ಪ್ರಧಾನಿ ಮೋದಿ ಕಾರ್ಯಕ್ಕೆ ದೇವೇಗೌಡ ಮೆಚ್ಚುಗೆ ಜೊತೆ ಕೊಟ್ರು 6 ಸಲಹೆಗಳು..!
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ, ನೂತನ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆರು ಸಲಹೆಗಳನ್ನ ನೀಡಿದ್ದಾರೆ.
ಬೆಂಗಳೂರು, (ಜೂನ್.19): ರಾಷ್ಟ್ರೀಯ ಹಿತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತ - ಚೀನಾ ಗಡಿ ವಿಚಾರವಾಗಿ ದೇಶದ ಮುಂದೆ ಸ್ಪಷ್ಟ ಚಿತ್ರಣ ಬಿಚ್ಚಿಡಲಿ ಎಂದಿದ್ದ ನೂತನ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ, ಇದೀಗ ಮೋದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ-ಚೀನಾ ಗಡಿ ಸಂಘರ್ಷ ಕುರಿತಾಗಿ ಚರ್ಚಿಸಲು ಮಾಹಿತಿ ನೀಡಲು ಪ್ರತಿಪಕ್ಷಗಳ ಮುಖಂಡರ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಕರೆದಿರುವುದಕ್ಕೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಸ್ವಾಗತಿಸಿದ್ದು, ಎಲ್ಲಾ ನಾಯಕರ ಸಲಹೆ ಪರಿಣಗಣಿಸುತ್ತಿರುವುದಕ್ಕೆ ಅಭಿನಂದನೆ ತಿಳಿಸಿದ್ದಾರೆ.
ಗಲ್ವಾನ್ ಕಣಿವೆ ಸಂಘರ್ಷ: ಮೋದಿ ಬೆನ್ನಿಗೆ ನಿಲ್ತಾವಾ ವಿರೋಧ ಪಕ್ಷಗಳು?
ಪತ್ರದ ಮೂಲಕ ಪ್ರಧಾನಿ ಮೋದಿಗೆ ಅಭಿನಂದನೆ ತಿಳಿಸಿರುವ ಮಾಜಿ ಪ್ರಧಾನಿ ದೇವೇಗೌಡ, ಪತ್ರದಲ್ಲೇ ಹಲವು ಸಲಹೆಗಳನ್ನ ನೀಡಿದ್ದಾರೆ.ರಾಜ್ಯಸಭಾ ಸದಸ್ಯರಾಗುತ್ತಿದ್ದಂತೆ ಇದೇ ಮೊದಲ ಬಾರಿಗೆ ಪ್ರಧಾನಿಗೆ ಪತ್ರ ಬರೆದು ಆರು ಸಲಹೆಗಳನ್ನ ನೀಡಿದ್ದಾರೆ. ಹಾಗಾದ್ರೆ ಪತ್ರದಲ್ಲೇನಿದೆ..? ಈ ಕೆಳಗಿನಂತಿದೆ ನೊಡಿ.
ಮೋದಿ ಎಚ್ಡಿಡಿ ಪತ್ರ
ಗಡಿಯಲ್ಲಿರುವ ಸಂಘರ್ಷದ ವಾತಾವರಣದ ಕುರಿತಾಗಿ ಪ್ರತಿಪಕ್ಷಗಳ ಮುಖಂಡರಿಗೆ ಸಭೆಯಲ್ಲಿ ಹಿರಿಯ ಸೇನಾಧಿಕಾರಿಗಳು ಅಥವಾ ಹಿರಿಯ ರಾಯಭಾರಿ ಅಧಿಕಾರಿಗಳು ಮಾಹಿತಿ ನೀಡಬೇಕು . ವಸ್ತು ಸ್ಥಿತಿ ಹಾಗೂ ಮುಂದಿನ ಬೆಳವಣಿಗೆಗಳ ಕುರಿತಾದ ಮಾಹಿತಿಯನ್ನು ನೀಡಬೇಕು. ಸದ್ಯ ಪ್ರತಿಪಕ್ಷಗಳಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಕೇವಲ ಮಾಧ್ಯಮಗಳ ಮಾಹಿತಿ ಅಷ್ಟೇ ನಮಗೆ ಆಧಾರವಾಗಿದೆ. ಇದನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಗಡಿ ಸಂಘರ್ಷದ ಕುರಿತಾಗಿ ಮಾಹಿತಿಯನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದಿದ್ದಾರೆ.
ಗಡಿಯ ಸಂಘರ್ಷದ ಕುರಿತಾಗಿ ಮಾಧ್ಯಮಗಳು ಪ್ರಚೋದನಾತ್ಮಕ ಹಾಗೂ ಸುಳ್ಳು ಮಾಹಿತಿಗಳನ್ನು ಬಿತ್ತರಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು. ಆದರೆ ಇದರ ಅರ್ಥ ವಿಮರ್ಶೆ ಹಾಗೂ ವಾಸ್ತವ ವರದಿಗಳನ್ನು ನಿಲ್ಲಿಸಬೇಕು ಎಂದು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಕೂಡಾ ಸಂಯಮದಿಂದ ವರ್ತಿಸಬೇಕು. ರಾಷ್ಟ್ರೀಯ ಭದ್ರತೆಯ ನಿಟ್ಟಿನಲ್ಲಿ ಪರಸ್ಪರ ಸಹಕಾರ ಅಗತ್ಯವಾಗಿದೆ. ಆದರೆ ಸರ್ಕಾರವನ್ನು ಪ್ರಶ್ನೆ ಮಾಡಬಾರದು ಎಂದ ಅರ್ಥ ಅಲ್ಲ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೇನೆಯ ಹೆಸರನ್ನು ರಾಜಕೀಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ, ಸೈನ್ಯ ಹೆಸರು ಯಾವತ್ತೂ ಈ ರೀತಿ ದುರ್ಬಳಕೆಯಾಗಬಾರದು. ಅಲ್ಲದೆ ಚೈನಾ ವಸ್ತುಗಳಿಗೆ ಬಾಯ್ಕಾಕ್ ಮಾಡುವ ನಿಲುವುಗಳನ್ನು ಸರ್ಕಾರ ಬೆಂಬಲಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.