ಜನರಿಗೆ ನೀಡುವ ಭರವಸೆ ಈಡೇರಿಸುವುದು ಬಿಜೆಪಿಗೆ ಅಸಾಧ್ಯದ ಮಾತು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಎಂದೆಲ್ಲಾ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದು ಜನರಿಗೆ ಮೋಸ ಮಾಡಿದರು. ಆದರೆ ಕಾಂಗ್ರೆಸ್‌ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸಿ ನುಡಿದಂತೆ ನಡೆದಿದೆ: ಕಾಂಗ್ರೆಸ್‌

ಬೆಂಗಳೂರು(ಜ.14): ‘ಕಾಂಗ್ರೆಸ್‌ ಘೋಷಿಸಿದ 200 ಯೂನಿಟ್‌ ಉಚಿತ ವಿದ್ಯುತ್‌ನ ‘ಗೃಹಜ್ಯೋತಿ’ ಯೋಜನೆಯು ಅಸಾಧ್ಯದ ಭರವಸೆ ಎಂದು ಬಿಜೆಪಿ ಅಪಪ್ರಚಾರ ಮಾಡಲು ಶುರು ಮಾಡಿದೆ. ಕಾಂಗ್ರೆಸ್‌ ಈಗಾಗಲೇ ಅಸಾಧ್ಯ ಎಂದ ಹಲವು ಜನಪರ ಯೋಜನೆ ನೀಡಿ ಯಶಸ್ವಿಯಾಗಿರುವುದು ಕಣ್ಣ ಮುಂದಿದೆ. ಜನಪರ ಕೆಲಸಗಳು ಬಿಜೆಪಿಗೆ ಅಸಾಧ್ಯವಿರಬಹುದು, ಕಾಂಗ್ರೆಸ್ಸಿಗಲ್ಲ’ ಎಂದು ಕೆಪಿಸಿಸಿ ತಿರುಗೇಟು ನೀಡಿದೆ.

ಈ ಬಗ್ಗೆ ಅಧಿಕೃತ ಟ್ವೀಟರ್‌ ಖಾತೆಯಿಂದ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಜನರಿಗೆ ನೀಡುವ ಭರವಸೆ ಈಡೇರಿಸುವುದು ಬಿಜೆಪಿಗೆ ಅಸಾಧ್ಯದ ಮಾತು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಎಂದೆಲ್ಲಾ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದು ಜನರಿಗೆ ಮೋಸ ಮಾಡಿದರು. ಆದರೆ ಕಾಂಗ್ರೆಸ್‌ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸಿ ನುಡಿದಂತೆ ನಡೆದಿದೆ. ಹೀಗಾಗಿ ಈಗಲೂ ಕೊಟ್ಟಭರವಸೆಯಂತೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡಲಿದೆ’ ಎಂದು ಹೇಳಿದೆ.

ಸಿದ್ದು ಮತ್ತೆ 2 ಕಡೆ ಸ್ಪರ್ಧೆ ಮಾಡ್ತಾರಾ?: ದೇವಿಯ ಸೂಚನೆ ಪಾಲಿಸ್ತಾರಾ ಸಿದ್ದರಾಮಯ್ಯ?

ಸ್ಯಾಂಟ್ರೋಗೆ ಗುಜರಾತ್‌ ಮಾಡೆಲ್‌ ಪ್ರಭಾವವೇ?:

ಇದೇ ವೇಳೆ ಗುಜರಾತ್‌ನಲ್ಲಿ ಬಂಧನವಾದ ಸ್ಯಾಂಟ್ರೋ ರವಿ ಕುರಿತು ಟೀಕಿಸಿರುವ ಕಾಂಗ್ರೆಸ್‌, ‘ಸರ್ವ ಸಾಕ್ಷಿಗಳನ್ನೂ ನಾಶಪಡಿಸಿದ ನಂತರ ಸರ್ಕಾರದ ಚೀಫ್‌ ಬ್ರೋಕರ್‌, ಬಿಜೆಪಿ ಮುಖಂಡ ಸ್ಯಾಂಟ್ರೋ ರವಿಯ ಬಂಧನದ ನಾಟಕ ನಡೆಯುತ್ತಿದೆ. ಸ್ಯಾಂಟ್ರೋ ರವಿಯನ್ನು ಗುಜರಾತಿನಲ್ಲಿ ಬಂಧಿಸಲಾಗಿದೆ. ಆತ ಗುಜರಾತಿಗೆ ಹೋಗಿದ್ದೇಕೆ? ಎಲ್ಲಾ ಬಗೆಯ ದಂಧೆಕೋರರಿಗೂ ಗುಜರಾತ್‌ ಪ್ರಿಯವಾಗುವುದೇಕೆ? ಇದು ಗುಜರಾತ್‌ ಮಾಡೆಲ… ಪ್ರಭಾವವೇ?’ ಎಂದು ಪ್ರಶ್ನಿಸಿದೆ.

ಬಿಜೆಪಿಯಲ್ಲಿ ರವಿಗಳ ಕಾರುಬಾರು: ಕಾಂಗ್ರೆಸ್‌

‘ಬಿಜೆಪಿಯಲ್ಲಿ ರವಿಗಳದ್ದೇ ಕಾರುಬಾರು. ಬ್ರೋಕರ್ಸ್‌ ಮೋರ್ಚಾದಲ್ಲಿ ಸ್ಯಾಂಟ್ರೋ ರವಿ, ರೌಡಿ ಮೋರ್ಚಾದಲ್ಲಿ ಫೈಟರ್‌ ರವಿ, ಕುಡುಕರ ಮೋರ್ಚಾದಲ್ಲಿ ಓಟಿ ರವಿ. ಈ ಮೂರೂ ರವಿಗಳಿಂದಲೇ ಬಿಜೆಪಿಗೆ ಬೆಳಗಾಗುತ್ತದೆ’ ಎಂದು ಕಾಂಗ್ರೆಸ್‌ ಟೀಕಿಸಿದೆ.