ರಾಜ್ಯದಲ್ಲಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ವಸತಿ ರಹಿತರಿಗೆ ಸಿಂಗಲ್‌ ಮನೆ ನೀಡಲಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಆರೋಪಿಸಿದರು. 

ಭಾಲ್ಕಿ (ಏ.27): ರಾಜ್ಯದಲ್ಲಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ವಸತಿ ರಹಿತರಿಗೆ ಸಿಂಗಲ್‌ ಮನೆ ನೀಡಲಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಆರೋಪಿಸಿದರು. ತಾಲೂಕಿನ ಮದಕಟ್ಟಿಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿ, 2022ಕ್ಕೆ ಸೂರು ಇಲ್ಲದವರಿಗೆ ಸೂರು ಶಾಶ್ವತ ಸೂರು ಕೊಡುವುದಾಗಿ ಹೇಳಿದ ಬಿಜೆಪಿ ಭರವಸೆ ಹುಸಿಯಾಗಿದೆ. ವಸತಿ ರಹಿತ ಬಡ ಜನರಿಗೆ ಸೂರು ಕೊಡಬೇಕು. ಕ್ಷೇತ್ರವನ್ನು ಸಂಪೂರ್ಣ ಗುಡಿಸಲು ಮುಕ್ತ ಮಾಡಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್‌ ಸರ್ಕಾರದಲ್ಲಿ ಮಂತ್ರಿಯಿದ್ದ ಸಂದರ್ಭದಲ್ಲಿ ಅತಿ ಹೆಚ್ಚು ಮನೆ ಬಡವರಿಗೆ ನೀಡಿದ್ದೇನೆ. 

Add Asianetnews Kannada as a Preferred SourcegooglePreferred

ಆದರೆ, ಬಿಜೆಪಿ ಪರಾಜಿತರು, ಕೇಂದ್ರದ ಸಚಿವ ಭಗವಂತ ಖೂಬಾ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಅರ್ಹರಿಗೆ ನೀಡಿದ ಮನೆಗಳನ್ನು ತಡೆದು ಬಡವರ ಹೊಟ್ಟೆಮೇಲೆ ಹೊಡೆಯುವ ಕೆಲಸ ಮಾಡಿದ್ದಾರೆ. ಮೂರು ಅವಧಿ ಶಾಸಕನಾಗಿ ವಿವಿಧ ಯೋಜನೆಯಡಿ ಸಾವಿರಾರೂ ಕೋಟಿ ರು. ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಿದ್ದೇನೆ. ಬಿಜೆಪಿಯ ಹುಸಿ ಭರವಸೆಗಳನ್ನು ಜನ ನಂಬಬಾರದು ಮತ್ತೊಂದು ಅವಧಿಗೆ ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ, ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ, ತಾಪಂ ಮಾಜಿ ಅಧ್ಯಕ್ಷೆ ರೇಖಾ ಪಾಟೀಲ್‌ ಸೇರಿದಂತೆ ಹಲವರು ಇದ್ದರು.

ಅಳೆದು ತೂಗಿ ಯೋಗ್ಯರಿಗೆ ನಿಮ್ಮ ಮತ ನೀಡಿ: ಸಿ.ಟಿ.ರವಿ

ಮದಕಟ್ಟಿಯಲ್ಲಿ ಅದ್ಧೂರಿ ಮೆರವಣಿಗೆ: ಮದಕಟ್ಟಿಜಿಪಂ ಕ್ಷೇತ್ರಕ್ಕೆ ಪ್ರಚಾರ ನಿಮಿತ್ತ ಭೇಟಿ ನೀಡಿದ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಅವರನ್ನು ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಬಾಜೋಳಗಾ ಕ್ರಾಸ್‌ ಸಮೀಪ ಬರುತ್ತಿದ್ದಂತೆಯೇ ತೆರೆದ ವಾಹನದಲ್ಲಿ ಈಶ್ವರ ಖಂಡ್ರೆ ಅವರನ್ನು ನಿಲ್ಲಿಸಿ ಮದಕಟ್ಟಿಗ್ರಾಮದ ವರೆಗೂ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಸಾವಿರಾರೂ ಕಾರ್ಯಕರ್ತರು, ಅಭಿಮಾನಿಗಳು ಕಾಂಗ್ರೆಸ್‌ ಪರ ಘೋಷಣೆ ಕೂಗಿ ಜೋಶ್‌ ಹೆಚ್ಚಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಮೇ 3ಕ್ಕೆ ಬೀದರ್‌ಗೆ ಪ್ರಿಯಾಂಕಾ ಗಾಂಧಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ, ಯುವ ನಾಯಕಿ ಪ್ರಿಯಾಂಕಾ ಗಾಂಧಿ ಮೇ 3ರಂದು ಬೀದರ್‌ಗೆ ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು. ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಬುಧ​ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ​ರು, ಪ್ರಿಯಾಂಕಾ ಗಾಂಧಿ ಅವರ ಕಾರ್ಯಕ್ರಮ ಬೀದರ್‌ ನಗರದಲ್ಲಿ ಮಾಡಬೇಕು ಅಥವಾ ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಮಾಡಬೇಕು ಎಂಬುದನ್ನು ಇನ್ನು ನಿರ್ಧರಿಸಿಲ್ಲ. ಇದರ ಬಗ್ಗೆ ಕೆಪಿಸಿಸಿ ನಿರ್ಣಯ ಕೈಗೊಳ್ಳುತ್ತದೆ. ಆದರೂ ಕೂಡ ಇವರ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರನ್ನು ಸೇರಿಸಲಾಗುವುದು ಎಂದು ಖಂಡ್ರೆ ಹೇಳಿದರು.

ಜನತೆಯ ಪ್ರೀತಿ ವಿಶ್ವಾಸ ಧನ್ಯತಾ ಭಾವನೆ ಮೂಡಿಸಿದೆ: ಸಚಿವ ಸುಧಾಕರ್‌

ಪ್ರಿಯಾಂಕಾ ಗಾಂಧಿ ಅವರೊಂದಿಗೆ ಕೆ.ಸಿ ವೇಣುಗೋಪಾಲ್‌, ಸುರ್ಜೆವಾಲಾ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ ಸೇರಿದಂತೆ ಇನ್ನಿತರರು ಬರಲಿದ್ದಾರೆ. ಇದಲ್ಲದೇ ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೂಡ ಆಹ್ವಾನಿಸಿದ್ದೇವೆ. ಅವರ ವೇಳಾಪಟ್ಟಿಇನ್ನು ಬಂದಿಲ್ಲ. ಭಾರತೀಯ ಜನತಾ ಪಕ್ಷವು ಸೋಲಿನ ಭಯದಿಂದ ಕಂಗೆಟ್ಟು ಭಾಲ್ಕಿ ಮತ್ತು ಹುಮನಾಬಾದ ಕ್ಷೇತ್ರದಲ್ಲಿ ಗುಂಡಾವರ್ತನೆಗೆ ಇಳಿದಿದೆ. ಅಧಿಕಾರದ ಮದದಲ್ಲಿ ನಮ್ಮ ಪರವಾಗಿ ಇರುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಹೆದರಿಸುತಿದ್ದಾರೆ ಎಂದು ಖಂಡ್ರೆ ಆರೋಪಿಸಿದರು.