* ರೈತರ ಮೂರು ಕೃಷಿ ಕಾಯ್ದೆಗಳನ್ನ ವಾಪಸ್ * ಪ್ರಧಾನಿ ನರೇಂದ್ರ ಮೋದಿ ಘೋಷಣೆ* ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್

ಬೆಂಗಳೂರು, (ನ.19): ಮೂರು ಕೃಷಿ ಕಾಯಿದೆಗಳನ್ನು (Farms Laws) ಕೇಂದ್ರ ಸರ್ಕಾರ ವಾಪಸ್ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ದೇಶದ ಮಣ್ಣಿನ ಮಕ್ಕಳ‌ ಅಭೂತಪೂರ್ವ ಹೋರಾಟಕ್ಕೆ‌ (Protest) ಸಿಕ್ಕ ಗೆಲುವಾಗಿದೆ. ರೈತ ಹೋರಾಟಗಾರರಿಗೆ (Farmers Protest) ಅಭಿನಂದನೆಗಳು ಎಂದಿದ್ದಾರೆ.

"

PM Address to Nation: ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಘೋಷಿಸಿದ ಪ್ರಧಾನಿ ಮೋದಿ

ಕೃಷಿ‌ಕಾಯ್ದೆಯನ್ನು ರದ್ದುಗೊಳಿಸಿದರಷ್ಟೇ ಸಾಲದು ಈ ಕರಾಳ ಕಾಯ್ದೆ ರದ್ದತಿಗಾಗಿ ನಡೆದ ಹೋರಾಟದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ 25 ಲಕ್ಷ ರೂಪಾಯಿ‌ ಪರಿಹಾರ ಕೊಡಬೇಕೆಂದು ಒತ್ತಾಯಿಸುತ್ತೇನೆ.

ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಎದೆಯಗಲ ಎಷ್ಟೇ ಇಂಚಿನದ್ದಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇ ಬೇಕು. ಇದುವೇ ಪ್ರಜಾಪ್ರಭುತ್ವದ ಸೊಗಸು. ಇದುವೇ ರೈತರ ಸ್ವಾತಂತ್ರ್ಯೋತ್ಸವ, ಕೃಷಿ ಕಾಯ್ದೆ‌ಯಷ್ಟೇ ಅಲ್ಲ, ಕೇಂದ್ರ ಬಿಜೆಪಿ‌ ಸರ್ಕಾರದ ಪ್ರತಿಯೊಂದು ನೀತಿ ಮತ್ತು ಕಾರ್ಯಕ್ರಮಗಳು ರೈತ ವಿರೋಧಿಯಾದುದು ಎಂದಿದ್ದಾರೆ.

ಇದು ವಿರಮಿಸುವ ಕಾಲ ಅಲ್ಲ,‌ ರೈತ ವಿರೋಧಿ ಬಿಜೆಪಿ(BJP) ವಿರುದ್ಧದ ಹೋರಾಟ ಮುಂದುವರಿಯಲಿದೆ. ರೈತರ ಹೋರಾಟಕ್ಕೆ ಸಿಕ್ಕ ಗೆಲುವಿನ‌‌ ಸ್ಪೂರ್ತಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ದ ಜನ ಹೋರಾಟಕ್ಕೆ ನಾಂದಿಯಾಗಲಿದೆ. ಪಟ್ರೋಲ್-ಡೀಸೆಲ್ Petrol diesel) ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ವಿರುದ್ಧದ ಹೋರಾಟಕ್ಕೆ ದೇಶದ ಜನ ಅಣಿಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ದಿನೇಶ್ ಗುಂಡೂರಾವ್ ಟ್ವೀಟ್
3 ಕರಾಳ ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಕೇಂದ್ರದ ನಿರ್ಧಾರ ಸ್ವಾಗತಾರ್ಹ. ಈ ನಿರ್ಧಾರ ಮೊದಲೇ ಆಗಬೇಕಿತ್ತು. ಆದರೆ ತಮ್ಮ ಕಾರ್ಪೊರೇಟ್ ಸ್ನೇಹಿತರನ್ನು ಉದ್ದಾರ ಮಾಡಲು ತಂದಿದ್ದ ಈ ಕಾನೂನು ರದ್ದು ಮಾಡಲು ಪ್ರಧಾನಿ‌‌ ಮೋದಿ ಮೀನ‌ ಮೇಷ ಎಣಿಸಿದ್ದರು. ಕೊನೆಗೂ ರೈತರ ಸಾಂಘಿಕ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ. ಇದು ದೇಶದ ರೈತರ ನೈತಿಕ ಜಯ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರಾಳ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳಲು BJPಯವರು ಮಾಡಬಾರದ ಕೆಲಸ‌ ಮಾಡಿದರು. ರೈತರಿಗೆ ಉಗ್ರರ ಪಟ್ಟ ಕಟ್ಟಿದರು. ರೈತರ ನ್ಯಾಯಯುತವಾದ ಹೋರಾಟವನ್ನು ಭಯೋತ್ಪಾದಕ ಕೃತ್ಯಕ್ಕೆ ಹೋಲಿಸಿದರು. ಕೊನೆಗೆ ತಮ್ಮ ಯಾವ ಕುತಂತ್ರವೂ ಫಲಿಸದೆ ರೈತರ ಮುಂದೆ ಶರಣಾಗಿದ್ದಾರೆ. ರೈತ ಸಿಡಿದು ನಿಂತರೆ ಏನಾಗಲಿದೆ ಎಂಬುದಕ್ಕೆ ಕಾಯ್ದೆ ವಾಪಾಸಾತಿಯೇ ನಿದರ್ಶನ ಎಂದಿದ್ದಾರೆ.

ಕೃಷಿ ಕಾಯ್ದೆಯು ಒಂದು ವರ್ಗದ ರೈತರಿಗೆ ಮನವರಿಕೆಯಾಗಲು ವಿಫಲವಾದ ಕಾರಣ ಕಾಯ್ದೆ ವಾಪಾಸು ಪಡೆಯಲಾಗಿದೆ ಎಂದು ಮೋದಿ ಹೇಳಿದ್ದಾರೆ. ಅದು ನಿಜವಲ್ಲ. ಇತ್ತೀಚೆಗೆ ನಡೆದ ಉಪಚುನಾವಣೆಗಳ ಸೋಲು ಹಾಗೂ ಮುಂಬರಲಿರುವ ಉ.ಪ್ರದೇಶ ಚುನಾವಣೆಯೇ ಕಾಯ್ದೆ ವಾಪಾಸಾತಿಗೆ ನೈಜ ಕಾರಣ. ರೈತರನ್ನು ಕೆಣಕಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅಂತಿಮ ಸತ್ಯ.ಎಂದು ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ವಿವಾದಿತ ಮೂರು ಕೃಷಿ ಮಸೂದೆಗಳ ಕೇಂದ್ರ ಸರ್ಕಾರ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್, ರೈತರ ಆಂದೋಲನ (Farmers Protest) ತಕ್ಷಣವೇ ಹಿಂಪಡೆಯುವುದಿಲ್ಲ, ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು(farm laws) ರದ್ದುಪಡಿಸುವ ದಿನಕ್ಕಾಗಿ ನಾವು ಕಾಯುತ್ತೇವೆ. ಎಂಎಸ್​​ಪಿ (MSP) ಜೊತೆಗೆ ಸರ್ಕಾರವು ರೈತರ ಇತರ ಸಮಸ್ಯೆಗಳನ್ನು ಚರ್ಚಿಸಬೇಕು ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.