Karnataka Election Results 2023: ಬಳ್ಳಾರಿಯಲ್ಲಿ ಕಾಂಗ್ರೆಸ್ ಫುಲ್ ಸ್ವೀಪ್, ಬಿಜೆಪಿಗೆ ಶಾಕ್!
ಗಣಿನಾಡು ಬಳ್ಳಾರಿಯಲ್ಲಿ ಬಿಜೆಪಿ ಅಚ್ಚರಿ ಎನ್ನುವಂತೆ ಶೂನ್ಯ ಸಂಪಾದನೆ ಮಾಡಿದೆ. ಬಳ್ಳಾರಿ ನಗರ, ಸಿರಗುಪ್ಪ, ಕಂಪ್ಲಿ, ಬಳ್ಳಾರಿ ಗ್ರಾಮೀಣ ಹಾಗೂ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ.
ಬೆಂಗಳೂರು (ಮೇ.13): ಬಿಸಿಲೂರು ಖ್ಯಾತಿಯ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆ ತಾರಕಕ್ಕೇರಲು ಸಾಕಷ್ಟು ಕಾರಣಗಳಿದ್ದವು. ಎರಡೂ ರಾಷ್ಟ್ರೀಯ ಪಕ್ಷಗಳ ಜಂಗೀಕುಸ್ತಿಯ ನಡುವೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರಿಂದ ಸ್ಥಾಪಿತವಾಗಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್ಪಿಪಿ) ಅಭ್ಯರ್ಥಿಗಳು ಕೂಡ ರಾಜಕೀಯ ಭವಿಷ್ಯಕ್ಕಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಇದರಿಂದ ನಿರೀಕ್ಷೆಯಂತೆಯೇ ಅಖಾಡ ಭರ್ಜರಿಯಾಗಿ ರಂಗೇರಿತ್ತು. ಇನ್ನು ಈ ಜಿಲ್ಲೆಯಲ್ಲಿ ಜೆಡಿಎಸ್ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ಇದರಿಂದಾಗಿ ಜಿಲ್ಲೆಯ ಐದೂ ಕ್ಷೇತ್ರಗಲ್ಲಿ ಬಹುತೇಕ ಚತುಷ್ಕೋನ ಸ್ಪರ್ಧೆಯಾಗಿ ಮಾರ್ಪಟ್ಟಿತ್ತು.
ಜಿಲ್ಲೆಯಲ್ಲಿ ಒಟ್ಟು ಮತದಾರರು: 1152411
ಪುರುಷ ಮತದಾರರು: 567319
ಮಹಿಳಾ ಮತದಾರರು: 584920
ಇತರೆ: 172
ಶೇಕಡವಾರು ಮತದಾನ: 76.24%
ಬಳ್ಳಾರಿ ನಗರಕ್ಕೆ ಭರತ: ಬಳ್ಳಾರಿ ನಗರ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್ನ ಭರತ್ ನಾರಾ ರೆಡ್ಡಿ ಹಾಗೂ ಕೆಆರ್ಪಿಪಿಯ ಲಕ್ಷ್ಮೀ ಅರುಣಾ ನಡುವೆಯೇ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತಾದರೂ, ಭರತ್ ರೆಡ್ಡಿ ದೊಡ್ಡ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಬಿಜೆಪಿಯ ಸೋಮಶೇಖರ್ ರೆಡ್ಡಿ ಮೂರನೇ ಸ್ಥಾನಕ್ಕೆ ಕುಸಿದುಹೋಗಿದ್ದಾರೆ. ಇನ್ನು ಜೆಡಿಎಸ್ಎನ ಅನಿಲ್ ಲಾಡ್ ಕೇವಲ 602 ಮತ ಸಂಪಾದನೆ ಮಾಡಿದ್ದಾರೆ.
ಪಕ್ಷ | ಅಭ್ಯರ್ಥಿಗಳು | ಪಡೆದ ಮತ | ಅಂತರ |
ಬಿಜೆಪಿ | ಜಿ.ಸೋಮಶೇಖರ ರೆಡ್ಡಿ | 36751 | ಸೋಲು |
ಕಾಂಗ್ರೆಸ್ | ನಾರಾ ಭರತ್ ರೆಡ್ಡಿ | 85800 | 37682 ಮತ |
ಕೆಆರ್ಪಿಪಿ | ಗಾಲಿ ಲಕ್ಷ್ಮೀ ಅರುಣಾ | 48118 | ಸೋಲು |
ಸಿರಗುಪ್ಪದಲ್ಲಿ ಗೆದ್ದ ಬಿಎಂ ನಾಗರಾಜ: ಕಳೆದ ಬಾರಿ ಈ ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿಯ ಎಂಎಸ್ ಸೋಮಲಿಂಗಪ್ಪಗೆ ಸೆಡ್ಡು ಹೊಡೆದಿದ್ದ ಬಿಎಂ ನಾಗರಾಜ್ ಕಾಂಗ್ರೆಸ್ ಟಿಕೆಟ್ನಿಂದ ಭರ್ಜರಿ ಗೆಲುವು ಕಂಡಿದ್ದಾರೆ. ಕಳೆದ ಬಾರಿ ಚುನಾವಣೆಯಿಂದ ದೂರ ಉಳಿದಿದ್ದ ಬಿಎಂ ನಾಗರಾಜ್ ಈ ಬಾರಿ ಆಖಾಡಕ್ಕೆ ಇಳಿದಿದ್ದು ಮಾತ್ರವಲ್ಲದೆ 90 ಸಾವಿರಕ್ಕಿಂತ ಅಧಿಕ ಮತ ಪಡೆಯುವಲ್ಲಿ ಯಶ ಕಂಡಿದ್ದಾರೆ. ಈ ಹಿಂದೆ ಶಾಸಕರಾಗಿದ್ದಾಗ ಸದ್ದುಗದ್ದಲವಿಲ್ಲದೆ ಇರುತ್ತಿದ್ದ ಬಿಎಂ ನಾಗರಾಜ್ ಈ ಬಾರಿಯೂ ಸೈಲೆಂಟ್ ಆಗಿ ಗೆಲುವು ಪಡೆದುಕೊಂಡಿದ್ದಾರೆ.
ಪಕ್ಷ | ಅಭ್ಯರ್ಥಿ | ಪಡೆದ ಮತಗಳು | ಅಂತರ |
ಬಿಜೆಪಿ | ಎಂ.ಎಸ್. ಸೋಮಲಿಂಗಪ್ಪ | 53,830 | ಸೋಲು |
ಕಾಂಗ್ರೆಸ್ | ಬಿಎಂ ನಾಗರಾಜ್ | 90,862 | 37,032 ಮತ |
ಕೆಆರ್ಪಿಪಿ | ಟಿ.ದಾರಪ್ಪ ನಾಯ್ಕ್ | 18538 | ಸೋಲು |
ಗಣೇಶನಿಗೆ ಒಲಿದ ಕಂಪ್ಲಿ: ಬಳ್ಳಾರಿಯ ಜಿಲ್ಲಾ ಸಚಿವ ಬಿ.ಶ್ರೀರಾಮುಲು ಅವರ ಅಳಿಯ ಟಿಎಚ್ ಸುರೇಶ್ ಬಾಬು ಈ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಆದರೆ, ಹಾಲಿ ಕಾಂಗ್ರೆಸ್ ಶಾಸಕನಾಗಿದ್ದ ಜೆಎನ್ ಗಣೇಶ್ ಕ್ಷೇತ್ರದಲ್ಲಿ ಅಬ್ಬರದ ಗೆಲುವು ಕಂಡಿದ್ದಾರೆ. ಬರೋಬ್ಬರಿ 24 ಸಾವಿರ ಮತಗಳ ಅಂತರದಲ್ಲಿ ಅವರು ಗೆಲುವು ಕಂಡಿದ್ದಾರೆ. ಮಾವ ಶ್ರೀರಾಮುಲು ಹಾಗೂ ಅಳಿಯ ಸುರೇಶ್ ಬಾಬು ಇಬ್ಬರೂ ಬಳ್ಳಾರಿ ಜಿಲ್ಲೆಯಲ್ಲಿ ಸೋಲು ಕಂಡಿದ್ದಾರೆ.
ಪಕ್ಷ | ಅಭ್ಯರ್ಥಿಗಳು | ಪಡೆದ ಮತ | ಅಂತರ |
ಬಿಜೆಪಿ | ಟಿ.ಎಚ್.ಸುರೇಶ್ ಬಾಬು | 76,333 | ಸೋಲು |
ಕಾಂಗ್ರೆಸ್ | ಜೆ.ಎನ್.ಗಣೇಶ್ | 1,00,424 | 24,091 ಮತ |
ಜೆಡಿಎಸ್ | ರಾಜು ನಾಯಕ | 1364 | ಸೋಲು |
ಶ್ರೀರಾಮುಲುಗೆ ಶಾಕ್ ನೀಡಿದ ಬಳ್ಳಾರಿ ಗ್ರಾಮೀಣ: ಈ ಬಾರಿ ಶ್ರೀರಾಮುಲು ಸ್ಪರ್ಧೆಯಿಂದಾಗಿ ಬಳ್ಳಾರಿ ಗ್ರಾಮೀಣ ಕ್ಷೇತ್ರ ಕುತೂಹಲ ಮೂಡಿಸಿತ್ತು. ಜೆಡಿಎಸ್ ಈ ಕ್ಷೇತ್ರದ ಅಖಾಡ ಪ್ರವೇಶಿಸಿರಲಿಲ್ಲ. ಆದರೆ, ಕಾಂಗ್ರೆಸ್ನ ಬಿ. ನಾಗೇಂದ್ರ, ದೊಡ್ಡ ಗೆಲುವು ಕಾಣುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಶ್ರೀರಾಮುಲು ಅವರ ಶಿಷ್ಯ ಎನ್ನುವುದು ವಿಶೇಷ. ಮುಸ್ಲಿಂ, ಕುರುಬ ಹಾಗೂ ಪರಿಶಿಷ್ಟ ಪಂಗಡದ ಹೆಚ್ಚಿನ ಸಂಖ್ಯೆಯ ಮತದಾರರು ಈ ಕ್ಷೇತ್ರದಲ್ಲಿದ್ದರು. ಶ್ರೀರಾಮುಲು ಅವರ ವರ್ಚಸ್ಸು ಈ ಕ್ಷೇತ್ರದಲ್ಲಿ ಯಾವುದೇ ಲಾಭ ತಂದುಕೊಟ್ಟಿಲ್ಲ.
ಪಕ್ಷ | ಅಭ್ಯರ್ಥಿಗಳು | ಪಡೆದ ಮತಗಳು | ಅಂತರ |
ಬಿಜೆಪಿ | ಬಿ.ಶ್ರೀರಾಮುಲು | 74536 | ಸೋಲು |
ಕಾಂಗ್ರೆಸ್ | ಬಿ.ನಾಗೇಂದ್ರ | 1,04,836 | 29,300 ಮತ |
ನೋಟಾ | 1122 |
ಸಂಡೂರಿನಲ್ಲಿ ಇ.ತುಕಾರಾಂ ಸತತ ಗೆಲುವಿನ ಸರದಾರ: ಬಳ್ಳಾರಿ ಜಿಲ್ಲೆಯಲ್ಲಿ ಬಹುಶಃ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಅಚಲವಾಗಿ ನಂಬಿಕೆ ಇರಿಸಿಕೊಂಡಿದ್ದ ಕ್ಷೇತ್ರ ಇದೊಂದೆ. ಕ್ಷೇತ್ರ ಪುನರ್ ವಿಂಗಡಣೆ ಆದ ಬಳಿ ಇ.ತುಕಾರಾಂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಈ ಬಾರಿ ಕಾಂಗ್ರೆದ್ ಭದ್ರಕೋಟೆಯನ್ನು ಸೀಳಲು ಬಿಜೆಪಿ ಹಾಗೂ ಕೆಆರ್ಪಿಪಿ ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಕಂಡಿದ್ದ ರಾಘವೇಂದ್ರ ಅವರು ಕೋವಿಡ್ ಸಮಯದಲ್ಲಿ ಮೃತಪಟ್ಟಿದ್ದರು. ಆ ಬಳಿಕ ಅವರ ಪತ್ನಿ ಶಿಲ್ಪಾಗೆ ಟಿಕೆಟ್ ನೀಡಿದರೂ, ಅನುಕಂಪದ ಅಲೆ ಇಲ್ಲಿ ವರ್ಕೌಟ್ ಆಗಿಲ್ಲ.
ಪಕ್ಷ | ಅಭ್ಯರ್ಥಿಗಳು | ಪಡೆದ ಮತ | ಅಂತರ |
ಬಿಜೆಪಿ | ಶಿಲ್ಪಾ | 49701 | ಸೋಲು |
ಕಾಂಗ್ರೆಸ್ | ಇ.ತುಕಾರಾಮ್ | 85,233 | 35522 ಮತ |
ಕೆಆರ್ಪಿಪಿ | ಕೆಎಸ್ ದಿವಾಕರ್ | 31299 | ಸೋಲು |
ಇದನ್ನೂ ಓದಿ: Bellary Election Result 2023: ಬಳ್ಳಾರಿಯಲ್ಲಿ ನಡೆಯದ ರಾಮುಲು ಆಟ, ಕೈಗೆ ಜೈ ಎಂದ ವೋಟರ್
ಇದನ್ನೂ ಓದಿ: ಪ್ರಚಾರಕ್ಕೆ ಮೋದಿ ಬಂದಿದ್ದರಿಂದ 100ರ ಗಡಿ ದಾಟ್ತೇವೆ: ಸಚಿವ ಬಿ.ಶ್ರೀರಾಮುಲು