Asianet Suvarna News Asianet Suvarna News

ನೇಕಾರ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು: ಶಾಸಕ ಧೀರಜ್‌ ಮುನಿರಾಜ್‌

ನೇಕಾರ ಸಮುದಾಯಕ್ಕೆ ಸರ್ಕಾರದ ವಿವಿಧ ಯೋಜನೆಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದರ ಜತೆಗೆ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಪೂರಕವಾಗಿ ಸ್ಥಳೀಯ ಸಂಪನ್ಮೂಲಗಳ ವೃದ್ಧಿಗೆ ಆದ್ಯತೆ ನೀಡುವುದಾಗಿ ಶಾಸಕ ಧೀರಜ್‌ ಮುನಿರಾಜ್‌ ಹೇಳಿದರು. 

Emphasis on proper implementation of weaving projects Says MLA Dheeraj Muniraj gvd
Author
First Published Jun 14, 2023, 8:43 PM IST

ದೊಡ್ಡಬಳ್ಳಾಪುರ (ಜೂ.14): ನೇಕಾರ ಸಮುದಾಯಕ್ಕೆ ಸರ್ಕಾರದ ವಿವಿಧ ಯೋಜನೆಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದರ ಜತೆಗೆ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಪೂರಕವಾಗಿ ಸ್ಥಳೀಯ ಸಂಪನ್ಮೂಲಗಳ ವೃದ್ಧಿಗೆ ಆದ್ಯತೆ ನೀಡುವುದಾಗಿ ಶಾಸಕ ಧೀರಜ್‌ ಮುನಿರಾಜ್‌ ಹೇಳಿದರು. ನೇಕಾರ ಚೈತನ್ಯ ನೇಕಾರ ಉತ್ಪಾದಕರ ಕಂಪನಿ ನೂತನ ಕಛೇರಿ ಉದ್ಘಾಟನೆ ಹಾಗೂ ನೇಕಾರ ಉತ್ಪಾದಕರ ಕಂಪನಿ ಕುರಿತ ತರಬೇತಿ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಅಮೃತ ಉತ್ಪಾದಕರ ಕಂಪನಿಗಳ ರಚನೆ ಮತ್ತು ನಿರ್ವಹಣೆಯ ಭಾಗವಾಗಿ ದೊಡ್ಡಬಳ್ಳಾಪುರ ನೇಕಾರರ ಕ್ಷೇಯೋಭಿವೃದ್ಧಿ ಹಾಗೂ ಅವರ ಆದಾಯದ ವೃದ್ಧಿಗಾಗಿ ಕರ್ನಾಟಕ ಸರ್ಕಾರದ ಜಲಾನಯನ ಅಭಿವೃದ್ಧಿ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅನಿಕೇತನ ಸಂಸ್ಥೆ ಹಾಗೂ ಮುಖ್ಯ ನೇಕಾರರು ಒಳಗೂಡಿ ನೇಕಾರ ಚೈತನ್ಯ ನೇಕಾರ ಉತ್ಪಾದಕರ ಕಂಪನಿಯನ್ನು ಸ್ಥಾಪಿಸಿದೆ. ಇದರ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಗ್ಯಾರಂಟಿಗಳ ಬಗ್ಗೆ ಸಚಿವರಿಗೇ ಅರೆಬರೆ ಜ್ಞಾನ: ಎಚ್‌.ಡಿ.ಕುಮಾರಸ್ವಾಮಿ ಲೇವಡಿ

ಜವಳಿ ಅಭಿವೃದ್ಧಿ ಆಯಕ್ತ ಟಿ.ಎಚ್‌.ಎಮ್‌.ಕುಮಾರ್‌ ಮಾತನಾಡಿ, ನೇಕಾರರ ಪ್ರತಿಯೊಂದು ಹಂತದಲ್ಲೂ ಅನೇಕ ತೊಂದರೆಯನ್ನು ಎದುರಿಸುತ್ತಿದ್ದಾರೆ ಎಂಬುದು ಸಾಮಾನ್ಯವಾಗಿ ತಿಳಿದ ವಿಷಯ. ಸುಧಾರಿತ ತಂತ್ರಜ್ಞಾನದ ಅಸಮರ್ಪಕ ಲಭ್ಯತೆ ಮತ್ತು ಬಳಸುವಿಕೆ, ಅಸಮರ್ಪಕ ಮೌಲ್ಯವರ್ಧನೆ, ಸೌಲಭ್ಯಗಳು ಇಲ್ಲದಿರುವುದು, ನೇಯುವ ವೆಚ್ಚದಲ್ಲಿ ಹೆಚ್ಚಳ, ನೇಯ್ದ ಸೀರೆಗಳಿಗೆ ನ್ಯಾಯೋಚಿತ ಬೆಲೆ ದೊರೆಯದೆ ಇರುವ ಕಾರಣಗಳಿಂದಾಗಿ ಉತ್ಪಾದಕತೆ ಕುಂಠಿತಗೊಂಡು ಉತ್ಪಾದನೆ ಕಡಿಮೆಯಾಗುತ್ತಿದೆ ಎನ್ನಲಾಗಿದೆ.

ಇವುಗಳ ಜೊತೆಗೆ ಮಾರುಕಟ್ಟೆಯಲ್ಲಿನ ಅಸಮರ್ಪಕತೆಯಿಂದ ವ್ಯಾಪಾರಿಗಳು ಕೊಡುವ ಬೆಲೆಯಲ್ಲಿ ನೇಕಾರರಿಗೆ ಸಿಗುವ ಪಾಲು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಗಾಳಿ ಮಟ್ಟದಲ್ಲಿ ಬೆಲೆಗಳು ಏರಿಕೆ ಆಗುತ್ತಿವೆ. ನೇಯ್ದ ರೇಷ್ಮೆ, ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಉತ್ತಮ ಗುಣಮಟ್ಟದ ಉತ್ಪನ್ನಗಳಿಗಾಗಿ ಬೇಡಿಕೆ ತೀವ್ರವಾಗಿ ಏರಿಕೆಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಎಲ್ಲಾ ಅಡೆತಡೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಿಕೊಂಡು ನೇಕಾರಿಕೆಯ ಕ್ಷೇತ್ರದಲ್ಲಿ ಇರುವ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ನೇಕಾರರು ಸಾಮೂಹಿಕವಾಗಿ ಅನೇಕ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೇಕಾರ ಉತ್ಪಾದಕರ ಸಂಸ್ಥೆಗಳನ್ನು ಉತ್ತೇಜಿಸುವ ಅವಶ್ಯಕತೆಯಿದೆ ಎಂದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕಿ ಎಂ.ಸೌಮ್ಯ ಮಾತನಾಡಿ, ನೇಕಾರರನ್ನು ಒಟ್ಟಾಗಿಸಲು ಉತ್ಪಾದಕರ ಸಂಸ್ಥೆಗಳು ಅತ್ಯಂತ ಪರಿಣಾಮಕಾರಿ ಸಾಂಸ್ಥಿಕ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳು ನೇಕಾರರಿಗೆ ಸಂಬಂಧಿಸಿದ ಚಟುವಟಿಕೆ ಮತ್ತು ಮಾರಾಟವನ್ನು ಒಟ್ಟಾಗಿ ತೆಗೆದುಕೊಳ್ಳಲು ಮಾದರಿಯಾಗುತ್ತದೆ. ತಮ್ಮ ಉತ್ಪನ್ನಗಳನ್ನು ಗ್ರಾಹಕರ ಆದ್ಯತೆಯ ಆಯ್ಕೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ ನೇಕಾರರಿಗೆ ಸುಸ್ಥಿರ ಜೀವನೋಪಾಯ ಮತ್ತು ಉತ್ತಮ ಆದಾಯವನ್ನು ಒದಗಿಸಲು ಸಹಕಾರ ಸಂಘಗಳು ಶ್ರಮಿಸಬೇಕು ಎಂದರು.

ಕಾಂಗ್ರೆಸ್‌ನವರು ನಮ್ಮನ್ನು ಲೆಕ್ಕಕ್ಕೂ ಇಟ್ಟಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ರವಿಕುಮಾರ್‌, ಸಹಾಯಕ ನಿರ್ದೇಶಕ ಸುರೇಶ್‌, ಕಾರ್ಯದರ್ಶಿ ಚೇತನ್‌ ನಂದಿಬಟ್ಲು, ಅನಿಕೇತನ ಸಂಸ್ಥೆ ನಿರ್ದೇಶಕ ಪುನೀತ್‌ ಗೌಡ, ಕರವೇ ಮುಖಂಡ ಟಿ.ಜಿ.ಮಂಜುನಾಥ್‌, ನೇಕಾರ ಚೈತನ್ಯ ನೇಕಾರ ಉತ್ಪಾದಕರ ಕಂಪನಿಯ ನಿರ್ದೇಶಕ ಮಂಡಳಿ ಸದಸ್ಯರಾದ ಪಿ.ಆರ್‌.ಮಹೇಶ್‌, ಎಸ್‌.ಆರ್‌.ಅಂಬರೀಶ್‌, ಡಿ.ಜಿ.ಶ್ರೀನಿವಾಸುಲು, ಎಸ್‌.ಸಾಯಿನಾಥ್‌, ಎ.ಮಂಜುನಾಥ್‌, ಕೆ.ದಿವಾಕರ್‌, ಮಹೇಶ್‌, ವಿ.ಮೋಹನ್‌, ಪುರುಷೋತ್ತಮ, ಪಿ.ನಾರಾಯಣ್‌ ಮತ್ತಿತರರು ಪಾಲ್ಗೊಂಡಿದ್ದರು.

Follow Us:
Download App:
  • android
  • ios