ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಶನಿವಾರ ಪ್ರಕಟ ಮಾಡಿದೆ. ಮುಂದಿನ ಐದು ವರ್ಷದ ಅಧಿಕಾರವಧಿಯಲ್ಲಿ 20 ಲಕ್ಷ ಉದ್ಯೋಗ ಹಾಗೂ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟಿ ನೀಡುವ ಭರವಸೆಯನ್ನು ಬಿಜೆಪಿ ತನ್ನ ಸಂಕಲ್ಪ ಪತ್ರ ನೀಡಿದೆ.
ಗಾಂಧಿನಗರ (ನ.26): ಗುಜರಾತ್ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳಿವೆ. ಇದರ ನಡುವೆ ಬಿಜೆಪಿ ಶನಿವಾರ ಗಾಂಧಿನಗರದಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ವೇಳೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಗುಜರಾತ್ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಕೂಡ ಉಪಸ್ಥಿತರಿದ್ದರು. ಭಾರತೀಯ ಜನತಾ ಪಕ್ಷವು, ಗುಜರಾತ್ನ ಮುಂದಿನ ಐದು ವರ್ಷದ ಅಧಿಕಾರದಲ್ಲಿ 20 ಲಕ್ಷ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದು ಅದರೊಂದಿಗೆ ಶಾಲೆಗ ಹೋಗುತ್ತಿರುವ ಬಾಲಕಿಯರಿಗೆ ಉಚಿತವಾಗಿ ಎಲೆಕ್ಟ್ರಕ್ ಸ್ಕೂಟಿ ನೀಡುವುದಾಗಿ ವಾಗ್ದಾನ ಮಾಡಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕೂಡ ಈ ವೇಳೆ ಭಾಗವಹಿಸಿದ್ದರು. ಸಂಭಾವ್ಯ ಆತಂಕಗಳು ಮತ್ತು ಭಯೋತ್ಪಾದಕ ಸಂಘಟನೆಗಳು ಮತ್ತು ಭಾರತ ವಿರೋಧಿ ಶಕ್ತಿಗಳ ಸ್ಲೀಪರ್ ಸೆಲ್ಗಳನ್ನು ಗುರುತಿಸುವುದು ಹಾಗೂ ಅವುಗಳನ್ನು ಮಟ್ಟಹಾಕಲು ನಾವು ಮೂಲಭೂತವಾಧಿಕರಣ ವಿರೋಧಿ ಘಟಕವನ್ನು ರಚಿಸಲಿದ್ದೇವೆ ಎಂದು ಈ ವೇಳೆ ಘೋಷಣೆ ಮಾಡಿದ್ದಾರೆ. ತನ್ನ ಸಂಕಲ್ಪ ಪತ್ರದಲ್ಲಿ ಬಿಜೆಪಿ ಒಟ್ಟು 10 ಪ್ರಮುಖ ಘೋಷಣೆಗಳನ್ನು ಮಾಡಿದೆ. ಪ್ರಣಾಳಿಕೆ ಸಿದ್ಧಪಡಿಸಲು ಗುಜರಾತ್ನ ಒಂದು ಕೋಟಿಗೂ ಹೆಚ್ಚು ಜನರಿಂದ ಅಭಿಪ್ರಾಯ ತೆಗೆದುಕೊಳ್ಳಲಾಗಿದ್ದು, ಇದಕ್ಕಾಗಿ ವಾಟ್ಸ್ಆ್ಯಪ್ ಸಂಖ್ಯೆಯನ್ನೂ ನೀಡಲಾಗಿದೆ ಎಂದು ಗುಜರಾತ್ ಬಿಜೆಪಿ ಅಧ್ಯಕ್ಷ ಪಾಟೀಲ್ ಹೇಳಿದ್ದಾರೆ.
ಬಿಜೆಪಿ ನೀಡಿರುವ 10 ಭರವಸೆಗಳು: ಬಿಜೆಪಿ ಘೋಷಣೆ ಮಾಡಿರುವ 10 ಭರವಸೆಗಳಲ್ಲಿ ಪ್ರಮುಖವಾಗಿ ದ್ವಾರಕಾದಲ್ಲಿ ದೇವಭೂಮಿ ಕಾರಿಡಾರ್ ನಿರ್ಮಾಣ, ಸರ್ಕಾರಿ ಶಾಲೆಗಳ ಅಭಿವೃದ್ಧ ಕೂಡ ಸೇರಿದೆ.
- ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಉದ್ಯೋಗ,
- 2 ಲಕ್ಷದವರೆಗೆ ರೈತರಿಗೆ ಸಾಲ ಸೌಲಭ್ಯ ನೀಡಲು ಕ್ರೆಡಿಟ್ ಕಾರ್ಡ್
- ನೀರಾವರಿಗೆ 25 ಸಾವಿರ ಕೋಟಿ ಅನುದಾನ
- ಮುಂದಿನ ಐದು ವರ್ಷದಲ್ಲಿ ಮಹಿಳೆಯರಿಗೆ 1 ಲಕ್ಷ ಉದ್ಯೋಗ ಮೀಸಲು
- ಸಮಿತಿಯ ಶಿಫಾರಸಿನಂತೆ ಏಕರೂಪ ನಾಗರಿಕ ಸಂಹಿತೆ ಅನುಷ್ಠಾನ
- ಕೃಷಿ ಮೂಲಸೌಕರ್ಯ ನಿಧಿಯಡಿ 10 ಸಾವಿರ ಕೋಟಿ ರೂ. ಅನುದಾನ
- ದೇವಭೂಮಿ ದ್ವಾರಕಾ ಕಾರಿಡಾರ್ ನಿರ್ಮಾಣ
- 20 ಸಾವಿರ ಸರ್ಕಾರಿ ಶಾಲೆಗಳ ಸಂಪೂರ್ಣ ಅಭಿವೃದ್ಧಿ
- ಬಾಲಕಿಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟಿ
- ಗೋಶಾಲೆಗಳಿಗೆ 500 ಕೋಟಿ ರೂಪಾಯಿ ಅನುದಾನ
ಇದರೊಂದಿಗೆ,ಗುಜರಾತ್ನಲ್ಲಿ ಎಐಐಎಂಎಸ್ನಂತಹ ಸಂಸ್ಥೆಯನ್ನು ನಿರ್ಮಿಸುವ ಭರವಸೆಯನ್ನೂ ಕೂಡ ಬಿಜೆಪಿ ನೀಡಿದೆ. ಈ ವೇಳೆ ಮಾತನಾಡಿದ್ ನಡ್ಡಾ ನಮ್ಮ ಸಂಕಲ್ಪ ಪತ್ರ ಕೇವಲ ಭರವಸೆಗಳ ದಾಖಲೆಯಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರ ಹೇಳಿದ್ದನ್ನೇ ಮಾಡುತ್ತದೆ. ನಾವು ಸಂವಿಧಾನದ ಪ್ರಕಾರ ಹೋಗುತ್ತೇವೆ. ಪ್ರಣಾಳಿಕೆಯಲ್ಲಿ, ಗುಜರಾತ್ನಲ್ಲಿ 3 ಸಿವಿಲ್ ಮೆಡಿಸಿಟಿ ಮತ್ತು ಎರಡು ಎಐಐಎಂಎಸ್ ತರಹದ ಸಂಸ್ಥೆಗಳನ್ನು ಸ್ಥಾಪಿಸುವುದಾಗಿ ಪಕ್ಷವು ಭರವಸೆ ನೀಡಿದೆ. ಇದಲ್ಲದೇ ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರದಲ್ಲಿ ಎರಡು ಸೀ ಫುಡ್ ಪಾರ್ಕ್ ಗಳನ್ನು ಸ್ಥಾಪನೆ ಮಾಡಲಿದ್ದೇವೆ ಎಂದರು. ರಾಜ್ಯದಲ್ಲಿ 1000 ಹೆಚ್ಚುವರಿ ಸಂಚಾರಿ ಪಶುವೈದ್ಯಕೀಯ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ನಡ್ಡಾ ತಿಳಿಸಿದ್ದಾರೆ. ಹಿರಿಯ ಮಹಿಳಾ ನಾಗರಿಕರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಸಿಗಲಿದೆ ಎಂದಿದ್ದಾರೆ.
Gujarat Elections: ಮೋದಿಯನ್ನು ಗೆಲ್ಲಿಸಿ, ಇಲ್ದಿದ್ರೆ ಪ್ರತಿ ನಗರದಲ್ಲೂ ಅಫ್ತಾಬ್ ಇರ್ತಾನೆ, ಅಸ್ಸಾಂ ಸಿಎಂ ಹೇಳಿಕೆ!
10 ಲಕ್ಷ ಉದ್ಯೋಗಗಳು, ಸಾಲ ಮನ್ನಾ ಮತ್ತು ಉಚಿತ ವಿದ್ಯುತ್: ಗುಜರಾತ್ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ 10 ಲಕ್ಷ ಸರ್ಕಾರಿ ಉದ್ಯೋಗ, ರೈತರ ಸಾಲ ಮನ್ನಾ ಹಾಗೂ ಪ್ರತಿ ತಿಂಗಳು 300 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆಗಳಿಗಿಂತ ಹೆಚ್ಚಾಗಿ ವಿವಾದಗಳೇ ಕಂಡಿವೆ.
Gujarat Election: ಪಬ್ಲಿಸಿಟಿ ಸ್ಟಂಟ್ ಪೋಸ್ಟ್ ಹಾಕಿದ ಐಎಎಸ್ ಅಧಿಕಾರಿಯನ್ನು ಹೊರಹಾಕಿದ ಚುನಾವಣಾ ಆಯೋಗ!
ಗುಜರಾತ್ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತ ಡಿಸೆಂಬರ್ 1 ರಂದು ನಡೆಯಲಿದ್ದರೆ, 2ನೇ ಹಂತ ಡಿಸೆಂಬರ್ 5 ರಂದು ನಡೆಯಲಿದೆ. ಫಲಿತಾಂಶ ಡಿಸೆಂಬರ್ 8 ರಂದು ಪ್ರಕಟವಾಗಲಿದೆ.
