ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ‘ಕರಿಯ’ ಹೇಳಿಕೆ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಉಪಾಧ್ಯಕ್ಷ ಎ.ಆರ್.ಎಂ.ಹುಸೇನ್‌ ಸೇರಿ ಹಲವರು ಸ್ವಪಕ್ಷೀಯರೇ ಆಗ್ರಹಿಸಿದ್ದರು.

ಬೆಂಗಳೂರು (ನ.24): ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ‘ಕರಿಯ’ ಹೇಳಿಕೆ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಉಪಾಧ್ಯಕ್ಷ ಎ.ಆರ್.ಎಂ.ಹುಸೇನ್‌ ಸೇರಿ ಹಲವರು ಸ್ವಪಕ್ಷೀಯರೇ ಆಗ್ರಹಿಸಿದ್ದರು. ಇದೀಗ ಉಪ ಚುನಾವಣೆ ಫಲಿತಾಂಶದಲ್ಲಿ ಜಮೀರ್‌ ಹೇಳಿಕೆಯಿಂದ ಕಾಂಗ್ರೆಸ್‌ಗೆ ಯಾವುದೇ ನಷ್ಟ ಉಂಟಾಗಿಲ್ಲ ಎಂಬುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಜಮೀರ್‌ ನಿರಾಳರಾದಂತಾಗಿದೆ. ಏಕೆಂದರೆ, ಜಮೀರ್‌ ಅವರ ಹೇಳಿಕೆಯಿಂದ ದುಷ್ಪರಿಣಾಮ ನಿರೀಕ್ಷಿಸಿದ್ದ ಚನ್ನಪಟ್ಟಣ ಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಅತ್ಯಧಿಕ ಮುನ್ನಡೆ ಲಭಿಸಿದೆ. 

Add Asianetnews Kannada as a Preferred SourcegooglePreferred

ಮಾಜಿ ಪ್ರಧಾನಿ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರ ಪುತ್ರ ನಿಖಿಲ್‌ ವಿರುದ್ಧ ಸಿ.ಪಿ.ಯೋಗೇಶ್ವರ್‌ 25,413 ಮತಗಳ ಮುನ್ನಡೆ ಪಡೆದಿದ್ದಾರೆ. ಹೀಗಾಗಿ ಜಮೀರ್‌ ಹೇಳಿಕೆಯಿಂದ ಕಾಂಗ್ರೆಸ್‌ಗೆ ಯಾವುದೇ ಹಾನಿ ಉಂಟಾಗಿಲ್ಲ. ಬದಲಿಗೆ ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ನೆರವಾಗಿದೆ ಎಂಬ ವಿಶ್ಲೇಷಣೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜಮೀರ್‌ ನಿರಾಳ ಎಂಬಂತಾಗಿದೆ. ಇದಾಗದೇ ಚನ್ನಪಟ್ಟಣದಲ್ಲಿ ಹಿನ್ನಡೆಯೇನಾದರೂ ಆಗಿದ್ದರೆ ಆಗ ಅದರ ಹೊಣೆ ಜಮೀರ್‌ ಮೇಲೆ ಬೀಳುವ ಸಾಧ್ಯತೆ ಇತ್ತು. ಇದರಿಂದ ಜಮೀರ್‌ ಬಚಾವ್‌ ಆಗಿದ್ದಾರೆ.

ನೋಟಿಸ್‌ ನೀಡಿ ಸ್ಪಷ್ಟನೆ ಕೇಳಲಿದೆ: ಕರಿಯ ಎಂಬಂತಹ ಪದ ಬಳಕೆ ಸರಿಯಲ್ಲ. ಇದು ಅವರವರ ಸಂಸ್ಕೃತಿ ಆಧಾರದ ಮೇಲೆ ಮಾತನಾಡಿರಬಹುದು. ಆದರೆ ಇದು ಅಸಂಸದೀಯ ಹಾಗೂ ಕೆಟ್ಟ ಅಭಿರುಚಿಯ ಪದ ಬಳಕೆ. ಈ ಬಗ್ಗೆ ಪಕ್ಷದ ಶಿಸ್ತು ಸಮಿತಿ ನೋಟಿಸ್‌ ನೀಡಿ ಸ್ಪಷ್ಟೀಕರಣ ಕೇಳಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. ಕರಿಯ, ಕುಳ್ಳ, ಕೊಚ್ಚೆಯಂತಹ ಪದ ಬಳಕೆಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್‌ ಅವರ ಕರಿಯ ಪದ ಬಳಕೆ ಸರಿಯಲ್ಲ ಎಂದು ಈಗಾಗಲೇ ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ಹೇಳಿದ್ದಾರೆ. ಇಂತಹ ಹೇಳಿಕೆಗಳು ಅವರವರ ಸಂಸ್ಕೃತಿ ಆಧಾರದ ಮೇಲೆ ಬಂದಿರಬಹುದು. ಇದು ಬಹಳ ಕೆಟ್ಟದಾಗಿ ಕೇಳಿಸುತ್ತದೆ. ಇದಕ್ಕಾಗಿಯೇ ರೆಹಮಾನ್‌ ಖಾನ್‌ ಅಧ್ಯಕ್ಷತೆಯಲ್ಲಿ ಶಿಸ್ತು ಸಮಿತಿಯಿದ್ದು, ಅವರು ಸ್ಪಷ್ಟನೆ ಕೇಳುತ್ತಾರೆ ಎಂದರು.

ನನಗೆ ರಾಜಕೀಯದಿಂದ ನಿವೃತ್ತಿ ಕೊಡಿಸಲು ಅವರು ತಯಾರಿದ್ದಾರೆ: ಜಿ.ಟಿ.ದೇವೇಗೌಡ ಅಸಮಾಧಾನ

ವಕ್ಫ್‌ ವಿಷಯದಲ್ಲಿ ಶಾಂತಿ ಕದಡಿದರೆ ಕಠಿಣ ಕ್ರಮ: ವಕ್ಫ್ ವಿಚಾರವನ್ನು ಬಿಜೆಪಿಯವರು ರಾಜಕೀಯ ಅಸ್ತ್ರ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕೋಮುಗಲಭೆ ಅಥವಾ ಶಾಂತಿ ಕದಡುವ ಪ್ರಯತ್ನ ಆಗಬಹುದು. ಒಂದೊಮ್ಮೆ ಆ ರೀತಿ ಆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ವಕ್ಫ್‌ ವಿಚಾರವಾಗಿ ಪಾದಯಾತ್ರೆ ಮಾಡುತ್ತೇವೆ ಎಂದಿದ್ದಾರೆ. ಆದರೆ ಯಾವ ರೀತಿ ಎಂಬುದನ್ನು ಊಹಿಸಲಾಗುವುದಿಲ್ಲ. ಶಾಂತಿ ಕದಡುವುದಕ್ಕಾಗಿಯೇ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ನಾವು ಆರೋಪ ಮಾಡಿದ್ದೇವೆ. ನಾವು ರಾಜ್ಯದಲ್ಲಿ ಒಂದೂವರೆ ವರ್ಷದಿಂದ ಶಾಂತಿ ಕಾಪಾಡಿದ್ದೇವೆ. ಶಾಂತಿ ಕದಡುವ ಅಥವಾ ಭಂಗ ಮಾಡುವ ಯಾವುದೇ ಪ್ರಯತ್ನ ಕಂಡು ಬಂದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಾವು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.