ಜೆಡಿಎಸ್ ಮಾಜಿ ಶಾಸಕ ಅಪ್ಪಾಜಿ ಗೌಡ ಸಾವಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ, (ಸೆ.13): ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ಅವರಿಗೆ ಆಗದವರು ಯಾರೋ ಅವರ ಸಾವಿಗೆ ಕಾರಣರಾಗಿರಬಹುದು. ಅವರ ಸಾವಿನ ಬಗ್ಗೆ ಅನುಮಾನವಿದೆ‌ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಚ್ಚರಿ ಹೇಳಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

 ಸೆಪ್ಟೆಂಬರ್ 3ರಂದು ಕೋವಿಡ್‌ನಿಂದಾಗಿ ಸಾವನ್ನಪ್ಪಿದ ಅಪ್ಪಾಜಿ ಗೌಡ (67) ಅವರ ಭದ್ರಾವತಿ ನಿವಾಸಕ್ಕೆ ಇಂದು (ಭಾನುವಾರ) ಕುಮಾರಸ್ವಾಮಿ ಭೇಟಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಜೆಡಿಎಸ್ ಮುಖಂಡ ಅಪ್ಪಾಜಿಗೌಡ ಕೊರೋನಾಗೆ ಬಲಿ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪಾಜಿ ಗೌಡ ಅವರ ಕುಟುಂಬದವರೇ ಈ ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ಖಾಸಗಿ ಆಸ್ಪತ್ರೆಯಲ್ಲಿ ಒಬ್ಬ ಜನಪ್ರತಿನಿಧಿಗೆ ವೆಂಟಿಲೇಟರ್ ಸಿಕ್ಕಿಲ್ಲ ಅಂದರೆ ಏನರ್ಥ ಎಂದರು.

ಅಪ್ಪಾಜಿ ಗೌಡ ಅವರಿಗೆ ಕೋವಿಡ್-19 ಸೋಂಕು ತಾಗಿತ್ತು ಎನ್ನುತ್ತಿದ್ದಾರೆ. ಆದರೆ ಅವರ ಕುಟುಂಬದ ಯಾರಿಗೂ ಕೋವಿಡ್ ಸೋಂಕು ಕಾಣಿಸಿಕೊಂಡಿಲ್ಲ. ಇದೆಲ್ಲವನ್ನೂ ನೋಡಿದರೆ ಅಪ್ಪಾಜಿ ಗೌಡ ಅವರ ಸಾವಿನ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಹೇಳಿದರು.

ಅಪ್ಪಾಜಿ ಗೌಡ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅಂದು ಬೆಳಗ್ಗೆ ಗೊತ್ತಾಗಿದ್ದರೆ ನಾನು ಅವರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆ. ಆದರೆ ಸಂಜೆ ವೇಳೆಗೆ ವಿಷಯ ತಿಳಿದಿದ್ದರಿಂದ ಬೆಂಗಳೂರಿನಲ್ಲಿ ಚಿಕಿತ್ಸೆಗೆ ಕರೆತರಲು ಆಗಲಿಲ್ಲ ಎಂದು ನೋವು ವ್ಯಕ್ತಪಡಿಸಿದರು.