ಮೋದಿ ಆಡಳಿತ ಬರುವುದಕ್ಕಿಂತ ಮೊದಲು ದೇಶದ ಸಾಲ 52 ಲಕ್ಷ ಕೋಟಿಗಿಂತ ಕಡಿಮೆ ಇತ್ತು. ಮೋದಿ ಆಡಳಿತ ಬಂದ 9 ವರ್ಷಗಳ ನಂತರ 152 ಲಕ್ಷ ಕೋಟಿ ಸಾಲದಲ್ಲಿದೆ: ಸಿದ್ದರಾಮಯ್ಯ

ಕೂಡ್ಲಿಗಿ(ಏ.30): ಪ್ರಧಾನಿ ಮೋದಿ ಅವರು ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಅಂತಾರೆ. ಆದರೆ ಅವರು ಒಬ್ಬನೇ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್‌ಗೂ ಟಿಕೆಟ್‌ ನೀಡಿಲ್ಲ. ಇದು ನಟನೆ, ಢೋಂಗಿತನ ಅಲ್ವಾ? ಇಂಥ ಪಕ್ಷ ಅಧಿಕಾರದಲ್ಲಿ ಇರಬೇಕಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಣದ ಮಹದೇವ ಮೈಲಾರ ಕ್ರೀಡಾಂಗಣದಲ್ಲಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಎನ್‌.ಟಿ. ಶ್ರೀನಿವಾಸ ಪರ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಅಚ್ಛೇದಿನ ಬರುತ್ತದೆ ಎಂದು ಹೇಳಿದ ಮೋದಿ ಪೆಟ್ರೋಲ್‌, ಡೀಸೆಲ್, ಗೊಬ್ಬರ ಸೇರಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುವಂತೆ ಮಾಡಿ ಬಡವರಿಗೆ ಬರೆ ಎಳೆದರು. ಮೋದಿ ಆಡಳಿತ ಬರುವುದಕ್ಕಿಂತ ಮೊದಲು ದೇಶದ ಸಾಲ 52 ಲಕ್ಷ ಕೋಟಿಗಿಂತ ಕಡಿಮೆ ಇತ್ತು. ಮೋದಿ ಆಡಳಿತ ಬಂದ 9 ವರ್ಷಗಳ ನಂತರ 152 ಲಕ್ಷ ಕೋಟಿ ಸಾಲದಲ್ಲಿದೆ. ಚುನಾವಣೆ ಹೊಸ್ತಿಲಲ್ಲಿ ವೋಟಿಗಾಗಿ ಎಸ್ಸಿ-ಎಸ್ಟಿಮೀಸಲು ಹೆಚ್ಚಳ ಮಾಡುವ ನಾಟಕವಾಡಿದ ಬಿಜೆಪಿ ರಾಜ್ಯದ ಬಡವರಿಗೆ ನೀಡಲಾಗಿದ್ದ ಅನ್ನಭಾಗ್ಯ, ಶೂ ಭಾಗ್ಯ, ಶಾದಿಭಾಗ್ಯ ಯೋಜನೆ ಸೇರಿ ಇಂದಿರಾ ಕ್ಯಾಂಟೀನ್‌ ಅನ್ನು ಮುಚ್ಚಿದೆ. ಇವರಿಗೆ ಬಡವರ ಬಗ್ಗೆ ಕನಿಕರವಿಲ್ಲ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಎಸ್‌ಇಪಿ, ಟಿಎಸ್‌ಪಿ ಅನುದಾನ ಸಂಪೂರ್ಣ ಖರ್ಚು ಮಾಡಲು ಕಾಯಿದೆ ಮಾಡಲಾಗಿತ್ತು ಎಂದರು.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ 80 ಕೋಮು ಗಲಭೆ: ಜೆ.ಪಿ.ನಡ್ಡಾ

ನಾನು ಮುಖ್ಯಮಂತ್ರಿ ಇದ್ದಾಗ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೆ. ಈ ಬಾರಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಆಡಳಿತ ಬರುವುದು ನಿಶ್ಚಿತವಾಗಿದ್ದು, ಪಕ್ಷ ನೀಡಿರುವ ಎಲ್ಲಾ ಗ್ಯಾರಂಟಿಗಳೂ ಜಾರಿಯಾಗಲಿವೆ ಎಂದರು.
ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಅನ್ನೋದು ಬೇಡಿಕೆಯಾಗಿತ್ತು. ನಮ್ಮ ಸಮ್ಮಿಶ್ರ ಸರ್ಕಾರ ಇದ್ದಾಗ ನಾಗಮೋಹನದಾಸ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದೆವು. ಸಮಿತಿ ವರದಿ ಕೊಟ್ಟಬಳಿಕ ಮೂರು ವರ್ಷ ಏನೂ ತೀರ್ಮಾನ ಮಾಡಲಿಲ್ಲ. ವಾಲ್ಮೀಕಿ ಸ್ವಾಮೀಜಿ 257 ದಿನ ಧರಣಿ ಮಾಡಿದರು. ನಾವೂ ಅಧಿವೇಶನದಲ್ಲಿ ಒತ್ತಾಯ ಮಾಡಿದರೂ ಮೀಸಲಾತಿ ಜಾರಿ ಮಾಡಲಿಲ್ಲ. ಈಗ ಚುನಾವಣೆ ಸಮೀಪ ಬಂದಾಗ ತರಾತುರಿಯಲ್ಲಿ ಜಾರಿ ಮಾಡಿದರು. ಆದರೆ ಕಾನೂನಿನಲ್ಲಿ ರಕ್ಷಣೆ ಸಿಗದಂತೆ ಮೀಸಲಾತಿ ಜಾರಿ ಮಾಡಿದ್ದಾರೆ. ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ ಎಂದು ಟೀಕೆ ಮಾಡಿದರು.