ಹಲಾಲ್‌ ಕಟ್ಟೋ, ಹಲ್ಕಟ್ಟೋ ಗೊತ್ತಿಲ್ಲ, ಜೀವಮಾನದಲ್ಲಿ ತಿಂದಿಲ್ಲ  ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ನೆಲ ಕಚ್ಚುತ್ತದೆ: ಈಶ್ವರಪ್ಪ

ಶಿವಮೊಗ್ಗ (ಅ.20) : ‘‘ಹಲಾಲ್‌ ಕಟ್ಟೋ, ಹಲ್ಕಟ್ಟೋ ಗೊತ್ತಿಲ್ಲ. ನಾನು ಜೀವಮಾನದಲ್ಲಿ ಹಲಾಲ್‌ ಕಟ್‌ ಮಾಂಸ ತಿಂದಿಲ್ಲ, ಇನ್ನು ಮುಂದೆಯೂ ತಿನ್ನೋದಿಲ್ಲ.ಹೀಗೆಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಯುಗಾದಿಯ ಬಳಿಕ ದೀಪಾವಳಿಯ ಸಂದರ್ಭದಲ್ಲಿ ಮತ್ತೆ ಹಿಂದೂ ಸಂಘಟನೆಗಳು ಹಲಾಲ್‌ ಕಟ್‌ ವಿರುದ್ಧ ಮತ್ತು ಜಟ್ಕಾ ಕಟ್‌ ಪರವಾಗಿ ಅಭಿಯಾನ ಆರಂಭಿಸುತ್ತಿರುವ ವಿಷಯ ಕುರಿತು ಪ್ರತಿಕ್ರಿಯಿಸಿ ಮಾತನಾಡಿದರು.

ಕೆರೆ ತುಂಬಿಸಿದ ಬಿಜೆಪಿ ಸರ್ಕಾರ ಸ್ಮರಿಸಿ: ಎಂ.ಬಿ.ಪಾಟೀಲಗೆ ಈಶ್ವರಪ್ಪ ಟಾಂಗ್‌

ಹಬ್ಬದಲ್ಲಿ ಎಡೆ ಅಂತ ನಾವು ಇಡ್ತೀವಿ. ಅವರ ದೇವರಿಗೆ ಇಟ್ಟಿದ್ದನ್ನು ಮತ್ತೆ ನಾವು ಎಡೆ ಇಡುವಂತಹ ಗ್ರಹಚಾರ ನಮಗೆ ಬಂದಿಲ್ಲ. ಹಲಾಲ್‌ ಕಟ್‌ನಿಂದ ಸಂಗ್ರಹವಾದ ಹಣವನ್ನು ಭಯೋತ್ಪಾದನಾ ಕೃತ್ಯಕ್ಕೆ ಬಳಸಲಾಗುತ್ತಿದೆ ಎಂಬ ಅಂಶ ವಿವಿಧ ಪ್ರಕರಣದಲ್ಲಿ ತನಿಖೆಯ ವೇಳೆ ಬಯಲಿಗೆ ಬಂದಿದೆ. ನಾವು ನಮ್ಮ ಹಣವನ್ನು ಅವರಿಗೆ ನೀಡಿ, ಆ ಹಣದಿಂದ ನಮ್ಮ ನಾಶ ತಂದುಕೊಳ್ಳಬೇಕೇ ಎಂದು ಪ್ರಶ್ನಿಸಿದರಲ್ಲದೆ, ಯುಗಾದಿ ವೇಳೆಯಿಂದ ಈ ಅಭಿಯಾನ ಆರಂಭವಾಗಿದೆ ಎಂದು ಹೇಳಿದರು.

ಸಿದ್ದು, ಡಿಕೆಶಿ ವಿರುದ್ಧ ವಾಗ್ದಾಳಿ:

ಕಾಂಗ್ರೆಸ್‌ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿದ ಈಶ್ವರಪ್ಪ ಅವರು ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಯಾಕೆ ಮಾಡಲಿಲ್ಲ? ಹಿಂದುಳಿದ ವರ್ಗದ ಮೀಸಲಾತಿಗೆ ಸಂಬಂಧಿಸಿದಂತೆ ಕಾಂತರಾಜು ವರದಿಯನ್ನು ಸದನದಲ್ಲಿ ಮಂಡನೆ ಮಾಡುತ್ತೇವೆ ಎಂದ ಸಿದ್ದರಾಮಯ್ಯ ಕೊನೆಗೂ ಯಾಕೆ ಮಂಡಿಸಲಿಲ್ಲ. ಇಂತಹ ನೂರಾರು ಪ್ರಶ್ನೆಗಳು ನಮ್ಮೆದುರು ಇವೆ. ಸಿದ್ದರಾಮಯ್ಯ ತಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಶೇ.90ರಷ್ಟನ್ನು ಈಡೇರಿಸಿದ್ದೇನೆ ಎಂದಿದ್ದರು. ಯಾವುದು ಎಂದು ಕೇಳಿದರೆ ಹೇಳುವುದಿಲ್ಲ. ಚುನಾವಣೆ ಬರಲಿ, ಇದಕ್ಕೆ ಉತ್ತರ ಕೊಡಲಿ, ಇಲ್ಲವಾದರೆ ಮತದಾರರೇ ಉತ್ತರಿಸುತ್ತಾರೆ ಎಂದರು.

ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸಾಬರು ಜಾಸ್ತಿ ಇದ್ದಾರೆ ಅಂತ ಹುಡುಕ್ತಾ ಹೊರಟಿದ್ದಾರೆ: ಈಶ್ವರಪ್ಪ

ನಾವೀಗ ಮಾಡಿ ತೋರಿಸಿದ್ದೇವೆ. ನಮ್ಮ ಕೈಯಲ್ಲಿ ಆಗಿದ್ದು ಅವರ ಕೈಯಲ್ಲಿ ಯಾಕೆ ಆಗಲಿಲ್ಲ? ತಮ್ಮ ನೂರು ತಪ್ಪನ್ನು ಇಟ್ಟುಕೊಂಡು ಬಿಜೆಪಿ ವಿರುದ್ಧ ವಿನಾಕಾರಣ ಅಪಪ್ರಚಾರ ಮಾಡುತ್ತಾರೆ. ಇವರ ವರ್ತನೆಯಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ನೆಲ ಕಚ್ಚುತ್ತದೆ ಎಂದು ಭವಿಷ್ಯ ನುಡಿದರು.