ಪಕ್ಷ ಬಿಡುವ ಗಂಡು ನಾನಲ್ಲ, ಇಲ್ಲೇ ಇದ್ದೀನಿ, ಟಿಕೆಟ್ ಕೇಳ್ತೀನಿ: JDS ನಾಯಕನ ಖಡಕ್ ಮಾತು
ಈ ಹಿಂದೆ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಭಾರೀ ಸುದ್ದಿಯಾಗಿದ್ದ ಜೆಡಿಎಸ್ ನಾಯಕ ಇದೀಗ ಮತ್ತೆ ಸುದ್ದಿಯಾಗಿದ್ದಾರೆ.
ಮಂಡ್ಯ, (ಫೆ.07): ರಾಜ್ಯದಲ್ಲಿ ಮುಂಬರುವ ವಿಧಾನಸಭೆಗೆ ಜೆಡಿಎಸ್ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದೆ. ವಲಯವಾರು ವೀಕ್ಷಕರನ್ನ ನೇಮಕ ಮಾಡಿಕೊಂಡು ಪಕ್ಷ ಸಂಘಟನೆಗೆ ಮುಂದಾಗಿದೆ.
ಇದರ ಮಧ್ಯೆ ನಾಗಮಂಗಲದ ಮುಂದಿನ ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಬಹಿರಂಗವಾಗಿಯೇ ಹೇಳಿದ್ದಾರೆ.
ಪಕ್ಷದಿಂದ ದೂರ ಉಳಿದ ಜೆಡಿಎಸ್ ಶಾಸಕರ ಬಗ್ಗೆ ಕುಮಾರಸ್ವಾಮಿ ಖಡಕ್ ಮಾತು
ನಗರದಲ್ಲಿ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಮೇಗೌಡ, ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೀನಿ. ಮುಂದೆಯೂ ಇರ್ತೀನಿ. ಕೆಲವರು ನನ್ನನ್ನ ಕಳಿಸ್ಬೇಕು ಅಂತ ನೋಡ್ತಿದ್ದಾರೆ. ಆದ್ರೆ, ಪಕ್ಷ ಬಿಡುವ ಗಂಡು ನಾನಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಎಲ್ಲಾ ಪಕ್ಷಗಳನ್ನೂ ನೋಡಿದ್ದೇನೆ. ನಾನು ಈ ಪಕ್ಷದಲ್ಲೇ ಇದ್ದೀನಿ, ಇಲ್ಲೇ ಟಿಕೆಟ್ ಕೇಳ್ತೀನಿ. ಮುಂದಿನ ಚುನಾವಣೆಗೆ ನಾನೇ ಜೆಡಿಎಸ್ ಪಕ್ಷದ ಅಭ್ಯರ್ಥಿ. ಒಂದು ವೇಳೆ ಜೆಡಿಎಸ್ನಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸೋದು ಖಚಿತ ಎಂದು ಖಂಡತುಂಡವಾಗಿ ಹೇಳಿದರು.