅರ್ಥಪೂರ್ಣವಾಗಿದೆ ಎಂದರು.
ಗೋಷ್ಠಿಯಲ್ಲಿ ಕೊಳ್ಳೆಗಾಲ ಮತಕ್ಷೇತ್ರದ ಶಾಸಕ ಎನ್.ಮಹೇಶ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ರಾಜ್ಯ ಉಪಾಧ್ಯಕ್ಷ ಈಶಪ್ಪ ಹೀರೆಮನಿ, ಡಾ.ಅಮರಾಯಿ ಅಷ್ಟಗಿ, ಮಹೇಂದ್ರ ಕೋತಾಳ, ಮನು ಸಿದ್ದಾರ್ಥ, ಗೀತಾ ಕುಗನೂರ, ಪ್ರಕಾಶ ಕಾಳೆ, ಸಿ.ಟಿ.ಉಪಾಧ್ಯೆ, ಈಶ್ವರ ಆದೆಪ್ಪನವರ, ಡಾ.ವಿಜಯಲಕ್ಷ್ಮಿ ತುಂಗಳ, ವಿಜಯಲಕ್ಷ್ಮಿ ಉಕಮನಾಳ, ಮಹಾದೇವ ನ್ಯಾಮಗೌಡರ, ಅಜಯ ಕಡಪಟ್ಟಿ, ರಮೇಶ ಆಲಬಾಳ ಇದ್ದರು.