ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಶಾಸಕ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶೀ ಸಿ.ಟಿ.ರವಿಯ ನಕಲಿ ಪತ್ರಿಕಾ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಲಿಂಗಾಯಿತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎನ್ನುವ ನಕಲಿ ಪೋಸ್ಟ್ ಬಿಜೆಪಿ ವಲಯಕ್ಕೆ ಬಿಸಿ ತುಪ್ಪವಾಗಿತ್ತು.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಏ.15): ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಶಾಸಕ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶೀ ಸಿ.ಟಿ ರವಿಯ ನಕಲಿ ಪತ್ರಿಕಾ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಲಿಂಗಾಯಿತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎನ್ನುವ ನಕಲಿ ಪೋಸ್ಟ್ ಬಿಜೆಪಿ ವಲಯಕ್ಕೆ ಬಿಸಿ ತುಪ್ಪವಾಗಿತ್ತು. ಲಿಂಗಾಯಿತರು ಸಿ.ಟಿ.ರವಿ ವಿರುದ್ಧ ನಿಗಿ-ನಿಗಿ ಕೆಂಡವಾಗಿದ್ರು. ಆದ್ರೀಗ, ಸಿ.ಟಿ.ರವಿ ಹೇಳಿದ್ದಾರೆಂದು ಎಡಿಟ್ ಹೇಳಿಕೆಯನ್ನ ವೈರಲ್ ಮಾಡಿದ್ದ ಆ ಕಾಂಗ್ರೆಸ್ಸಿನ ಐಟಿ ಸೇಲ್ ಕಾರ್ಯಕರ್ತನನ್ನ ಕಾಫಿನಾಡ ಖಾಕಿ ಪಡೆ ಎತ್ತಾಕ್ಕೊಂಡ್ ಬಂದಿದೆ. ಆ ವೇಳೆಯಲ್ಲಿ ಪೊಲೀಸ್ ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಕ್ಸಮರ ನಡೆಯಿತು.

ಪೊಲೀಸ್ ಠಾಣೆ ಮುಂದೆ ಬಹಿರಂಗ ಕ್ಷಮೆ ಕೇಳಿದ್ದ ಆರೋಪಿ: ಲಿಂಗಾಯುತರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಿಲ್ಲ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆಂದು ಈ ಹೇಳಿಕೆಯ ಪೇಪರ್ ಕಟ್ಟಿಂಗ್ ರಾಜ್ಯ ರಾಜಕೀಯ, ಬಿಜೆಪಿ ಹಾಗೂ ಲಿಂಗಾಯುತ ಸಮುದಾಯದಲ್ಲಿ ಅಲ್ಲೋಲ-ಕಲ್ಲೋಲ ಮಾಡಿತ್ತು. ಲಿಂಗಾಯುತರು ಸಿ.ಟಿ.ರವಿ ವಿರುದ್ಧ ಕೊತ-ಕೊತ ಕುದಿಯುತ್ತಿದ್ದರು. ಆದರೆ, ಸಿ.ಟಿ.ರವಿ ಅದು ನನ್ನ ಹೇಳಿಕೆಯಲ್ಲ. 30 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ನನ್ನನ್ನ ಗೆಲ್ಲಿಸಿರೋದೆ ಲಿಂಗಾಯುತರು ಎಂದು ಸಮಾಜಾಯಿಷಿ ಕೂಡ ನೀಡಿದರು.

ಕೆಳಮಟ್ಟದ ರಾಜಕಾರಣದಿಂದ ನನಗೆ ಬೇಜಾರಾಗಿದೆ: ರಮೇಶ್‌ ಜಾರಕಿಹೊಳಿ

ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಮೂವರು ವಿರುದ್ಧ ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣೆಗೆ ದೂರು ನೀಡಿದ್ದರು. ಅದರಲ್ಲಿ ದಾವಣೆಗೆರೆ ಮೂಲದ ಹರೀಶ್ ಎಂಬ ಓರ್ವನನ್ನ ಪೊಲೀಸರು ಅರೆಸ್ಟ್ ಮಾಡಿ ಕರೆತಂದಿದ್ದರು. ಆತ ಕೂಡ ಪೊಲೀಸ್ ಹಾಗೂ ಬಿಜೆಪಿ ಕಾರ್ಯಕರ್ತರ ಎದುರು ತಪ್ಪಾಯ್ತು... ಇನ್ಮುಂದೆ ಹೀಗಾಗಲ್ಲ... ಕ್ಷಮಿಸಿ... ಇದನ್ನ ಇಲ್ಲಿಗೆ ಬಿಡಿ ಎಂದು ಮನವಿ ಮಾಡಿದ್ದಾರೆ. ಆದರೆ, ಠಾಣೆ ಮುಂದೆ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ನೇರವಾಗಿ ಫೈಟ್ ಮಾಡದೆ ಕಾಂಗ್ರೆಸ್ ಇಂತಹಾ ಗಿಮಿಕ್ ಕೈ ಹಾಕಿದೆ ಎಂದು ಆಕ್ರೋಶ ಹೊರಹಾಕಿದರು. 

ಬಿಜೆಪಿ ಕಾರ್ಯಕರ್ತರು ವರ್ಸಸ್ ಪೊಲೀಸರ ವಾಕ್ಸಮರ: ಯಾವಾಗ, ಪೊಲೀಸರು ಆ ಕಿಡಿಗೇಡಿಯನ್ನ ಕರೆತಂದಿದ್ದಾರೆ ಎಂದು ಗೊತ್ತಾಯ್ತೋ ನೋಡನೋಡ್ತಿದ್ದಂತೆ ಠಾಣೆ ಮುಂದೆ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಆತ, ಹೊರಬಂದು ಸಿ.ಟಿ.ರವಿಗೆ ಬಹಿರಂಗ ಕ್ಷಮೆ ಕೇಳಿದರೂ ಕಾರ್ಯಕರ್ತರ ಆಕ್ರೋಶ ತಣ್ಣಗಾಗಲಿಲ್ಲ. ಸ್ಟೇಷನ್ ಬೇಲ್ ಆಗಿದೆ. ಹೊರಬರಲೇಬೇಕು ಎಂದು ಕಾಯುತ್ತಿದ್ದರು. ಆದರೆ, ಆತ ಹೊರಬರಲೇ ಇಲ್ಲ. ಅಲ್ಲೇ ಓಡಾಡುತ್ತಿದ್ದ ಹರೀಶ್‍ಗೆ ಬಿಜೆಪಿ ಕಾರ್ಯಕರ್ತರು ಹತ್ತಿರ ಕರೆದಿದ್ದಾರೆ. ಈ ವೇಳೆ, ಪೊಲೀಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. 

ಕರ್ನಾಟಕದ ಮುಂದಿನ ಸಿಎಂ ಎಚ್‌.ಡಿ.ಕುಮಾರಸ್ವಾಮಿ: ಆರ್‌.ಉಗ್ರೇಶ್‌

ಈ ವೇಳೆ, ಪೊಲೀಸ್ ಬಿಜೆಪಿ ಕಾರ್ಯಕರ್ತನಿಗೆ ಮೇಲೆ ಕೈಹಾಕಿ ತಳ್ಳಿದ್ದಾರೆಂದು ಪೊಲೀಸರ ವಿರುದ್ಧವೂ ಆಕ್ರೋಶ ಹೊರಹಾಕಿದ್ದರು. ಒಟ್ಟಾರೆ, ಪೊಲೀಸರು ಆ ಕಿಡಿಗೇಡಿಯನ್ನ ಅರೆಸ್ಟ್ ಮಾಡಿದ್ದ ಚುನಾವಣೆ ವೇಳೆಯಲ್ಲಿ ಬಿಜೆಪಿ ಹಾಗೂ ಸಿ.ಟಿ.ರವಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸಿ.ಟಿ.ರವಿ ಹೇಳಿದ್ದಾರಂಬ ಆ ಹೇಳಿಕೆಯಿಂದ ಲಿಂಗಾಯುತರು ರೆಬಲ್ ಕೂಡ ಆಗಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.