Asianet Suvarna News Asianet Suvarna News

'ಆಸ್ಪತ್ರೆಗಳಿಗೆ ಸಿಗದ 'ರೆಮಿಡಿಸಿವಿರ್' ಬಿಜೆಪಿ ಸಂಸದರಿಗೆ ಸಿಕ್ಕಿದ್ದು ಹೇಗೆ'?

ರೆಮಿಡಿಸಿವಿರ್ ಚುಚ್ಚುಮದ್ದನ್ನು ಬಿಜೆಪಿ ಸಂಸದ ತೆಗೆದುಕೊಂಡು ಹೋಗುತ್ತಿದ್ದು, ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

KPCC President Hist out at BJP Govt Over Corona remdesivir injection rbj
Author
Bengaluru, First Published May 1, 2021, 4:50 PM IST

ಬೆಂಗಳೂರು, (ಮೇ.01) : ರಾಜ್ಯದಲ್ಲಿ ಕೊರೋನಾ ಚಿಕಿತ್ಸೆಗೆ ಅಗತ್ಯವಾದ ರೆಮಿಡಿಸಿವಿರ್ ಚುಚ್ಚುಮದ್ದಿಗೆ ಅಭಾವ ಹೆಚ್ಚಾಗಿದೆ. ಆಸ್ಪತ್ರೆಗಳು ಇಂಜಕ್ಷನ್ ಪೂರೈಸಿ ಎಂದು ಗೋಗರೆದರೂ ಸರಬರಾಜು ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರು, ಸಂಸದರಿಗೆ ಬಾಕ್ಸ್ ಗಟ್ಟಲೇ ಔಷಧವನ್ನು ಕೊಟ್ಟು ಕಳುಹಿಸಲಾಗುತ್ತಿದೆ. ಇದು ಹೇಗೆ ಸಾಧ್ಯ? ಇದು ಸರಿಯೇ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದಲ್ಲಿ ಸಾಮಾಜಿಕ ಜಾಲತಾಣ ಯೋಧರ ನೇಮಕ ಅಭಿಯಾನ ಹಾಗೂ ಕೊರೋನಾ ಸೋಂಕಿತರ ನೆರವಿಗೆ ಆಂಬ್ಯುಲೆನ್ಸ್ ಸೌಲಭ್ಯಕ್ಕೆ ಚಾಲನೆ ಕೊಟ್ಟ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನನಗೆ ಛತ್ತೀಸಘಡ, ರಾಜಸ್ಥಾನ ಮುಖ್ಯಮಂತ್ರಿಗಳು ಕರೆ ಮಾಡಿ, ನಾವು ನಿಮ್ಮ ರಾಜ್ಯದ ಡಿಎಚ್‌ಒಗಳಿಗೆ ಔಷಧಿಗಳನ್ನು ಪೂರೈಸಲು ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರ ಅದನ್ನು ತಡೆ ಹಿಡಿದಿದೆ ಎಂದು ಆರೋಪಿಸಿದರು.

ಭಾರತದಲ್ಲಿ ಒಂದೇ ದಿನ 4 ಲಕ್ಷ ಕೊರೋನಾ ಕೇಸ್; ವಿಶ್ವದಲ್ಲೇ ಗರಿಷ್ಠ ಪ್ರಕರಣ! 

ನಾನು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯದರ್ಶಿಗಳಿಗೆ ಕರೆ ಮಾಡಿ ಈ ವಿಚಾರದ ಬಗ್ಗೆ ಕೇಳಿದೆ. ಅವರು ಏನನ್ನೂ ಹೇಳದೇ ಈ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಆದರೆ ಮತ್ತೊಂದು ಕಡೆ ಬಿಜೆಪಿ ನಾಯಕರುಗಳಿಗೆ ಈ ಔಷಧವನ್ನು ಡಬ್ಬಗಳಲ್ಲಿ ತುಂಬಿ, ತುಂಬಿ ಕಳುಹಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ನಾಯಕರು, ಸಂಸದರು ಆಸ್ಪತ್ರೆಗಳ ಮಾಲೀಕರಾ? ಡ್ರಗ್ ಕಂಟ್ರೋಲರ್ ಗಳಾ? ಔಷಧಿ ಪಡೆಯಲು ಪರವಾನಿಗೆ ಪಡೆದಿದ್ದಾರಾ? ಆ ನಾಯಕರು ಔಷಧಿ ತೆಗೆದುಕೊಂಡು ಜನರಿಗೆ ನೀಡುತ್ತಿರಬಹುದು, ಅದರ ಬಗ್ಗೆ ನಾನು ತಕರಾರು ಮಾಡುವುದಿಲ್ಲ. ಆದರೆ ಯಾವ ಕಾನೂನಿನ ಅಡಿಯಲ್ಲಿ ಅವರು ದೊಡ್ಡ ಪ್ರಮಾಣದಲ್ಲಿ ಔಷಧವನ್ನು ಕೊಂಡೊಯ್ಯಲು ಅನುಮತಿ ನೀಡಲಾಯಿತು? ಯಡಿಯೂರಪ್ಪನವರೇ ನಿಮ್ಮ ಆಡಳಿತದಲ್ಲಿ ಏನೇನಾಗುತ್ತಿದೆ? ಪ್ರಧಾನಮಂತ್ರಿಗಳು, ಕೇಂದ್ರ ಆರೋಗ್ಯ ಸಚಿವರು ಈ ಬಗ್ಗೆ ಗಮನ ಹರಿಸಬೇಕಿದೆ ಎಂದರು.

ಬಿಜೆಪಿ ನಾಯಕರು, ಸಂಸದರು ಈ ಔಷಧವನ್ನು ತೆಗೆದುಕೊಂಡು ಹೋಗಲು ಅನುಮತಿ ಕೊಟ್ಟಿದ್ದು ಯಾರು? ಇದು ದೇಶದ ಅತಿದೊಡ್ಡ ಅಪರಾಧ. ಯಾವುದೇ ಸಚಿವ, ಶಾಸಕ ತಮ್ಮ ಕಚೇರಿ ಪ್ರಭಾವ ಬಳಿಸಿ ಔಷಧಿ ಪಡೆಯುವಂತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಔಷಧ ಪೂರೈಸಿ ಎಂದು ನಾವು ಕೇಳಿದಾಗ, ಆಸ್ಪತ್ರೆಗಳು ಕೇಳಿದಾಗ ಕೇವಲ ಡ್ರಗ್ ಪರವಾನಗಿ ಇರುವವರಿಗೆ ಮಾತ್ರ ಇದನ್ನು ನೀಡಲಾಗುವುದು ಎಂದು ಸರ್ಕಾರ ಹೇಳಿತ್ತು. ಈಗ ಸಂಸದರು ಪೆಟ್ಟಿಗೆಗಟ್ಟಲೆ ಔಷಧಿ ಹೇಗೆ ತಂದಿದ್ದಾರೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರು, ಪ್ರಧಾನಿಗಳು ಉತ್ತರಿಸಬೇಕು? ಇದಕ್ಕೆ ಒಂದು ಪ್ರಕ್ರಿಯೆ ಇದೆ. ಇದು ನಿಮ್ಮ ಮನೆ ಆಸ್ತಿಯಲ್ಲ. ಬಡವರಿಗೆ ಔಷಧಿ ಸಿಗಲ್ಲ, ರಾಜಕಾರಣಿಗಳ ಆಪ್ತರಿಗೆ ಮಾತ್ರ ಸಿಗುತ್ತದೆ ಎಂದರೆ ಏನರ್ಥ?  ಕಿಡಿ ಕಾರಿದರು.

Follow Us:
Download App:
  • android
  • ios