ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಡೆ ಚುನಾವಣೆ ಆಗಿರುವುದರಿಂದ ಕುರುಬ ಹಾಗೂ ಹಿಂದುಳಿದ ಸಮುದಾಯ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಮತ ಹಾಕುವ ಮೂಲಕ ಕ್ಷೇತ್ರದಲ್ಲಿ ಪಿ.ಎಂ ನರೇಂದ್ರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. 

ಮಳವಳ್ಳಿ (ಏ.02): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಡೆ ಚುನಾವಣೆ ಆಗಿರುವುದರಿಂದ ಕುರುಬ ಹಾಗೂ ಹಿಂದುಳಿದ ಸಮುದಾಯ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಮತ ಹಾಕುವ ಮೂಲಕ ಕ್ಷೇತ್ರದಲ್ಲಿ ಪಿ.ಎಂ ನರೇಂದ್ರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ತಾಲೂಕಿನ ಬೋಸೇಗೌಡನದೊಡ್ಡಿ ಗ್ರಾಮದ ಹೊರವಲಯದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಭ್ರಷ್ಟಚಾರ ರಹಿತ ಆಡಳಿತ ನಡೆಸಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ. ನುಡಿದಂತೆ ನಡೆದು ಬಡವರ ಹಸಿವನ್ನು ನಿವಾರಿಸಿದ ಕಾಂಗ್ರೆಸ್‌ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದ ವೇಳೆ ಎಲ್ಲಾ ಸಮುದಾಯದ ಅಭಿವೃದ್ದಿಗೆ ಹಲವು ಯೋಜನೆಗಳನ್ನು ಕೊಟ್ಟಿದೆ. ಕಾರ್ಯಕರ್ತರು ಧೈರ್ಯದಿಂದ ಮನೆ ಮನೆಗೆ ಹೋಗಿ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ತಿಳಿಸಿ ಮುಂದಿನ ಅಧಿಕಾರ ಅವಧಿಯಲ್ಲಿ ಕೊಟ್ಟಿರುವ ಭರವಸೆಗಳನ್ನು ತಿಳಿಸುವುದರ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಮತಹಾಕುವಂತೆ ಮನವೊಲಿಸಬೇಕೆಂದು ಸಲಹೆ ನೀಡಿದರು. ಹಿಂದುಳಿದ ಸಮುದಾಯದ ರಾಜಕಾರಣಿಗಳನ್ನು ತುಳಿಯುವ ಯತ್ನ ನಡೆಯುತ್ತಿದೆ. ಸಮುದಾಯ ಒಂದು ಶಕ್ತಿಯಾಗಿ ಒಗ್ಗಟ್ಟಾಗಿ ನಿಂತರೇ ವಿರೋಧಿಗಳನ್ನು ಮಟ್ಟಹಾಕಬಹುದು. ಮೀಸಲಾತಿಯಲ್ಲಿ ಅನ್ಯಾಯವಾದಾಗ ಧ್ವನಿ ಎತ್ತುವ ನಾಯಕನನ್ನು ಬೆಂಬಲಿಸಬೇಕಿದೆ. ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಗೆಲ್ಲಿಸುವುದರ ಮೂಲಕ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಬೇಕಿದೆ ಎಂದರು.

ಶಾಸಕ ರಾಮಣ್ಣ ಲಮಾಣಿಗೆ ಟಿಕೆಟ್‌ ನೀಡುವುದಕ್ಕೆ ಬಿಜೆಪಿ ಮುಖಂಡರ ವಿರೋಧ

ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, 10 ವರ್ಷದ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ತಂದು ಕ್ಷೇತ್ರವನ್ನು ಮಾದರಿ ತಾಸೂಕಿನ್ನಾಗಿ ಮಾಡಲು ಕನಸು ಕಂಡಿದ್ದೆ. ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಜನಮನ ಸೇರಬೇಕಾದ ಯೋಜನೆಗಳು ಸತ್ತು ಬಿದ್ದಿವೆ. ಜವಾಬ್ದಾರಿ ತೆಗೆದುಕೊಳ್ಳುವವರ ನಿರ್ಲಕ್ಷ್ಯತೆಯಿಂದಾಗಿ ಕ್ಷೇತ್ರ ಅಭಿವೃದ್ದಿಯಲ್ಲಿ ಹಿನ್ನಡೆ ಕಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಬಿ.ಎಸ್‌.ಶಿವಣ್ಣ ಮಾತನಾಡಿ, 2008ರಲ್ಲಿ ಪಿ.ಎಂ.ನರೇಂದ್ರಸ್ವಾಮಿ ಟಿಕೆಚ್‌ ತಪ್ಪಿದ ವೇಳೆ ನಿಮ್ಮೆಲ್ಲರೂ ಸಂಕಲ್ಪ ಮಾಡಿ ಅವರನ್ನು ಗೆಲ್ಲಿಸಿದ ರೀತಿಯಲ್ಲಿ ಮತ್ತೆ ಒಗ್ಗಟ್ಟಿನಿಂದ ಈ ಬಾರಿಯೂ ಗೆಲ್ಲಿಸಬೇಕು. 2023ರ ಮೇ 15 ರಂದು ಮತ್ತೆ ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ ಎಂದು ಹೇಳಿದರು.

ನನ್ನ ಅಭಿವೃದ್ಧಿ ನೋಡಿ ಮತ್ತೊಮ್ಮೆ ನನಗೆ ಆಶೀರ್ವದಿಸಿ: ಶಾಸಕ ಹರ್ಷವರ್ಧನ್‌

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸುಬ್ರಮ್ಮಣಿ, ಉಪಾಧ್ಯಕ್ಷ ಬಿ.ಪುಟ್ಟಬಸವಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್‌.ಸುರೇಶ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಕೆಪಿಸಿಸಿ ಸದಸ್ಯ ಚನ್ನಪಿಳ್ಳೆಕೊಪ್ಪಲು ಸಿದ್ದೇಗೌಡ, ತಾಪಂ ಮಾಜಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಬಂಕ್‌ ಮಾದೇವ್‌, ಸವಿತಾ ಶಂಕರ್‌ ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.