Asianet Suvarna News Asianet Suvarna News

Conversion Politics: ಮತಾಂತರ ನಿಷೇಧಕ್ಕೆ ಸಹಿ ಹಾಕಿದ್ದು ನಿಜ: ಸಿದ್ದರಾಮಯ್ಯ

*  ವರದಿ ಓದಿದ ಮೇಲೆ ಇದು ಬೇಡ ಅಂತ ಆಂಜನೇಯಗೆ ಹೇಳಿದೆ
*  ಈಗ ನನ್ನ ಮೇಲೆ ಗೂಬೆ ಕೂರಿಸಲು ಬಿಜೆಪಿ ಸಂಚು
* ಡಿಕೆಶಿ ಮತ್ತೆ ಸೆಲ್ಫಿ ಕಿರಿಕ್‌ 
 

It Was True That I Signed to Anti-Conversion Act in Karnataka Says Siddaramaiah grg
Author
Bengaluru, First Published Dec 29, 2021, 5:07 AM IST

ಮದ್ದೂರು(ಡಿ.29):  ಮತಾಂತರ ನಿಷೇಧ ಮಸೂದೆ(Anti-Conversion Act) ಆರ್‌ಎಸ್‌ಎಸ್‌(RSS) ಅಜೆಂಡಾ. ಬಿಜೆಪಿಯವರ(BJP) ಮೂಲಕ ಸದನದಲ್ಲಿ ಮಂಡಿಸುತ್ತಿದ್ದಾರೆ. ಮತಾಂತರ ನಿಷೇಧ ಕಾಯಿದೆ ಬೇಕೆಂದು ಕೇಳಿದ್ದವರು ಯಾರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಕಿಡಿ ಕಾರಿದ್ದಾರೆ.

ಇಲ್ಲಿನ ಶಿವಪುರದಲ್ಲಿ ಆಯೋಜಿಸಲಾಗಿದ್ದ 137ನೇ ಕಾಂಗ್ರೆಸ್‌(Congress) ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಯಡಿಯೂರಪ್ಪ(BS Yediyurappa) ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಡಾ.ಚಿದಾನಂದಮೂರ್ತಿ, ಡಾ.ಲೀಲಾ, ಮತ್ತೂರು ಕೃಷ್ಣಮೂರ್ತಿ ಅವರು ಮಧ್ಯಪ್ರದೇಶ ಮಾದರಿಯಲ್ಲಿ ಮತಾಂತರ ಮಸೂದೆಯನ್ನು ಜಾರಿಗೆ ತರುವಂತೆ ವರದಿಯೊಂದನ್ನು ಕೊಟ್ಟಿದ್ದರು. ಇದು ನಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಚಿವ ಸಂಪುಟದಲ್ಲಿ ಮಂಡಿಸಲು ಬಂತು. ಮಧ್ಯಪ್ರದೇಶವಿರುವ ಜಾಗದಲ್ಲಿ ಕರ್ನಾಟಕ(Karnataka) ಎಂದು ಬರೆದರೆ ಸಾಕು ಎಂಬ ಸಲಹೆ ಬಂದಿತು. ಅದಕ್ಕೆ ನಾನು ಸಹಿ ಹಾಕಿದ್ದು ನಿಜ. ಆನಂತರದಲ್ಲಿ ಅದರೊಳಗಿರುವ ಅಂಶಗಳನ್ನು ಓದಿದಾಗ ಇದರ ಅಗತ್ಯವಿಲ್ಲ ಎಂದು ಸಚಿವ ಆಂಜನೇಯನಿಗೆ ಹೇಳಿ ಬರೆಸಿ ಪಕ್ಕಕ್ಕಿಟ್ಟೆ. ಈಗ ಉದ್ದೇಶಪೂರ್ವಕವಾಗಿ ಬಿಜೆಪಿಯವರು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರಕಾರ ಬಂದರೆ ವಾರದಲ್ಲಿ Anti-Conversion Act ಇರೋಲ್ಲ: ಸಿದ್ದರಾಮಯ್ಯ

ಈಶ್ವರಪ್ಪ ಪೆದ್ದ:

ನಾನು ಇದು ಆರ್‌ಎಸ್‌ಎಸ್‌ ಅಜೆಂಡಾ ಎಂದು ಸದನದಲ್ಲಿ ಹೇಳಿದಾಗ, ಈಶ್ವರಪ್ಪ(KS Eshwarappa) ಪೆದ್ದ. ಹೌದು ಇದು ಆರ್‌ಎಸ್‌ಎಸ್‌ನವರು ಮಾಡಿದ್ದು ಎಂದು ಒಪ್ಪಿಕೊಂಡುಬಿಟ್ಟ ಎಂದರು.

ಡಿಕೆಶಿ ಮತ್ತೆ ಸೆಲ್ಫಿ ಕಿರಿಕ್‌:

ತಮ್ಮದೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಗದರಿದ ಘಟನೆ ನಡೆಯಿತು. ಧ್ವಜಾರೋಹಣ ಮುಗಿದ ಬಳಿಕ ಡಿಕೆಶಿ ಜತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬ ಮುಂದಾದ. ಇದರಿಂದ ಕೋಪಗೊಂಡ ಡಿಕೆಶಿ ಗದರಿದರಲ್ಲದೆ, ಆತನ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದರು. ಬಳಿಕ ಅಭಿಮಾನಿಯನ್ನು ಹಿಂದಕ್ಕೆ ಎಳೆದು ತಳ್ಳಿ ಮುಂದೆ ಸಾಗಿದರು.

ಬೃಹತ್‌ ಪಾದಯಾತ್ರೆ

ಕೆಪಿಸಿಸಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 137ನೇ ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ(Congress Foundation Day) ಮದ್ದೂರಿನ ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ನಡೆಯಿತು. ಇದರ ಅಂಗವಾಗಿ ಸೇವಾದಳ ಕಾರ್ಯಕರ್ತರು ಬೃಹತ್‌ ಪಾದಯಾತ್ರೆ(Padayatra) ನಡೆಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸೇವಾದಳದ ಸಹಸ್ರಾರು ಕಾರ್ಯಕರ್ತರು ಬಿಳಿಯ ಉಡುಪು ತೊಟ್ಟು, ಕಾಂಗ್ರೆಸ್‌ ಬಾವುಟ ಹಿಡಿದು ಪಟ್ಟಣದ ಪ್ರವಾಸಿ ಮಂದಿರದಿಂದ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ತನಕ ಪಾದಯಾತ್ರೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಸಂಸದ ಆರ್‌.ಧ್ರುವನಾರಾಯಣ್‌, ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳೀಗೌಡ ಮುಂತಾದವರು ಪಾಲ್ಗೊಂಡಿದ್ದರು.

Anti Conversion Bill: ಸಿಎಂ, ಸ್ಪೀಕರ್‌, ಗೃಹ ಸಚಿವರ ವಿರುದ್ಧ ದೂರು

ರಾಜ್ಯದಲ್ಲಿ ಮತಾಂತರ ತಡೆ ಮಸೂದೆ ಜಾರಿಗೆ ತರುವಂತೆ ಕೇಳಿದವರು ಯಾರು? ಮಸೂದೆಯನ್ನು ತುರ್ತಾಗಿ ಜಾರಿಗೆ ತರುವ ಅಗತ್ಯವೇನಿತ್ತು? ಯಾವ ಪುರುಷಾರ್ಥಕ್ಕೆ ಬಿಜೆಪಿ ಈ ಮಸೂದೆಯನ್ನು ಜಾರಿಗೆ ತಂದಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಜನರ ಭಾವನೆಗಳನ್ನು ಕರೆಳಿಸಿ ಹಿಂದೂಗಳನ್ನು ಒಗ್ಗೂಡಿಸಿ, ಮುಸ್ಲಿಂ ಮತ್ತು ಕ್ರೈಸ್ತರನ್ನು ಬೇರ್ಪಡಿಸುವ ಕಾರಣಕ್ಕೆ ಮಸೂದೆಯನ್ನು ಜಾರಿಗೆ ತರಲಾಗಿದೆ ಅಂತ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. 

ಕಾಂಗ್ರೆಸ್‌ ಇತಿಹಾಸಕ್ಕೂ ಬಿಜೆಪಿ ಇತಿಹಾಸಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಮ್ಮದು ತ್ಯಾಗ-ಬಲಿದಾನದ ಇತಿಹಾಸ. ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ, ಪ್ರಜಾಪ್ರಭುತ್ವ, ಕೃಷಿಗೆ ಶಕ್ತಿ ಸೇರಿದಂತೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಿದ್ದು ಕಾಂಗ್ರೆಸ್‌. ಕೊರೋನಾ ಸಂಕಷ್ಟಕಾಲದಲ್ಲಿ ಪ್ರಾಮಾಣಿಕವಾಗಿ ಜನಸೇವೆಯಲ್ಲಿ ತೊಡಗುವ ಮೂಲಕ ಕಾಂಗ್ರೆಸ್‌ ಅಧಿಕಾರಕ್ಕೆ ಮಾತ್ರ ಹಾತೊರೆಯುವುದಿಲ್ಲ ಎನ್ನುವುದನ್ನು ಸಾಬೀತುಪಡಿಸಿತು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.  
 

Follow Us:
Download App:
  • android
  • ios