ನನಗೆ ಮುಸ್ಲಿಮರ ಮತಗಳು ಬೇಡ, ಹಿಂದುಗಳ ಮತಗಳಷ್ಟೇ ಸಾಕು: ಬಿಜೆಪಿ ಶಾಸಕ ಹರೀಶ್ ಪೂಂಜಾ
* ಭಾರೀ ಚರ್ಚೆಗೆ ಕಾರಣವಾದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಹೇಳಿಕೆ
* ಬೆಳ್ತಂಗಡಿಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೂಂಜಾ ಹೇಳಿಕೆ
* ಮುಂದಿನ ಚುನಾವಣೆಗೆ ಸ್ಪರ್ಧಿಸಲು ಸಂಘದ ಹಿರಿಯರು ಸೂಚಿಸಿದ್ರೆ ಸ್ಪರ್ಧೆ
* ಆದರೆ ಆಗ ತಾಕತ್ತಿನಿಂದ ಹೇಳ್ತೇನೆ, ನನಗೆ ಮುಸ್ಲಿಮರ ಓಟ್ ಬೇಡ
ಬೆಳ್ತಂಗಡಿ(ಮೇ.16): ಇತ್ತೀಚೆಗೆ ಹಿಂದೂ ಮುಸ್ಲಿಂ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ಕೋಮು ಸಾಮರಸ್ಯವನ್ನು ಕೆಡಿಸುತ್ತಿದೆ. ಹಿಜಾಬ್, ಹಲಾಲ್, ಮಸೀದಿ, ಧ್ವನಿವರ್ಧಕ ಹೀಗೆ ನಾನಾ ವಿಚಾರಗಳು ಎರಡು ಕೋಮುಗಳ ನಡುವಿನ ಜನರ ಸಂಬಂಧ ಕೆಡಿಸುತ್ತಿವೆ. ಸಾಲದೆಂಬಂತೆ ಈ ವಿಚಾರಗಳ ಬಗ್ಗೆ ರಾಜಕೀಯ ಗಣ್ಯರು ನೀಡುತ್ತಿರುವ ಹೇಳಿಕೆ ಎರಡೂ ಧರ್ಮದ ನಡುವಿನ ಜನನ್ನು ಮತ್ತಷ್ಟು ದೂರ ಮಾಡುತ್ತಿವೆ. ಸದ್ಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಕೂಡಾ ಹಿಂದೂ, ಮುಸ್ಲಿಂ ಜನರ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರೀ ಚರ್ಚೆ ಹುಟ್ಟು ಹಾಕಿದೆ.
ಬೆಳ್ತಂಗಡಿಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ ಮತಗಳ ಬಗ್ಗೆ ಮಾತೆತ್ತಿರುವ ಶಾಸಕ ಹರೀಶ್ ಪಂಜಾ ನನಗೆ ಮುಸ್ಲಿಮರ ಮತಗಳು ಬೇಡ, ಹಿಂದುಗಳ ಮತಗಳಷ್ಟೇ ಸಾಕು ಎಂದಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಸಂಘದ ಹಿರಿಯರು ಸೂಚಿಸಿದ್ರೆ ಸ್ಪರ್ಧೆ ಮಾಡುತ್ತೇನೆ. ಆಗ ತಾಕತ್ತಿನಿಂದ ನನಗೆ ಮುಸ್ಲಿಮರ ಓಟ್ ಬೇಡ ಎಂದು ಹೇಳುತ್ತೇನೆ. ನನಗೆ ಕೇವಲ ಹಿಂದೂಗಳ ಓಟ್ ಅಷ್ಟೇ ಸಾಕು ಎಂದಿದ್ದಾರೆ.
"
ತಮ್ಮ ಹೇಳಿಕೆಗೆ ಕಾರಣವನ್ನೂ ನೀಡಿರುವ ಹರೀಶ್ ಪೂಂಜಾ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕು. ಕಾಶಿಯಲ್ಲಿ ವಿಶ್ವನಾಥ ದೇವರ ಮಂದಿರ ನಿರ್ಮಾಣ ಆಗಬೇಕು. ದತ್ತ ಪೀಠದಲ್ಲಿ ದತ್ತಾತ್ರೇಯರ ಪೀಠ ನಿರ್ಮಾಣ ಆಗಬೇಕು. ಹೀಗಾಗಿ ಬಹಳ ಧೈರ್ಯದಿಂದ ಹೇಳ್ತೇನೆ ನನಗೆ ಮುಸ್ಲಿಮರ ಮತಗಳು ಬೇಡ ಎಂದು ಕಟುವಾಗಿ ನುಡಿದಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕರು ತುಳು ಭಾಷೆಯಲ್ಲಿ ಮಾತನಾಡಿದ್ದು, ಅವರ ಈ ಹೇಳಿಕೆಯ ವಿಡಿಯೋ ಭಾರೀ ವೈರಲ್ ಆಗಿದೆ. ಮುಂದಿನ ಚುನಾವಣೆಯಲ್ಲಿ ಇದು ಅವರ ಮತಗಳ ಮೇಲೆ ಪರಿಣಾಮ ಬೀರಲಿದೆ ಎಂಬುವುದರಲ್ಲಿ ಅನುಮಾನವಿಲ್ಲ.
ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ದ
ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ದ ಎಂದು ತುಳು ಭಾಷೆಯಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಮಾಡಿರುವ ಭಾಷಣದ ವಿಡಿಯೋ ತುಣುಕು ವೈರಲ್ ಆಗಿದೆ. ದಕ್ಷಿಣ ಕನ್ನಡ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತ ಹತ್ಯೆ ಆಗಿದೆ. ಕೆಂಪುಕೋಟೆ ಮೇಲೆ ಭಗವಾದ್ವಜ ಹಾರಿಸ್ತೀವಿ ಎಂದು ಹರೀಶ್ ಪೂಂಜಾ ಹೇಳಿಕೆ ನೀಡಿದ್ದಾರೆ.
ಕೆ.ಎಸ್. ಈಶ್ವರಪ್ಪ ಈ ಹೇಳಿಕೆ ನೀಡಿದ್ರು ಅಂತ ಅಧಿವೇಶನ ಮೊಟಕುಗೊಳಿಸಿದ್ರು. ಆದರೆ, ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸೋದು ಸಿದ್ದ. ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜವನ್ನ ಹಾರಿಸುತ್ತೇವೆ. ಭಗವಾಧ್ವಜ ಹಾರಿಸೋದನ್ನ ಯಾರಿಂದಲೂ ತಪ್ಪಿಸಲಾಗಲ್ಲ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದ ಹರ್ಷ ಹತ್ಯೆ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಹೇಳಿಕೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದೆ.