3 ದಿನದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎಂದ ಯಡಿಯೂರಪ್ಪ
- ಕೇಂದ್ರ ನಾಯಕರ ನಿರ್ಧಾರವೇ ಅಂತಿಮ
- ಇನ್ನೂ ಅನೇಕ ಮಂದಿ ಬಿಜೆಪಿ ಬರ್ತಾರೆ
- ಯತ್ನಾಳ್ ಹೇಳಿಕೆ ಬಗ್ಗೆ ಯಡಿಯೂರಪ್ಪ ಮೌನ
ಬೆಂಗಳೂರು (ಮೇ. 8): ಇನ್ನು ಮೂರು ದಿನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸಚಿವ ಸಂಪುಟ ವಿಸ್ತರಣೆ (Cabinet Expansion) ಅಥವಾ ಪುನಾರಚನೆಯಾಗಲಿದೆ (Reshuffle) ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.
ಶನಿವಾರ ದುಬೈ (Dubai) ಪ್ರವಾಸಕ್ಕೆ ತೆರಳುವ ಮುನ್ನ ಕಾವೇರಿ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧವಾಗಿರುತ್ತೇವೆ. ಕೇಂದ್ರ ನಾಯಕರ ನಿರ್ಧಾರವೇ ಇದರಲ್ಲಿ ಅಂತಿಮವಾಗಿರಲಿದೆ. ಆದರೆ, ಇನ್ನು ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಾಗುತ್ತದೆ’ ಎಂದರು.
ಅನೇಕರು ಬಿಜೆಪಿಗೆ ಬರ್ತಾರೆ: ‘ಬಹಳಷ್ಟುಮಂದಿ ಬಿಜೆಪಿ (BJP) ಬರುವವರಿದ್ದಾರೆ. ನಮ ಪಕ್ಷ ಮತ್ತಷ್ಟುಬಲವಾಗಲಿದೆ. ನಮ್ಮ ಗುರಿಯಾದ 150 ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ. ಪ್ರಧಾನಿಯವರಿಗೆ (Prime Minister)150 ಕ್ಷೇತ್ರ ಗೆಲ್ಲುವ ಆಶ್ವಾಸನೆ ನೀಡಿದ್ದೇವೆ. ಆ ಗುರಿ ಮಟ್ಟಲು ರಾಜ್ಯ ಪ್ರವಾಸ ಕೈಗೊಳ್ಳುತ್ತೇವೆ. ಪ್ರತಿ ಜಿಲ್ಲೆಯಿಂದಲೂ ಪಕ್ಷಕ್ಕೆ ಬರುತ್ತಾರೆ. ಅದರಲ್ಲಿಯೂ ಮಂಡ್ಯದಿಂದ ಅನೇಕ ಜನ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ’ ಎಂದು ತಿಳಿಸಿದರು.
ಯತ್ನಾಳ್ ಬಗ್ಗೆ ಮೌನ: ಮುಖ್ಯಮಂತ್ರಿಗಳ ಸ್ಥಾನಕ್ಕೆ 2,500 ಕೋಟಿ ರು. ನೀಡಬೇಕು ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಯತ್ನಾಳ್ ಹೇಳಿಕೆ ಬಗ್ಗೆ ನಾನೇನು ಮಾತನಾಡುವುದಿಲ್ಲ. ಪಕ್ಷದ ನಾಯಕರಿದ್ದು, ಅವರು ಗಮನಿಸುತ್ತಾರೆ ಎಂದರು.
ಯತ್ನಾಳ್ ಹೇಳಿಕೆ ಬಗ್ಗೆ ಶಿಸ್ತು ಸಮಿತಿಗೆ ಮಾಹಿತಿ: ಕಟೀಲ್
ತುಮಕೂರು (ಮೇ. 8): ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಹಿನ್ನೆಲೆಯಲ್ಲಿ ಕೇಂದ್ರದ ಶಿಸ್ತು ಸಮಿತಿಗೆ ಎಲ್ಲಾ ಮಾಹಿತಿ ಕೊಟ್ಟಿರುವುದಾಗಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ (Nalin Kumar Katil) ಮಾಹಿತಿ ನೀಡಿದರು.
‘.2500 ಕೋಟಿ ಕೊಟ್ರೆ ಸಿಎಂ ಮಾಡ್ತೀನಿ ಅಂದ್ರು’ ಎಂಬ ಶಾಸಕ ಯತ್ನಾಳ್ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕಟೀಲ್, ಯತ್ನಾಳ್ ಯಾವ ಭಾವನೆಯಿಂದ ಹೇಳಿದ್ದಾರೋ ಗೊತ್ತಿಲ್ಲ. ಅವರ ಪರಿಪೂರ್ಣ ವಿವರಣೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಭಾರತೀಯ ಜನತಾ ಪಾರ್ಟಿಯಲ್ಲಿ ದೊಡ್ಡವರು ಸಣ್ಣವರು ಅನ್ನುವ ಪ್ರಶ್ನೆಯೇ ಇಲ್ಲ. ಇಲ್ಲಿ ನಾಯಕತ್ವ ಅನ್ನುವುದು ಇಲ್ಲ. ಎಲ್ಲವೂ ಕಾರ್ಯಕರ್ತರ ಆಧಾರಿತವಾಗಿರುವಂತಹದು ಎಂದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಂವಿಧಾನಿಕವಾದಂತಹ ಇತಿಮಿತಿಗಳು ಇರುತ್ತವೆ. ಇದುವರೆಗೆ ಎರಡು ಬಾರಿ ಅವರಿಗೆ ನೋಟಿಸ್ ಕೊಟ್ಟಿದ್ದು ಎರಡು ಬಾರಿಯೂ ಉತ್ತರ ಕೊಟ್ಟಿದ್ದಾರೆ. ಈ ಬಾರಿಯೂ ಕೇಂದ್ರದ ಶಿಸ್ತು ಸಮಿತಿಗೆ ಮಾಹಿತಿ ಕೊಟ್ಟಿರುವುದಾಗಿ ತಿಳಿಸಿದರು. ಅವರು ಸೋನಿಯಾ ಗಾಂಧಿ ಬಗ್ಗೆ ಮಾತನಾಡಿದ್ದಾರೆ. ಒಟ್ಟಾರೆಯಾಗಿ ರಾಜಕೀಯ ವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ. ಅವರು ಎಲ್ಲೂ ಪಕ್ಷ ಎಂದು ಹೇಳಿಲ್ಲ. ಅವರು ಈ ಹಿಂದೆ ಪಕ್ಷೇತರರಾಗಿದ್ದರು. ಯಡಿಯೂರಪ್ಪ ಎಲ್ಲಾ ಸೇರಿ ಅವರನ್ನು ಪಕ್ಷಕ್ಕೆ ಕರೆ ತಂದರು. ಸೀಟ್ ಕೊಟ್ಟಿದ್ದೇವೆ ಎಂದರು.
ಕೋಲಾರ ಜಿಲ್ಲಾ ಜೈಲಲ್ಲಿ ಬಾಲಾಪರಾಧಿ ಸೆರೆ ಪತ್ತೆ!
ಕೋಲಾರ: ಬಾಲಾಪರಾಧಿಯೊಬ್ಬ ಕೋಲಾರ ಜಿಲ್ಲಾ ಕಾರಾಗೃಹದಲ್ಲಿ ಇರುವುದು ಪತ್ತೆಯಾಗಿದೆ. ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೀರಪ್ಪ ಅವರು ಶುಕ್ರವಾರ ಕೋಲಾರ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಾಲಾಪರಾಧಿ ಇರುವುದು ಬೆಳಕಿಗೆ ಬಂದಿದೆ. ಬಳಿಕ ಕೋಲಾರದ ಪೊಲೀಸರು ಮತ್ತು ಜಿಲ್ಲಾ ಕಾರಾಗೃಹ ಅಧಿಕಾರಿಗಳು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಪೋಕ್ಸೋ ನ್ಯಾಯಾಲಯದ ಅಧಿಕಾರಿಗಳು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ಬಾಲಾಪರಾಧಿಯನ್ನು ಬಾಲ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಸಿ.ಎಚ್.ಗಂಗಾಧರ್ ತಿಳಿಸಿದ್ದಾರೆ.