Asianet Suvarna News Asianet Suvarna News

Assembly election: ಭವಾನಿ ರೇವಣ್ಣರಿಗೆ ಟಿಕೆಟ್‌ ನಿರಾಕರಿಸಲು ರೇವಣ್ಣ, ಕುಮಾರಸ್ವಾಮಿಗೆ ಅಧಿಕಾರವಿಲ್ಲ: ಪ್ರಜ್ವಲ್‌ ರೇವಣ್ಣ

ಹಾಸನದಿಂದ ಭವಾನಿ ರೇವಣ್ಣ ಅವರು ಸ್ಪರ್ಧೆ ಮಾಡುವ ವಿಚಾರವಾಗಿ ರೇವಣ್ಣ ಅವರಾಗಲೀ ಅಥವಾ ಕುಮಾರಸ್ವಾಮಿ ಅವರಾಗಲೀ ನಿರ್ಧಾರ ಮಾಡಲು ಸಾಧ್ಯವಿಲ್ಲ. ರಾಜ್ಯದ ಯಾವುದೇ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾದರೂ ಅವರನ್ನು ದೇವೇಗೌಡರೇ ನಿರ್ಧರಿಸಬೇಕು.

Kumaraswamy and Revanna has no authority to deny tickets to Bhavani Prajwal Revanna sat
Author
First Published Jan 24, 2023, 3:49 PM IST

ಕೊಡಗು (ಜ.24): ಹಾಸನದಿಂದ ಭವಾನಿ ರೇವಣ್ಣ ಅವರು ಸ್ಪರ್ಧೆ ಮಾಡುವ ವಿಚಾರವಾಗಿ ರೇವಣ್ಣ ಅವರಾಗಲೀ ಅಥವಾ ಕುಮಾರಸ್ವಾಮಿ ಅವರಾಗಲೀ ನಿರ್ಧಾರ ಮಾಡಲು ಸಾಧ್ಯವಿಲ್ಲ. ರಾಜ್ಯದ ಯಾವುದೇ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾದರೂ ಅವರನ್ನು ದೇವೇಗೌಡರೇ ನಿರ್ಧರಿಸಬೇಕು ಎಂದು ಸಂಸದ ಪ್ರಜ್ವಲ್‌ ರೇವಣ್ಣ ತಿಳಿಸಿದ್ದಾರೆ.

ಕೊಡಗಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಜ್ವಲ್‌ ರೇವಣ್ಣ ಅವರು, ಭವಾನಿ ರೇವಣ್ಣ ಹಾಸನದಿಂದ ಜೆಡಿಎಸ್ ಅಭ್ಯರ್ಥಿ ಆಗುವ ವಿಚಾರ ದೊಡ್ಡವರಿಗೆ ಬಿಟ್ಟದ್ದಾಗಿದೆ. ಅದನ್ನು ರೇವಣ್ಣ ಅವರಾಗಲಿ, ಇಲ್ಲ ಕುಮಾರಸ್ವಾಮಿ ಅವರಾಗಲಿ ನಿರ್ಧರಿಸುವುದಕ್ಕೆ ಆಗಲ್ಲ. ಯಾವುದೇ ಕ್ಷೇತ್ರದ ಅಭ್ಯರ್ಥಿಯಾದರೂ ದೇವೇಗೌಡರು ನಿರ್ಧರಿಸಬೇಕು. ಅದು ದೇವೇಗೌಡರಿಗೆ ಅಂತ ಇಟ್ಟಂತ ಕ್ಷೇತ್ರವಾಗಿದೆ. ನಾನೂ ಕೂಡ ಹಾಸನದಿಂದ ಸಂಸದ ಆಗಬೇಕೆಂದು ಬಯಸಿರಲಿಲ್ಲ. ನಾನು ಎಂಎಲ್‌ಎ ಕ್ಷೇತ್ರವನ್ನು ಮಾತ್ರ ಕೇಳಿದ್ದೆನು. ಆದರೆ, ದೇವೇಗೌಡರೇ ಸಂಸದ (ಮೆಂಬರ್‌ ಆಫ್‌ ಪಾರ್ಲಿಮೆಂಟ್‌) ಆಗು ಅಂತ ಹೇಳಿದ್ದರು ಎಂದು ತಿಳಿಸಿದರು.

Assembly election: ಬಿಜೆಪಿ ಆಪರೇಷನ್‌ಗೆ ಯಾರೇ ಹೋದರೂ ಜೆಡಿಎಸ್‌ಗೆ ಸಮಸ್ಯೆಯಿಲ್ಲ: ಕುಮಾರಸ್ವಾಮಿ

ಸಂಸದ ಆಗುವಂತೆ ದೇವೇಗೌಡರೇ ಸೂಚಿಸಿದ್ದರು: ಮನೆಯಲ್ಲಿ ಈ ಹಿಂದೆ ದೇವೇಗೌಡರು ಹಾಸನದ ಎಂಪಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಸೂಚಿಸಿದ್ದರು. ಹೀಗಾಗಿ ನಾನು ಹಾಸನದಲ್ಲಿ ಸ್ಪರ್ಧಿಸಿದೆನು. ಈ ಬಾರಿಯೂ ಹಾಸನದಲ್ಲಿ ಎಂಎಲ್‌ಎ ಕ್ಷೇತ್ರಕ್ಕೂ ಯಾರು ಅಭ್ಯರ್ಥಿ ಆಗಬೇಕು ಎಂಬುದನ್ನು ದೇವೇಗೌಡರೇ ನಿರ್ಧರಿಸಲಿದ್ದಾರೆ. ಇದರಲ್ಲಿ ರೇವಣ್ಣ ಅವರಾಗಲೀ ಅಥವಾ ಕುಮಾರಸ್ವಾಮಿ ಅವರ ನಿರ್ಧಾರ ಮಾಡಲು ಸಾಧ್ಯವಿಲ್ಲ. ಹೀಗಾಗಿ ದೇವೇಗೌಡರು ಏನು ನಿರ್ಧರಿಸುತ್ತಾರೋ ಹಾಗೆ ಆಗುತ್ತದೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಮಾಹಿತಿ ನೀಡಿದರು.

ಹಾಸನ ಸ್ಪರ್ಧೆ ಬಗ್ಗೆ ಭವಾನಿ ರೇವಣ್ಣ ಹೇಳಿದ್ದೇನು.?
ಹಾಸನ ತಾಲ್ಲೂಕಿನ, ಸಾಲಗಾಮೆ ಹೋಬಳಿ, ಕಕ್ಕೇನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಭವಾನಿ ರೇವಣ್ಣ ಅವರು, ಕಳೆದ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ಬಿಜೆಪಿ ಕ್ಷೇತ್ರವಾಗಿ ಕೆಲವು ಕೆಲಸ, ಕಾರ್ಯಗಳು ಉಳಿದುಕೊಂಡಿವೆ. ಈ ಬಾರಿ ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಎಲ್ಲರೂ ಕೂಡ ಮಾತನಾಡಿಕೊಂಡು, ನಿರ್ಣಯ ತೆಗೊಂಡಿದ್ದಾರೆ. ಹಾಗಾಗಿ, ಇನ್ನು ಸ್ವಲ್ಪ ದಿವಸದಲ್ಲೇ ನಮ್ಮ ಹೆಸರು ಕೂಡ ಘೋಷಣೆ ಮಾಡುತ್ತಾರೆ. ಆದ್ದರಿಂದ ಗ್ರಾಮಗಳಲ್ಲಿನ ಜನರು ಹಾಗೂ ಹಳ್ಳಿಗಳ ಪರಿಚಯ ಇದ್ದರೆ ನನಗೂ ಕೂಡ ಒಳ್ಳೆಯದು. ಮುಂದಿನ ದಿನಗಳಲ್ಲಿ ಕೆಲಸ ಮಾಡಲು ಭಗವಂತ ಆಶೀರ್ವಾದ ಮಾಡಲಿ ಎಂದು ಭಗವಂತನಲ್ಲಿ ಬೇಡಿಕೊಂಡಿದ್ದೇನೆ ಎಂದು ತಿಳಿಸಿದ್ದರು. ಈ ಮೂಲಕ ತಮಗೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಸಿಕ್ಕಿದೆ ಎಂದು ಘೋಷಣೆ ಮಾಡಿಕೊಂಡಿದ್ದರು.

ಬೇರೆ ಪಕ್ಷಗಳ ನಾಯಕರಿಗೆ ಗಾಳ ಹಾಕುವ‌ ಪ್ರಶ್ನೆಯೇ ಇಲ್ಲ: ಹೆಚ್‌ಡಿಕೆ

ಭವಾನಿ ಅವರಿಗೆ ಟಿಕೆಟ್‌ ನಿರಾಕರಿಸಿದ್ದ ಕುಮಾರಸ್ವಾಮಿ: ಹಾಸನದಿಂದ ಸ್ಪರ್ಧೆ ಮಾಡುವುದಕ್ಕೆ ಭವಾನಿ ರೇವಣ್ಣ ಅವರಿಗೆ ಆಸೆಯಿದೆ. ಹೀಗೆ ಶಾಸಕರಾಗಿ ಆಯ್ಕೆ ಆಗುವುದಕ್ಕೆ ಆಸೆ ಇರೋದು ತಪ್ಪಾ.? ಈ ದೇಶದಲ್ಲಿ ಚುನಾವಣೆಗೆ ನಿಲ್ಲಬೇಕೆನ್ನುವ ಹಕ್ಕು ಯಾರಿಗೆ ಬೇಕಾದರೂ ಇದೆ. ಈ ದೇಶದ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ನಿಲ್ಲುವ ಹಕ್ಕಿದೆ. ಆದರೆ, ರಾಜ್ಯದ ಜನತೆಗೆ ಸಂದೇಶ ಕೊಡುವ ದೃಷ್ಠಿಯಿಂದ ಹಾಗೂ ಪಕ್ಷದ ಸಂಘಟನಾ ದೃಷ್ಟಿಯಿಂದ ಎನು ಕ್ರಮ ತಗೊಬೇಕು ಅದನ್ನ ಪಕ್ಷದ ತೀರ್ಮಾನದಲ್ಲಿ‌ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದರು. 

ತ್ಯಾಗದ ಪರಮಾವಧಿ ಎಂದು ಸಿ.ಟಿ. ರವಿ ವ್ಯಂಗ್ಯ: ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಕುರಿತು ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ಹಾಸನದಲ್ಲಿ ಭವಾನಿ ರೇವಣ್ಣ ಅವರು ಸ್ವತಃ ತಾವೇ ಟಿಕೆಟ್ ಘೋಷಣೆ ಮಾಡಿಕೊಂಡಿದ್ದಾರೆ. ಇದನ್ನು ಅವರ ದೃಷ್ಟಿಯಲ್ಲಿ ತ್ಯಾಗದ ಪರಮಾವಧಿ ಎಂದು ಕರೆಯಬಹುದು ಎಂದು ವ್ಯಂಗ್ಯ ಮಾಡಿದ್ದಾರೆ.

Follow Us:
Download App:
  • android
  • ios