Asianet Suvarna News Asianet Suvarna News

Ticket Fight: ಜೆಡಿಎಸ್‌-ಕೈ ನೆಲದಲ್ಲಿ ಮೊದಲ ಬಾರಿ ತ್ರಿಕೋನ ಕದನ?

ರೇಷ್ಮೆ ನಾಡು ರಾಮನಗರ, ಓರ್ವ ಪ್ರಧಾನಿ ಹಾಗೂ ನಾಲ್ವರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿದ ಹಿರಿಮೆ ಹೊಂದಿದೆ. ಸದ್ಯಕ್ಕೆ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಘಟಾನುಘಟಿ ನಾಯಕರ ತವರೂರು.

First time triangular battle Ticket Fight on JDS Congress ground at Ramanagara gvd
Author
First Published Dec 2, 2022, 3:20 AM IST

ಎಂ.ಅಫ್ರೋಜ್‌ ಖಾನ್‌

ರಾಮನಗರ (ಡಿ.02): ರೇಷ್ಮೆ ನಾಡು ರಾಮನಗರ, ಓರ್ವ ಪ್ರಧಾನಿ ಹಾಗೂ ನಾಲ್ವರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿದ ಹಿರಿಮೆ ಹೊಂದಿದೆ. ಸದ್ಯಕ್ಕೆ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಘಟಾನುಘಟಿ ನಾಯಕರ ತವರೂರು. ಜತೆಗೆ ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ಜಿಲ್ಲೆ. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿರುವುದು, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಜೆಡಿಎಸ್‌ನ ಪ್ರಚಾರದ ಸಂಪೂರ್ಣ ಹೊಣೆಗಾರಿಕೆ ಹೊತ್ತಿರುವುದು ಮತ್ತು ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್‌ ಅವರು ಹಳೆ ಮೈಸೂರು ಭಾಗದಲ್ಲಿ ಪಕ್ಷದ ಜವಾಬ್ದಾರಿ ಹೊತ್ತಿರುವ ಕಾರಣ ಜಿಲ್ಲೆಯ ರಾಜಕಾರಣ ರಾಜ್ಯದ ಗಮನ ಸೆಳೆದಿದೆ. 

ನಾಲ್ಕು ವಿಧಾ​ನ​ಸಭಾ ಕ್ಷೇತ್ರ​ಗ​ಳನ್ನು ಹೊಂದಿ​ರುವ ಜಿಲ್ಲೆ​ಯಲ್ಲಿ ಒಕ್ಕ​ಲಿಗರು, ದಲಿ​ತರು ಹಾಗೂ ಮುಸ್ಲಿಮರ ಮತಗಳೇ ನಿರ್ಣಾ​ಯ​ಕ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳ ಪೈಕಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಗೆದ್ದಿದ್ದರು. ಮಾಗಡಿಯಲ್ಲಿ ಜೆಡಿಎಸ್‌ನ ಎ.ಮಂಜುನಾಥ್‌, ಕನಕಪುರದಲ್ಲಿ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಗೆಲುವು ಸಾಧಿಸಿದ್ದರು. ಕುಮಾರಸ್ವಾಮಿಯವರು ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡಿದ್ದರಿಂದ ರಾಮನಗರದಲ್ಲಿ ಉಪಚುನಾವಣೆ ನಡೆದು, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಜಯಭೇರಿ ಬಾರಿಸಿದರು.

Ticket Fight: ಬಿಜೆಪಿ ಪಾರುಪಾತ್ಯಕ್ಕೆ ಬ್ರೇಕ್‌ ಹಾಕುತ್ತಾ ಕಾಂಗ್ರೆಸ್‌?

1.ರಾಮನಗರ: ನಿಖಿಲ್‌ ಹೆಸರೂ ಚಾಲ್ತಿಯಲ್ಲಿ
ರಾಜ್ಯಕ್ಕೆ ಮೂವರು ಸಿಎಂಗಳನ್ನು ನೀಡಿದ ಕ್ಷೇತ್ರವಿದು. ಮತ್ತೊಮ್ಮೆ ಈ ಕ್ಷೇತ್ರದಿಂದ ಸ್ಪರ್ಧಿ​ಸಲು ಪಟ್ಟು ಹಿಡಿ​ದಿ​ರುವ ಹಾಲಿ ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಪರ​ವಾಗಿ ಸ್ವ ಪಕ್ಷ​ದ​ವ​ರಲ್ಲಿಯೇ ಒಲ​ವಿಲ್ಲ. ಕುಮಾ​ರ​ಸ್ವಾಮಿಗೆ ಕುಟುಂಬ​ದ​ವ​ರನ್ನು ಹೊರತುಪಡಿಸಿ ಬೇರೆ​ಯ​ವ​ರಿಗೆ ಮಣೆ ಹಾಕಲು ಇಷ್ಟ​ವಿಲ್ಲ. ಹಾಗಾಗಿ, ಜೆಡಿ​ಎಸ್‌ ಯುವ ಘಟಕದ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿಯ ಹೆಸರೂ ಪ್ರಮುಖವಾಗಿ ಚಾಲ್ತಿ​ಯ​ಲ್ಲಿ​ದೆ. ಕೊನೆ ಘಳಿ​ಗೆ​ಯಲ್ಲಿ ಕುಮಾ​ರ​ಸ್ವಾಮಿಯೇ ಅಭ್ಯ​ರ್ಥಿ​ಯಾದರೆ ಅಚ್ಚರಿ ಇಲ್ಲ. ಕುಮಾರಸ್ವಾಮಿಗೆ ಸವಾಲು ಒಡ್ಡಲು ಕಾಂಗ್ರೆಸ್‌ನಿಂದ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಸಜ್ಜಾ​ಗಿ​ದ್ದಾರೆ. ಸಂಸದ ಡಿ.ಕೆ.ಸುರೇಶ್‌ ಹೆಸರೂ ಚಾಲ್ತಿಗೆ ಬರುತ್ತಿದೆ. ಬಿಜೆಪಿಯಿಂದ ರಾಜ್ಯರೇಷ್ಮೆ ಉದ್ಯ​ಮ​ಗಳ ನಿಗಮದ ಅಧ್ಯಕ್ಷ ಗೌತಮ್‌ ಮರಿ​ಲಿಂಗೇ​ಗೌಡ, ಗ್ರೇಟರ್‌ ಬೆಂಗ​ಳೂರು-ಬಿಡದಿ ಸ್ಮಾರ್ಚ್‌ ಸಿಟಿ ಯೋಜನಾ ಪ್ರಾಧಿ​ಕಾರದ ಅಧ್ಯಕ್ಷ ವರ​ದ​ರಾ​ಜ​ಗೌಡ ಹಾಗೂ ರಾಮ​ನ​ಗರ ನಗ​ರಾ​ಭಿ​ವೃದ್ಧಿ ಪ್ರಾಧಿ​ಕಾರದ ನಿರ್ದೇ​ಶಕ ಡಿ.ನ​ರೇಂದ್ರ ಹೆಸರುಗಳು ಚಾಲ್ತಿಯಲ್ಲಿವೆ.

2.ಚನ್ನಪಟ್ಟಣ: ಎಚ್‌ಡಿಕೆ ವಿರುದ್ಧ ಮತ್ತೆ ಯೋಗೇಶ್ವರ್‌ ಕಣಕ್ಕೆ
ಚನ್ನ​ಪ​ಟ್ಟಣ, ದೇವೇ​ಗೌ​ಡರ ಕುಟುಂಬ​ದೊಂದಿಗೆ ಅವಿ​ನಾ​ಭಾವ ಸಂಬಂಧ ಹೊಂದಿ​ರುವ ಕ್ಷೇತ್ರ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಪೈಪೋಟಿ ಇದ್ದ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಕೂಡ ಎರಡೂ ಪಕ್ಷಗಳಿಗೆ ಟಾಂಗ್‌ ಕೊಡಲು ಹೊರಟಿದೆ. ಮುಖ್ಯ​ಮಂತ್ರಿ ಹುದ್ದೆಯ ಆಕಾಂಕ್ಷಿ​ಯಾ​ಗಿ​ರುವ ಕುಮಾ​ರ​ಸ್ವಾಮಿ, ಈ ಬಾರಿ ಚನ್ನ​ಪ​ಟ್ಟಣ ಕ್ಷೇತ್ರ​ದಿಂದಲೇ ಅದೃಷ್ಟಪರೀಕ್ಷೆಗೆ ಮುಂದಾಗಲು ನಿರ್ಧ​ರಿ​ಸಿ​ದ್ದಾ​ರೆ. ಇನ್ನು, ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಮೂಲಕ ಹಳೆ ಮೈಸೂರು ಪ್ರಾಂತ್ಯದಲ್ಲಿ ಪ್ರಾಬಲ್ಯ ಮೆರೆ​ಯಲು ಬಿಜೆಪಿ ಕಾತರವಾಗಿದೆ. ಈ ನಡುವೆ, ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಡಿಕೆ ಸಹೋ​ದ​ರರು ಮುಂದಾಗಿದ್ದಾರೆ. ಡಿಕೆ ಸಹೋ​ದ​ರರ ಸೋದರ ಸಂಬಂಧಿ ಶರತ್‌ ಚಂದ್ರ, ಪ್ರಸನ್ನ ಪಿ.ಗೌಡ ಸೇರಿ​ದಂತೆ 8 ಮಂದಿ ಕೆಪಿ​ಸಿ​ಸಿಗೆ ಅರ್ಜಿ ಸಲ್ಲಿ​ಸಿ​ದ್ದಾ​ರೆ.

3.ಮಾಗಡಿ: ಕೈ ಟಿಕೆಟ್‌ ಮೇಲೆ ರೇವಣ್ಣ-ಬಾಲಕೃಷ್ಣ ಕಣ್ಣು
ಮಾಗಡಿಯಲ್ಲಿ ಜೆಡಿ​ಎಸ್‌ ಹಾಗೂ ಕಾಂಗ್ರೆಸ್‌ ನಡುವೆ ನೇರ ಕದ​ನ​ವಿದೆ. 2018ರ ಚುನಾ​ವ​ಣೆ​ಯಲ್ಲಿ ಜೆಡಿ​ಎಸ್‌ನಿಂದ ಮೊದ​ಲ​ ಬಾರಿಗೆ ಎ.ಮಂಜು​ನಾಥ್‌ ಶಾಸ​ಕ​ರಾಗಿ ಆಯ್ಕೆ​ಯಾ​ಗಿ​ದ್ದಾರೆ. ಈ ಹಿಂದೆ ಬಿಜೆ​ಪಿ​ಯಿಂದ ಒಮ್ಮೆ, ಜೆಡಿ​ಎಸ್‌ನಿಂದ ಮೂರು ಅವ​ಧಿಗೆ ಶಾಸ​ಕ​ರಾ​ಗಿದ್ದ ಎಚ್‌.ಸಿ. ​ಬಾ​ಲ​ಕೃ​ಷ್ಣ ಅವರು ಕಳೆದ ಬಾರಿ ಕಾಂಗ್ರೆಸ್‌ನಿಂದ ಅಖಾಡ ಪ್ರವೇ​ಶಿಸಿ ಸೋಲು ಅನು​ಭ​ವಿ​ಸಿದ್ದರು. ಈಗ ಇಬ್ಬರೂ ಮತ್ತೆ ಸ್ಪರ್ಧೆ​ಗಿ​ಳಿ​ಯು​ವುದು ನಿಶ್ಚಿ​ತ​ವಾ​ಗಿದೆ. ಈ ಮಧ್ಯೆ, ಮಾಜಿ ಸಚಿವ ಎಚ್‌.ಎಂ.​ರೇ​ವಣ್ಣನವರು ಕ್ಷೇತ್ರದ ಹೆಸರು ಉಲ್ಲೇಖಿ​ಸದೆ ಟಿಕೆಟ್‌ಗಾಗಿ ಕೆಪಿ​ಸಿ​ಸಿಗೆ ಅರ್ಜಿ ಸಲ್ಲಿ​ಸಿ​ರು​ವುದು ಕುತೂ​ಹಲ ಮೂಡಿ​ಸಿದೆ. ಬಿಜೆ​ಪಿಯಿಂದ ಯುವ ಮುಖಂಡ ಪ್ರಸಾದ್‌ ಗೌಡ, ಮಾಗಡಿ ಯೋಜನಾ ಪ್ರಾಧಿ​ಕಾರದ ಅಧ್ಯಕ್ಷ ರಂಗ​ಧಾ​ಮಯ್ಯ ಹಾಗೂ ಕೆಂಪೇ​ಗೌಡ ಅಭಿ​ವೃದ್ಧಿ ಸಮಿತಿ ನಿರ್ದೇ​ಶಕ ಎಚ್‌.ಎಂ.ಕೃಷ್ಣ​ಮೂರ್ತಿ ಅವರು ಟಿಕೆಟ್‌ಗಾಗಿ ಪೈಪೋಟಿ ನಡೆ​ಸು​ತ್ತಿ​ದ್ದಾರೆ. ಕಳೆದ ಬಾರಿ ಬಸ​ವ​ನ​ಗುಡಿ ಕ್ಷೇತ್ರ​ದಿಂದ ಜೆಡಿ​ಎಸ್‌ ಅಭ್ಯ​ರ್ಥಿ​ಯಾಗಿ ಸ್ಪರ್ಧಿಸಿ ಪರಾ​ಭ​ವ​ಗೊಂಡಿದ್ದ ಕೆ.ಬಾ​ಗೇ​ಗೌ​ಡ ಅವರು ಬಿಜೆಪಿಯಿಂದ ಕಣ​ಕ್ಕಿ​ಳಿ​ಯು​ತ್ತಾ​ರೆಂಬ ವದಂತಿ ಹರಿ​ದಾ​ಡು​ತ್ತಿ​ದೆ. ಇದು ನಿಜ​ವಾ​ದರೆ ಕ್ಷೇತ್ರ​ದಲ್ಲಿ ತ್ರಿಕೋನ ಸ್ಪರ್ಧೆ ಏರ್ಪ​ಡ​ಲಿ​ದೆ.

Ticket Fight: ಯತ್ನಾಳ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ 20 ಆಕಾಂಕ್ಷಿಗಳು

4.ಕನಕಪುರ: ಸೋಲಿಲ್ಲದ ಸರದಾರನಿಗೆ ಎದುರಾಳಿಗಳೇ ಇಲ್ಲ
ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಸತತ 3 ಬಾರಿ ಗೆಲುವು ಸಾಧಿಸಿ, ಸೋಲಿ​ಲ್ಲದ ಸರ​ದಾರ ಎನಿ​ಸಿ​ಕೊಂಡಿದ್ದಾರೆ. ಕ್ಷೇತ್ರ ಪುನರ್‌ವಿಂಗಡಣೆಗೂ ಮುಂಚೆ ಅವರು ಸಾತನೂರು ಕ್ಷೇತ್ರದ ಶಾಸಕರಾಗಿದ್ದರು. 1983, 1985ರಲ್ಲಿ ಜನ​ತಾ​ಪಕ್ಷ, 1989, 1994ರಲ್ಲಿ ಜನತಾ ದಳ, 1999ರಲ್ಲಿ​ ಜೆಡಿ​(​ಯು) ಹಾಗೂ 2004ರಲ್ಲಿ ಜೆಡಿಎಸ್‌ನಿಂದ ಶಾಸ​ಕ​ರಾ​ಗಿದ್ದ ಪಿಜಿ​ಆರ್‌ ಸಿಂಧ್ಯಾ, ಈಗ ಕಾಂಗ್ರೆಸ್‌ನಲ್ಲಿ​ದ್ದಾರೆ. ಹೀಗಾಗಿ, ಡಿ.ಕೆ.​ಶಿ​ವ​ಕು​ಮಾರ್‌ಗೆ ಎದು​ರಾ​ಳಿ​ಗಳೇ ಇಲ್ಲ​ದಂತಾ​ಗಿ​ದೆ. ಜೆಡಿ​ಎಸ್‌ನಿಂದ ಪಕ್ಷದ ತಾಲೂಕು ಅಧ್ಯಕ್ಷ ಬಿ.ನಾ​ಗ​ರಾಜು, ಮುಖಂಡ ಕಬ್ಬಾ​ಳೇ​ಗೌ​ಡ ಟಿಕೆಟ್‌ ಆಕಾಂಕ್ಷಿ​ಗ​ಳಾ​ಗಿ​ದ್ದಾರೆ. ಅಲ್ಲದೆ, ವಸತಿ ಸಚಿವ ವಿ.ಸೋ​ಮಣ್ಣ ಸಂಬಂಧಿಯಾಗಿ​ರುವ ವಾಣಿಜ್ಯ ತೆರಿಗೆ ಅಧಿ​ಕಾರಿ ​ರಾ​ಜೇಂದ್ರ ಅವ​ರನ್ನು ಜೆಡಿ​ಎಸ್‌ನಿಂದ ಕಣ​ಕ್ಕಿ​ಳಿ​ಸುವ ಮಾತು​ಗಳೂ ಕೇಳಿ ಬರು​ತ್ತಿವೆ. ಬಿಜೆ​ಪಿಯಿಂದ ಕನ​ಕ​ಪುರ ಯೋಜನಾ ಪ್ರಾಧಿ​ಕಾರದ ಅಧ್ಯಕ್ಷ ಜಗ​ನ್ನಾಥ್‌, ನಂದಿ​ನಿ​ಗೌ​ಡ ಆಕಾಂಕ್ಷಿ​ಗ​ಳಾ​ಗಿ​ದ್ದಾ​ರೆ.

Follow Us:
Download App:
  • android
  • ios