Asianet Suvarna News Asianet Suvarna News

ಕಾಂಗ್ರೆಸ್ ಸೇರಲು ಮಾಜಿ ಸಚಿವ ಆರ್.ಶಂಕರ್ ನಿರ್ಧಾರ

ನನ್ನ ಬೆಂಬಲಿಗರು, ಅಭಿಮಾನಿಗಳ ಒತ್ತಾಸೆ ಹಾಗೂ ರಾಣಿಬೆನ್ನೂರಿನ ಜನರ ಋಣ ತೀರಿಸುವ ಸಲುವಾಗಿ ಕಾಂಗ್ರೆಸ್ ಸೇರಲು ನಿರ್ಧರಿಸಿರುವೆ ಎಂದು ಮಾಜಿ ಸಚಿವ ಆರ್.ಶಂಕರ್ ತಿಳಿಸಿದರು.

Former minister R Shankar decision to join Congress gvd
Author
First Published Apr 1, 2024, 4:49 AM IST

ರಾಣಿಬೆನ್ನೂರು (ಏ.01): ನನ್ನ ಬೆಂಬಲಿಗರು, ಅಭಿಮಾನಿಗಳ ಒತ್ತಾಸೆ ಹಾಗೂ ರಾಣಿಬೆನ್ನೂರಿನ ಜನರ ಋಣ ತೀರಿಸುವ ಸಲುವಾಗಿ ಕಾಂಗ್ರೆಸ್ ಸೇರಲು ನಿರ್ಧರಿಸಿರುವೆ ಎಂದು ಮಾಜಿ ಸಚಿವ ಆರ್.ಶಂಕರ್ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಲ್ಲಿ (ಕಾಂಗ್ರೆಸ್‌) ತಂದೆ ಸಮಾನರಾದ ಸಿದ್ದರಾಮಯ್ಯ ಹಾಗೂ ಭವಿಷ್ಯದ ನಾಯಕರಾದ ಡಿ.ಕೆ.ಶಿವಕುಮಾರ್‌ ಇದ್ದಾರೆ. ಈಗಾಗಲೇ ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿನ ನನ್ನ ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರ ಏಳಿಗೆಗೆ ಶ್ರಮಿಸುತ್ತೇನೆ ಎಂದರು.

ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ನಡೆ ಕುರಿತು ಚರ್ಚಿಸಲು ನಡೆಸಿದ ಅಭಿಮಾನಿಗಳ ಸಭೆಯಲ್ಲಿ ನಾನು ಎಲ್ಲೇ ಇದ್ದರೂ ಬೆಂಬಲ ಕೊಡುತ್ತೇವೆ. ಹೆಚ್ಚಾಗಿ ಕಾಂಗ್ರೆಸ್‌ಗೆ ಬೆಂಬಲ ಕೊಡಿ ಅಂತ ಹೇಳಿದ್ದಾರೆ. ನಾನು ಮೊದಲ ಬಾರಿಗೆ 2013ರಲ್ಲಿ ಸ್ಥಳೀಯ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸಿದಾಗ 46 ಸಾವಿರ ಮತ ನೀಡಿದರು. 2018ರಲ್ಲಿ ವಿಧಾನಸಭೆಗೆ ಆಯ್ಕೆಯಾಗುವಂತೆ ಆಶೀರ್ವಾದ ಮಾಡಿದರು. 2023ರಲ್ಲಿ 36 ಸಾವಿರ ಮತ ನೀಡಿದ್ದಾರೆ. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ನಿಕಟಪೂರ್ವ ಶಾಸಕರನ್ನು ಸಾರಥಿಯಂತೆ ನಿಂತು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದೆ. 

ಆದರೆ ಆಯ್ಕೆಯಾದ ನಂತರ ಅವರು ನನ್ನನ್ನು ಹಾಗೂ ನನ್ನ ಕಾರ್ಯಕರ್ತರನ್ನು ಕಡೆಗಣಿಸಿದರು. ಯಾರು ನನಗೆ ತೇಜೋವಧೆ ಮಾಡಿ ಚಿತ್ರಹಿಂಸೆ ನೀಡಿದ್ದಾರೆಯೋ ಅವರಿಗೆ ಪಾಠ ಕಲಿಸಲು ಹಾಗೂ ತಾಲೂಕಿನ ಅಭಿವೃದ್ಧಿ ಸಲುವಾಗಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವೆ ಎಂದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ ಶಕುನಿ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನ ನನಗೆ ರಾಜಕೀಯ ಮರುಜನ್ಮ ನೀಡಬೇಕು. ಮುಂದೆ ನಾನು ಶಾಸಕನಾಗುತ್ತೇನೋ ಹಾಗೆಯೇ ಇರುತ್ತೇನೊ ಅದು ನನ್ನ ಹಣೆ ಬರಹ. 

Lok Sabha Election 2024: ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವ: ವಿ.ಸೋಮಣ್ಣ

ಆದರೆ ನಾನು ಶಾಸಕ, ಸಚಿವನಾಗಲು ಕಾರಣರಾದ ಇಲ್ಲಿನ ಜನರ ಋಣ ತೀರಿಸುವ ಹೊಣೆ ನನ್ನ ಮೇಲಿದೆ. ಸ್ಥಳೀಯ ಶಾಸಕರ ಜೊತೆ ಸೇರಿ ಕೆಲಸ ಮಾಡುತ್ತೇನೆ. ನನಗೆ ರಾಜ್ಯದ ಯಾವುದೇ ಮೂಲೆಯಲ್ಲಿ ನಿಂತರೂ ಗೆಲ್ಲುವ ತಾಕತ್ತಿದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಿದ್ದು 18-20 ಸೀಟುಗಳನ್ನು ಗೆಲ್ಲುತ್ತದೆ. ನಾನು ಯಾವುದೇ ಆಸೆ ಅಮಿಷಗಳಿಲ್ಲದೆ ಅಭಿಮಾನದಿಂದ ಕಾಂಗ್ರೆಸ್ ಸೇರುತ್ತಿದ್ದೇನೆ. ಅಲ್ಲಿ ತಂದೆ ಸಮಾನರಾದ ಸಿದ್ದರಾಮಯ್ಯ ಹಾಗೂ ಭವಿಷ್ಯದ ನಾಯಕರಾದ ಡಿ.ಕೆ.ಶಿವಕುಮಾರ್‌ ಇದ್ದಾರೆ. ಈಗಾಗಲೇ ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿನ ನನ್ನ ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರ ಏಳಿಗೆಗೆ ಶ್ರಮಿಸುತ್ತೇನೆ ಎಂದರು.

Follow Us:
Download App:
  • android
  • ios