ಕರ್ನಾಟಕದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ  ಜಗದೀಶ್  ಶೆಟ್ಟರ್ ಜತೆ ಸುದೀರ್ಫ ಚರ್ಚೆ ನಡೆಸಿದ್ದು,  ಮುಖ್ಯವಾಗಿ ಲಿಂಗಾಯತರ ವಿಚಾರ ಚರ್ಚೆಯಾಗಿದೆ.

ಹುಬ್ಬಳ್ಳಿ (ಏ.23): ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರೊಂದಿಗೆ ಸುದೀರ್ಘ ಸಭೆ ನಡೆಸಿದ್ದಾರೆ. ಹುಬ್ಬಳ್ಳಿಯ ವಿಮಾನ‌ ನಿಲ್ದಾಣದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ್ ಸುದೀರ್ಘವಾಗಿ ಇಬ್ಬರು ನಾಯಕರು ಚರ್ಚೆ ನಡೆಸಿದರು. ಬಿಜೆಪಿಯಲ್ಲಿ‌ ಲಿಂಗಾಯತ ಹಿರಿಯ ನಾಯಕರ ಕಡೆಗಣೆನೆ ವಿಚಾರದ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ರಾಹುಲ್-ಶೆಟ್ಟರ್ ಸಭೆಯಲ್ಲಿ ಏನು ಚರ್ಚೆ ನಡೆದಿದೆ?
ರಾಹುಲ್‌ ಗಾಂಧಿ- ಜಗದೀಶ್ ಶೆಟ್ಟರ್ ಸುದೀರ್ಫ ಚರ್ಚೆಯಲ್ಲಿ ಮುಖ್ಯವಾಗಿ ಚರ್ಚೆಯಾಗಿದ್ದು ಲಿಂಗಾಯತರ ವಿಚಾರ. ಕಾಂಗ್ರೆಸ್ ಬಸವ ತತ್ವಗಳ ಪರವಾಗಿರೋದು ಹೀಗಿದ್ದಾಗ, ಬಸವಣ್ಣನ ತತ್ವಗಳಿಗೆ ವಿರುದ್ಧವಾಗಿರುವ ಬಿಜೆಪಿಯನ್ನ ಯಾಕೆ ಲಿಂಗಾಯತರು ಬೆಂಬಲಿಸಿದರು? ಎಂಬುದಾಗಿ ಚರ್ಚೆ ನಡೆದಿದೆ.

ಬಸವ ತತ್ವ- ಬಿಜೆಪಿ ತತ್ವ ಬೇರೆ ಬೇರೆ ಎಂಬ ಪ್ರಶ್ನೆ ಮುಂದಿಟ್ಟ ರಾಹುಲ್, ರಾಮಕೃಷ್ಣ ಹೆಗಡೆ ಕಾಲದಿಂದಲೂ ಲಿಂಗಾಯತರ ನಿಲುವಿನ ಬಗ್ಗೆ ಚರ್ಚಿಸಿದರು. ಯಡಿಯೂರಪ್ಪನವರ ಕಾರಣಕ್ಕೆ ಲಿಂಗಾಯತರು ಬಿಜೆಪಿ ಪರ‌ ನಿಂತ್ರಾ? ಅಥವಾ ಬೇರೆ ಕಾರಣಗಳಿವೆಯಾ? ಎಂದು ಚರ್ಚಿಸಿದರು.

ಇದರ ಜೊತೆಗೆ ಈ ಚುನಾವಣೆಯಲ್ಲಿ ಲಿಂಗಾಯತರ ದೊಡ್ಡ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ 50ಕ್ಕೂ ಹೆಚ್ಚು ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ‌ ಎಂದು ರಾಹುಲ್ ಹೇಳಿದರು.

ಇನ್ನು ಜಗದೀಶ್ ಶೆಟ್ಟರ್ ಕುಟುಂಬದ ರಾಜಕೀಯ ಇತಿಹಾಸ ತಿಳಿದುಕೊಂಡ ರಾಹುಲ್, ತಾವೇ ಇಡೀ ಉತ್ತರ ಕರ್ನಾಟಕ ಪ್ರವಾಸ ಮಾಡಬೇಕು. ಬಸವ ತತ್ವ, ಬಸವಣ್ಣನವರು ವಿಚಾರಧಾರೆಗಳ‌ ಬಗ್ಗೆ ಕಾಂಗ್ರೆಸ್ ಬಹಳ ನಂಬಿಕೆ ಇರುವಂತ ಪಕ್ಷ ಎಂದು ಸಲಹೆ ನೀಡಿದರು.

ರಾಹುಲ್ ಜೊತೆಗಿನ ಮಾತುಕತೆಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಕೂಡ ಬಾಗಿಯಾಗಿದ್ದರು. ಜಗದೀಶ್ ಶೆಟ್ಟರ್ ಪಕ್ಷಕ್ಕೆ ಸೇರಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಅನುಕೂಲ ಆಗಿದೆ. ಬಿಜೆಪಿ ಲಿಂಗಾಯತ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯದ ಬಗ್ಗೆ ರಾಹುಲ್ ಗಟ್ಟಿಯಾಗಿ ಮಾತನಾಡಿದರು.

ಇದಕ್ಕೂ ಮುನ್ನ ಹುಬ್ಬಳ್ಳಿಯ ವಿಮಾನ‌ ನಿಲ್ದಾಣಕ್ಕೆ ಬಂದ ರಾಹುಲ್ ಅವರನ್ನು ಶೆಟ್ಟರ್ ಆತ್ಮೀಯವಾಗಿ ಬರಮಾಡಿಕೊಂಡರು. ಶಾಸಕ ಪ್ರಸಾದ್ ಅಬ್ಬಯ್ಯ, ಜಿಲ್ಲಾ‌ ಕಾಂಗ್ರೆಸ್ ಅಧ್ಯಕ್ಷ ಅನಿಲ ಕುಮಾರ್ ಪಾಟೀಲ್ ಸೇರಿ ಹಲವು ಕಾಂಗ್ರೆಸ್ ನಾಯಕರು ಜೊತೆಯಲ್ಲಿದ್ದರು.

ರಾಹುಲ್ ಬಿಜೆಪಿಯ ಸ್ಟಾರ್ ಪ್ರಚಾರಕ; ರೋಡ್ ಶೋಗೆ ಯತ್ನಾಳ್ ಲೇವಡಿ

ಬಳಿಕ ಹುಬ್ಬಳ್ಳಿಯಿಂದ ಹೊರಟ ರಾಹುಲ್ ಗಾಂಧಿ ವಿಶೇಷ ಹೆಲಿಕಾಪ್ಟರ್ ಮೂಲಕ ಕೂಡಲಸಂಗಮದತ್ತ ಪಯಣ ಬೆಳೆಸಿದರು. ಬಸವ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಭೇಟಿ ನೀಡಿದ್ದು, ಐಕ್ಯಮಂಟಪಕ್ಕೂ ಭೇಟಿ ನೀಡಿದ್ದಾರೆ.

ಮಂಡ್ಯದಲ್ಲಿ ಬಿಜೆಪಿ ಸುಮಾಸ್ತ್ರಕ್ಕೆ ಕಾಂಗ್ರೆಸ್ ನಿಂದ ರಮ್ಯಾಸ್ತ್ರ!

ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.