ಕರ್ನಾಟಕ ಸಿಎಂ ಬದಲಾವಣೆ ಚರ್ಚೆ ಹೈಕಮಾಂಡ್ ಕಿವಿಗೆ: ದಿಲ್ಲಿಯಿಂದ ಬಂತು ಸ್ಪಷ್ಟನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆಯಾಗಲಿದ್ದು, ಮೂರನೇ ಸಿಎಂ ಬರುತ್ತಾರೆ ಎನ್ನುವ ಚರ್ಚೆ ರಾಜ್ಯ ರಾಜಕಾರಣದಲ್ಲಿ ಜೋರಾಗಿದೆ. ಇನ್ನು ಈ ಬಗ್ಗೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ಪ್ರತಿಕ್ರಿಯಿಸಿದ್ದು ಹೀಗೆ..
ನವದೆಹಲಿ, (ಆ.12): ಕರ್ನಾಟಕದಲ್ಲಿ ಸಿಎಂ ಬದಾಲವಣೆ ಚರ್ಚೆ ಜೋರಾಗಿದೆ. ಈ ಹಿಂದಿನಂತೆ ಈ ಬಾರಿಯೂ ಮೂರನೇ ಮುಖ್ಯಮಂತ್ರಿ ಯಾಗ್ತಾರಾ ಎನ್ನುವ ಕುತೂಹಲ ಮೂಡಿಸಿದೆ. ಮೂರನೇ ಸಿಎಂ ಗುಮ್ಮ ಎದ್ದಿದ್ದೇ ಸ್ವತಃ ಕೇಸರಿ ಕೋಟೆಯಿಂದ. ಇದರ ಸೃಷ್ಠಿಕರ್ತ ಬೇರಾರೂ ಅಲ್ಲ, ಬಿಜೆಪಿಯ ಮಾಜಿ ಶಾಸಕ ಸುರೇಶ್ ಗೌಡ. ಅದನ್ನು ದೊಡ್ಡದಾಗಿ ಬಿಂಬಿಸಿ ಸುದ್ದಿ ಸ್ಫೋಟವಾಗುವಂತೆ ಮಾಡಿದ್ದು ಕಾಂಗ್ರೆಸ್.
ಹೌದು....ಸಿಎಂ ಬದಲವಾಣೆ ಬಗ್ಗೆ ಕಾಂಗ್ರೆಸ್ ಮಾಡಿದ ಟ್ವೀಟ್ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ತಮ್ಮದೇಯಾದ ಅಭಿಪ್ರಾಯಗಳನ್ನ ಹೇಳಿಕೊಂಡು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇನ್ನು ಈ ಸಿಎಂ ಬದಲಾವಣೆ ಚರ್ಚೆಯ ಅಬ್ಬರ ಹೈಕಮಾಂಡ್ ನಾಯಕರ ಕಿವಿಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ ಕೊಟ್ಟಿದ್ದಾರೆ.
ವಿಳಂಬ ಹುಟ್ಟು ಹಾಕಿದ ಅನುಮಾನ!: 3ನೇ ಸಿಎಂ ಬಾಂಬ್, ಬಿಜೆಪಿಯಲ್ಲಿ ತಳಮಳ?
ಗೊಂದಲಗಳಿಗೆ ತೆರೆ ಎಳೆದ ಅರುಣ್ ಸಿಂಗ್
ನವದೆಹಲಿಯಲ್ಲಿ ಇಂದು(ಶುಕ್ರವಾರ) ಮಾಧ್ಯಮಗಳಿಗೆ ಪ್ರತಿಯಿಸಿದ ಅರುಣ್ ಸಿಂಗ್, ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ಅಸೆಂಬ್ಲಿ ಚುನಾವಣೆ ಎದುರಿಸುತ್ತೇವೆ. ಸಿಎಂ ಬದಲು ಮಾಡುತ್ತಾರೆ ಎನ್ನುವ ವಿಚಾರದಲ್ಲಿ ಸತ್ಯಾಂಶ ಇಲ್ಲ. ಸಿಎಂ ಬದಲಾವಣೆ ಹೇಳಿಕೆ ಕೇವಲ ಕಾಂಗ್ರೆಸ್ ಸೃಷ್ಟಿ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ಕಾಂಗ್ರೆಸ್ ಒಳಜಗಳದಿಂದ ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ. ಸಿಎಂ ಬದಲಾವಣೆ ಆಗುತ್ತಾರೆ ಎಂದು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಉತ್ತಮ ರೀತಿಯ ಅಭಿವೃದ್ಧಿ ಕಾರ್ಯ ನಡೆದಿದೆ. ಬೊಮ್ಮಾಯಿ ಅವರು ಕಾಮನ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಸ್ಥಾನದಿಂದ ಬೊಮ್ಮಾಯಿ ಇಳಿಸುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು. ಈ ಮೂಲಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆಳೆದರು.
ಮುಖ್ಯಮಂತ್ರಿ ಬದಲಾಗ್ತಾರಾ ಇಲ್ವೋ ಗೊತ್ತಿಲ್ಲ. ಆದ್ರೆ ಇದ್ದಕ್ಕಿದ್ದಂತೆ ಎದ್ದು ಕೂತ 3ನೇ ಸಿಎಂ ಗುಮ್ಮ ರಾಜ್ಯ ರಾಜಕಾರಣದಲ್ಲಿ ಸಂಚಲನ, ಸುನಾಮಿ ಎಬ್ಬಿಸಿರೋದಂತೂ ಸತ್ಯ.