ನಾನೂ ತಿನ್ನೋಲ್ಲ, ಇತರರಿಗೂ ತಿನ್ನೋಲು ಬಿಡೋಲ್ಲ ಎಂದರೆ ಇದೇನಾ?, ಟ್ವಿಟರ್‌ ಮೂಲಕ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸರಣಿ ಪ್ರಶ್ನಾವಳಿ

ಬೆಂಗಳೂರು(ಸೆ.02): ಮುಖ್ಯಮಂತ್ರಿಗಳ ಸುಪರ್ದಿಯಲ್ಲಿಯೇ 24/7 ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಮಾಡುತ್ತೇವೆ ಎಂದು ಹೇಳಿದ್ದಿರಿ. ಇದೀಗ 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದರೂ ಉತ್ತರವಿಲ್ಲ. ಇದೇನಾ ‘ನಿಮ್ಮ ನಾ ಖಾವೂಂಗಾ, ನಾ ಖಾನೆ ದೂಂಗ’ ನರೇಂದ್ರ ಮೋದಿಯವರೇ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

Add Asianetnews Kannada as a Preferred SourcegooglePreferred

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ‘ಉತ್ತರ ಕೊಡಿ ಬಿಜೆಪಿ’ ಅಭಿಯಾನದ ಅಂಗವಾಗಿ ಟ್ವಿಟರ್‌ ಮೂಲಕ ಸರಣಿ ಪ್ರಶ್ನೆ ಮಾಡಿರುವ ಅವರು, 2022ಕ್ಕೆ ಎಲ್ಲರ ಮನೆಗೆ ವಿದ್ಯುತ್‌ ನೀಡುತ್ತೇವೆ ಎಂದು ಹೇಳಿದ್ದಿರಿ. ಇದೀಗ ಕರ್ನಾಟಕದಲ್ಲಿ ದಿನಕ್ಕೆ ಕನಿಷ್ಠ 10 ಗಂಟೆಯೂ ವಿದ್ಯುತ್‌ ಇಲ್ಲ. ರಾಜ್ಯದ ಜನತೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದ್ದು, ಮಹಿಳೆಯರು ಮಸಾಲೆ ಅರೆಯಲು ವಿದ್ಯುತ್‌ ಕಚೇರಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿಯೇ ಜನರಿಗೆ ಕ್ಯಾಂಡಲ… ಹಚ್ಚಲು ಕರೆ ನೀಡಿದ್ದೀರಾ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.

ಬಿಬಿಎಂಪಿ: ಶೇ.50 ಕಮಿಷನ್‌ ಆರೋಪ ಬೆನ್ನಲ್ಲೇ ಗುತ್ತಿಗೆದಾರರಿಗೆ ಹಣ..!

ಸಣ್ಣ ಕೈಗಾರಿಕೆಗಳಿಗೆ ರೂ.6000 ಕೋಟಿ ನೆರವು ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದೀರಿ. ಎರಡು ವರ್ಷಗಳಲ್ಲಿ 754 ಕೈಗಾರಿಕೆಗಳಿಗೆ ಬೀಗ, 44,000 ಉದ್ಯೋಗ ನಷ್ಟಉಂಟು ಮಾಡಿದ್ದೀರಿ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ನಿಮ್ಮ ಭರವಸೆ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ.

ಇನ್ನು ರೈತರಿಗೆ ಲಾಭದಾಯಕ ಬೆಂಬಲ ಬೆಲೆ, 2022ಕ್ಕೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದಿರಿ. ಎಂಎಸ್‌ಪಿ ಲೆಕ್ಕದಲ್ಲಿಯೇ ಮೋಸ ಮಾಡಿ ಎಂಎಸ್‌ಪಿ ದರದಲ್ಲಿ ಬೆಳೆ ಖರೀದಿಸುವವರೇ ಇಲ್ಲದಂತೆ ಮಾಡಿದ್ದೀರಿ. ರೈತರಿಗೆ ಇನ್ನೂ ಯಾವಾಗ ಅಚ್ಚೇ ದಿನ್‌ ನೀಡುತ್ತೀರಿ ಹೇಳಿ ಎಂದು ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.