'ಸಿದ್ದು ಅಲ್ಲ, ನೀವು ಸಿಎಂ ಆಗೋದಾದ್ರೆ ಮತ ಹಾಕ್ತೀವಿ'
ಸಿದ್ದು ಅಲ್ಲ, ನೀವು ಸಿಎಂ ಆಗೋದಾದ್ರೆ ಮತ ಹಾಕ್ತೀವಿ| ಹುಣಸೂರು ಮತದಾರರಿಂದ ಪರಂಗೆ ಇಕ್ಕಟ್ಟು
ಹುಣಸೂರು[ನ.26]: ‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಹುಣಸೂರಲ್ಲಿ ಮಂಜುನಾಥ್ ಅವರಿಗೆ ಮತ ಹಾಕಬೇಕಾ? ಆಗುವುದಿಲ್ಲ. ನೀವು ಸಿಎಂ ಆಗುತ್ತೀರಾ ಹೇಳಿ ಮತ ಹಾಕುತ್ತೇವೆ.’
-ಇದು ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಪರವಾಗಿ ಸೋಮವಾರ ಪ್ರಚಾರ ನಡೆಸಲು ಆಗಮಿಸಿದ್ದ ಮಾಜಿ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ಅವರನ್ನು ಬನ್ನಿಕುಪ್ಪೆ ಗ್ರಾಮಸ್ಥರು ಇಕ್ಕಟ್ಟಿನಲ್ಲಿ ಸಿಲುಕಿಸಿದ ಪರಿ.
ಡಾ.ಪರಮೇಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮದ ದಲಿತ ಯುವಕರು, ‘ಕಾಂಗ್ರೆಸ್ನÜಲ್ಲಿ 10 ವರ್ಷ ಅಧ್ಯಕ್ಷರಾಗಿದ್ದೀರಿ ನೀವು. ಆಗ ಏಕೆ ಸಿಎಂ ಆಗಲಿಲ್ಲ? ನೀವು ಆಗುವುದಾದರೆ ಹೇಳಿ. ಈ ಉಪ ಚುನಾವಣೆಯಲ್ಲಿ ಮತ ಹಾಕುತ್ತೇವೆ’ ಎಂದು ತಿಳಿಸಿದರು. ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಲಾಗದೇ ಇಕ್ಕಟ್ಟಿಗೆ ಸಿಲುಕಿದ ಡಾ.ಪರಮೇಶ್ವರ್, ‘ತಾಳ್ಮೆಯಿಂದ ಇರಿ ಅವಕಾಶ ಸಿಗಲಿದೆ. ಈ ಬಾರಿ ಜನ ಮತ ನೀಡಿ, ಪಕ್ಷ ಅಧಿಕಾರಕ್ಕೆ ಬಂದರೆ ಪಕ್ಷದ ವರಿಷ್ಠರು ಸಿಎಂ ಮಾಡುತ್ತಾರೆ. ಕಾಯಬೇಕು’ ಎಂದರು.