ಪತ್ನಿಗೆ ಹಾಸನ ಟಿಕೆಟ್‌ ನೀಡಿದಿದ್ದರೆ ತಾನೇ ಸ್ಪರ್ಧೆಗೆ ಇಂಗಿತ, ಬೆಂಗಳೂರಿನಲ್ಲಿ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ 

ಬೆಂಗಳೂರು(ಏ.11):  ಹಾಸನ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಜೆಡಿಎಸ್‌ಗೆ ಕಗ್ಗಂಟಾಗಿದ್ದು, ಸೋಮವಾರ ತಡರಾತ್ರಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಭೇಟಿಯಾಗಿ ಮಾತುಕತೆ ನಡೆಸಿದರು.

ಪದ್ಮನಾಭನಗರ ನಿವಾಸಕ್ಕೆ ಆಗಮಿಸಿದ ರೇವಣ್ಣ ಅವರು ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿಚಾರವಾಗಿ ಮಾತುಕತೆ ನಡೆಸಿದರು. ರೇವಣ್ಣ ಪತ್ನಿ ಭವಾನಿ ಅವರಿಗೆ ಟಿಕೆಟ್‌ ನೀಡಲು ಪಕ್ಷದಲ್ಲಿಯೇ ತೀವ್ರ ವಿರೋಧ ಇದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸ್ವರೂಪ್‌ ಪ್ರಕಾಶ್‌ಗೆ ಟಿಕೆಟ್‌ ನೀಡಬೇಕು ಎಂಬ ಉದ್ದೇಶವಿದೆ. ಆದರೆ ಭವಾನಿ ಅವರು ತಾವೇ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪರಿಣಾಮ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸುವುದು ಜಟಿಲವಾಗಿ ಪರಿಣಮಿಸಿದೆ.

ರೇವಣ್ಣನ ಮನವೊಲಿಸುವ ಶಕ್ತಿ ಗೌಡರಿಗೂ ಇಲ್ಲ: ಕೆಲವ್ರು ಶಕುನಿಗಳಂತೆ ಬ್ರೈನ್ ವಾಶ್ ಮಾಡ್ತಿದ್ದಾರೆ: ಎಚ್‌ಡಿಕೆ

ದೇವೇಗೌಡರ ಭೇಟಿ ವೇಳೆ ರೇವಣ್ಣ ಅವರು ಭವಾನಿ ಅವರಿಗೆ ಟಿಕೆಟ್‌ ಕೊಡಿಸುವ ಪ್ರಯತ್ನ ಮಾಡಿದರು. ಒಂದು ವೇಳೆ ಭವಾನಿಗೆ ಟಿಕೆಟ್‌ ನೀಡದಿದ್ದರೆ ಹೊಳೆನರಸೀಪುರ ಮತ್ತು ಹಾಸನ ಕ್ಷೇತ್ರದಲ್ಲಿ ತಾವೇ ಸ್ಪರ್ಧಿಸಲು ಅವಕಾಶ ಕೇಳಿದರು. ಹೀಗಾಗಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಕುರಿತು ಸಮಾಲೋಚನೆ ನಡೆಸಿದರು ಎಂದು ಹೇಳಲಾಗಿದೆ. ರೇವಣ್ಣ ಅಭಿಪ್ರಾಯವನ್ನು ಸಂಗ್ರಹಿಸಿದ ದೇವೇಗೌಡ, ಈ ಬಗ್ಗೆ ತಾವೇ ಅಂತಿಮ ತೀರ್ಮಾನ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.