ಹಿಜಾಬ್ ವಿಚಾರದಲ್ಲಿ ಸ್ಪೀಕರ್ ಯುಟಿ ಖಾದರ್ ಯಾಕೆ ಮೌನ? ಶಾಸಕ ವೇದವ್ಯಾಸ್ ಕಾಮತ್ ಪ್ರಶ್ನೆ
ಸಿಎಂ ಸಿದ್ದರಾಮಯ್ಯಗೆ ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ನಡೆದ ಹಿಜಾಬ್ ವಿಚಾರದ ಬಗ್ಗೆ ಅರಿವಿಲ್ಲ. ಅವರು ಎಲ್ಲೋ ಕೂತು ಅಲ್ಪಸಂಖ್ಯಾತರ ಓಲೈಕೆ ಮಾಡ್ತಾ ಇದಾರೆ ಎಂದು ಮಂಗಳೂರು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.
![karnataka hijab ban withdraw case BJP MLA Vedavyas kamat reaction at mangaluru rav karnataka hijab ban withdraw case BJP MLA Vedavyas kamat reaction at mangaluru rav](https://static-ai.asianetnews.com/images/01hjb8q0tt5e1qb7aghwk40e2s/1_363x203xt.jpg)
ಮಂಗಳೂರು (ಡಿ.23): ಸಿಎಂ ಸಿದ್ದರಾಮಯ್ಯಗೆ ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ನಡೆದ ಹಿಜಾಬ್ ವಿಚಾರದ ಬಗ್ಗೆ ಅರಿವಿಲ್ಲ. ಅವರು ಎಲ್ಲೋ ಕೂತು ಅಲ್ಪಸಂಖ್ಯಾತರ ಓಲೈಕೆ ಮಾಡ್ತಾ ಇದಾರೆ ಎಂದು ಮಂಗಳೂರು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.
ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಕೋರ್ಟ್ ನಲ್ಲಿರೋ ವಿಚಾರದ ಬಗ್ಗೆ ಹೇಳಿಕೆ ನೀಡಿರೋದು ಸಿಎಂ ಸ್ಥಾನಕ್ಕೆ ಅಗೌರವ ತೋರಿಸಿದ್ದಾರೆ. ಕೋರ್ಟ್ನಲ್ಲಿರುವ ವಿಚಾರದ ಬಗ್ಗೆ ಮಾತನಾಡೋದು ತಪ್ಪು. ಅಲ್ಪಸಂಖ್ಯಾತರಿಗೆ ಬೇಕಾದ ರೀತಿಯಲ್ಲಿ ವಿಚಾರ ಬದಲಿಸೋದು ಸರಿಯಲ್ಲ. ಮಂಗಳೂರು ವಿವಿ ಕಾಲೇಜ್ ಹಿಜಾಬ್ ಗಲಾಟೆ ಹೊತ್ತಲ್ಲಿ ನಾನು ಸಿಡಿಸಿ ಅಧ್ಯಕ್ಷನಾಗಿದ್ದೆ. ಏಕಾಏಕಿ ಹೊಸ ಸರ್ಕಾರ ಬಂದು ನಮ್ಮ ಅಧ್ಯಕ್ಷ ಸ್ಥಾನ ಕಿತ್ತು ಬಿಸಾಡಿತು. ಆವತ್ತು ಹಿಜಾಬ್ ಗಲಾಟೆ ಆದಾಗ ಯು.ಟಿ.ಖಾದರ್ ಹೇಳಿದ್ರು, ಭಾರತದಲ್ಲಿ ಮುಸ್ಲಿಮರಿಗೆ ಸ್ವಾತಂತ್ರ್ಯ ಸಿಕ್ಕಿದೆ. ಮುಸ್ಲಿಂ ಹೆಣ್ಮಕ್ಕಳು ಗಲಾಟೆ ಮಾಡಬೇಡಿ. ಇಂಥ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ ಬೇಡ ಖಾದರ್ ಹೇಳಿದ್ರು. ಅಂದು ಖಾದರ್ ಹೇಳಿದ್ದು ಸರಿ ಅಂತಾದ್ರೆ ಇಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮಾಡ್ತಿರೋದು ಏನು? ಸಭಾಧ್ಯಕ್ಷ ಖಾದರ್ ಇಂದು ಮಾತನಾಡಬೇಕು. ಅಂದು ಮಾತಾಡಿದಂತೆ ಇಂದು ಹಿಜಾಬ್ ಹೇಳಿಕೆ ಕುರಿತು ಪ್ರತಿಕ್ರಿಯಿಸಬೇಕು ಎಂದು ಆಗ್ರಹಿಸಿದರು.
ಹಿಜಾಬ್ ನಿಷೇಧ ವಾಪಸ್ ಪಡೆದರೆ, ಕೇಸರಿ ಶಾಲು ಹಾಕಲು ಹಿಂದೂ ಯುವಕರಿಗೆ ನಾವೇ ಕರೆ ನೀಡ್ತೇವೆ : ಎಂಪಿ ರೇಣುಕಾಚಾರ್ಯ
ಹಿಜಾಬ್ ವಿಚಾರ ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯಲು ಕುತಂತ್ರ ನಡೆಸಿದ್ದಾರೆ. ಹಿಜಾಬ್ ವಿಚಾರದಲ್ಲಿ ಮುಸ್ಲಿಂ ಮತಗಳನ್ನು ಪಡೆಯುವ ಉದ್ದೇಶದಿಂದ ಈ ಹೇಳಿಕೆ ನೀಡಿದ್ದಾರೆ. ಮೈಕ್ ಸಿಕ್ಕಿದಾಗ ಮನಸಿಗೆ ಬಂದದ್ದು ಮಾತನಾಡೋದನ್ನ ವಿರೋಧಿಸ್ತೇನೆ. ಹಿಜಾಬ್ ವಿಚಾರವಾಗಿ ನಾಳೆ ಗಲಾಟೆಗಳಾಗಿ ಹೆಚ್ಚು ಕಮ್ಮಿ ಆದ್ರೆ ಅದಕ್ಕೆ ಮುಖ್ಯಮಂತ್ರಿ ಹೊಣೆಯಾಗ್ತಾರೆ ಎಂದರು.
ಶಾಲೆ ಕಾಲೇಜು ಒಳಗೆ ಹಿಜಾಬ್ ಹಾಕಲು ಅನುಮತಿ ಕೊಟ್ಟರೆ ನಾಳೆ ಪರೀಕ್ಷೆಯಲ್ಲಿ ಹಿಜಾಬ್ ಒಳಗಡೆ ಬ್ಲೂಟೂತ್ ಇಟ್ಟು ನಕಲು ಮಾಡಿದ್ರೆ ಯಾರು ಹೊಣೆ? ಸರ್ಕಾರ ಒಂದು ವೇಳೆ ಹಿಜಾಬ್ ನಿಷೇಧ ವಾಪಸ್ ಪಡೆದರೆ ಇದರ ವಿರುದ್ದ ಬಿಜೆಪಿ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.