Asianet Suvarna News Asianet Suvarna News

ಕೃಷ್ಣಾ ನದಿಗೆ ನೀರು ಬಿಡಿಸಿದರೇ ನಾಳೆಯಿಂದಲೇ ವಿದ್ಯುತ್: ಲಕ್ಷ್ಮಣ ಸವದಿ ಸವಾಲು

ಮಾಜಿ ಶಾಸಕ ಮಹೇಶ್ ಕುಮಟಳ್ಳಿಯವರು ಪ್ರತಿ ದಿನ 7 ತಾಸ್ ಕರೆಂಟ್ ಬಿಡುವಂತೆ ಕೇಳುತ್ತಿದ್ದು, ಅಲ್ಲಲ್ಲಿ ಅಪಪ್ರಚಾರ ನಡೆಸಿದ್ದಾರೆ. ಅವರಿಗೆ ತಾಕತ್ತು ಇದ್ದರೇ ಮಹಾರಾಷ್ಟ್ರದಲ್ಲಿ ಅವರ ಸರ್ಕಾರವಿದೆ. 

Electricity from tomorrow if water is released to Krishna river Says Laxman Savadi gvd
Author
First Published Apr 27, 2024, 12:34 PM IST

ಅಥಣಿ (ಏ.27): ಮಾಜಿ ಶಾಸಕ ಮಹೇಶ್ ಕುಮಟಳ್ಳಿಯವರು ಪ್ರತಿ ದಿನ 7 ತಾಸ್ ಕರೆಂಟ್ ಬಿಡುವಂತೆ ಕೇಳುತ್ತಿದ್ದು, ಅಲ್ಲಲ್ಲಿ ಅಪಪ್ರಚಾರ ನಡೆಸಿದ್ದಾರೆ. ಅವರಿಗೆ ತಾಕತ್ತು ಇದ್ದರೇ ಮಹಾರಾಷ್ಟ್ರದಲ್ಲಿ ಅವರ ಸರ್ಕಾರವಿದೆ. ಅವರ ಮನವೊಲಿಸಿ ಕೃಷ್ಣಾ ನದಿಗೆ ನೀರು ತರಲಿ, ನೀರು ಬಂದ ಮರುದಿನವೇ ನಾನು ಪ್ರತಿದಿನ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಸಿದ್ಧರಿದ್ದೇವೆ ಎಂದು ಶಾಸಕ ಲಕ್ಷ್ಮಣ ಸವದಿ ಸವಾಲು ಹಾಕಿದರು.

ನಿಮ್ಮಲ್ಲಿ ಆ ಸಾಮರ್ಥ್ಯವಿದ್ದರೇ ಕ್ಷೇತ್ರದ ಜನತೆಗೆ ನೀರು ಕೊಡುವ ನಿಟ್ಟಿನಲ್ಲಿ ನೀವು ಕೇಂದ್ರ ಸರ್ಕಾರದ ಮತ್ತು ಮಹಾರಾಷ್ಟ್ರ ಸರ್ಕಾರದ ಮನವೊಲಿಸಿ ಕೃಷ್ಣಾ ನದಿಗೆ ನೀರು ಬಿಡಿಸಿದರೇ ನಾಳೆಯಿಂದಲೇ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು. ಕಳೆದೆರಡು ವರ್ಷಗಳಿಂದ ರಾಜ್ಯದಲ್ಲಿ ನಿರೀಕ್ಷೆ ಪ್ರಮಾಣದಲ್ಲಿ ಮಳೆಯಾಗಿಲ್ಲ, ಎಲ್ಲರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಬೇಸಿಗೆ ಸಮಯದಲ್ಲಿ ಇನ್ನಷ್ಟು ದಿನ ನೀರು ಸಂಗ್ರಹವಿದ್ದರೇ ತಾಲೂಕಿನ ಜನತೆಗೆ ಅನುಕೂಲವಾಗುತ್ತದೆಂಬ ಉದ್ದೇಶದಿಂದ ನದಿ ಪಾತ್ರದ ಗ್ರಾಮಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಂಚ ಗ್ಯಾರಂಟಿಗಳು ನಿರಂತರ, ಎಂದು ನಿಲ್ಲೋದಿಲ್ಲ: ಸಿಎಂ ಸಿದ್ದರಾಮಯ್ಯ

ಸುಳ್ಳು ಹೇಳುವುದೇ ಬಿಜೆಪಿಯವರ ಸಾಧನೆ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕನಸಿನ ಯೋಜನೆಯಾದ ನದಿಗಳ ಜೋಡಣೆ ಮಾಡುವ ಮೂಲಕ ನೀರಾವರಿ ಸೌಲಭ್ಯ ಒದಗಿಸಿ ಭಾರತ ಮಾತೆಗೆ ಹಸಿರು ಸೀರೆ ಉಡಿಸುವುದಾಗಿ ಹೇಳಿದ್ದರು ನರೇಂದ್ರ ಮೋದಿ. ಆದರೆ, ಕಳೆದ 10 ವರ್ಷಗಳಲ್ಲಿ ಯಾವುದೇ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸದೇ ಅವರು ಕೇವಲ ಸುಳ್ಳು ಹೇಳುತ್ತ ಬಂದಿದ್ದಾರೆ. ಸುಳ್ಳು ಹೇಳುವುದೇ ಬಿಜೆಪಿಯವರ ಸಾಧನೆಯಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಲೇವಡಿ ಮಾಡಿದರು.

ಪಟ್ಟಣದ ಹೊರವಲಯದ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ನಂತರ ದೇಶದ ಜನರು ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದರು. ಅವರೇ ಹೇಳಿದಂತೆ ಗಂಗಾ ನದಿಯನ್ನು ಕಾವೇರಿ ನದಿಗೆ ಜೋಡಿಸುವುದು, ಕಾವೇರಿ ನದಿಯನ್ನು ಕೃಷ್ಣಾ ನದಿಗೆ ಜೋಡಿಸುವುದು, ದೇಶದ ಪ್ರಮುಖ ನದಿಗಳನ್ನು ಜೋಡಣೆ ಮಾಡುವ ಮೂಲಕ ದೇಶದಲ್ಲಿ ನೀರಾವರಿ ಕ್ರಾಂತಿ ಮಾಡಿ ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂದು ಹೇಳಿದ್ದರು. ಇದಲ್ಲದೆ ಎಲ್ಲೆಡೆ ಬುಲೆಟ್ ಟ್ರೈನ್ ಬಿಡುವುದು, ಸ್ವಿಸ್ ಬ್ಯಾಂಕ್‌ನಲ್ಲಿದ್ದ ಕಪ್ಪು ಹಣ ತಂದು ಅಭಿವೃದ್ಧಿ ಮಾಡುವುದು ಸೇರಿದಂತೆ ಅನೇಕ ಭರವಸೆಗಳನ್ನು ಪ್ರಣಾಳಿಕೆಗಳಲ್ಲಿ ನೀಡಿದ್ದರು. ಆದರೆ, ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಬಿಜೆಪಿ ನಾಯಕರು ವಿಫಲವಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ನನ್ನ ರಾಜಕೀಯ ಜೀವನದಲ್ಲಿ ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಚುನಾವಣೆಗಳನ್ನು ಗೆಲ್ಲಬೇಕಾದರೇ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಒಣಗಾಳಿಗೆ ಬೀಸುವ ಕೆಲವು ತಂತ್ರಗಾರಿಕೆ ರೂಪಿಸುತ್ತಾರೆ. ಅದಕ್ಕಾಗಿಯೇ ಮೋದಿ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಚಾಲಕ ತಜ್ಞರ ಮೂಲಕ ಮತದಾರರಲ್ಲಿ ಮನ ಪರಿವರ್ತನೆ ಮಾಡುತ್ತಾರೆ ಎಂದು ದೂರಿದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ: ಗೃಹ ಸಚಿವ ಪರಮೇಶ್ವರ್

ಈ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಅಲೆ ಇರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ದೇಶದಲ್ಲಿ 250 ಸ್ಥಾನಗಳನ್ನು ಗೆಲ್ಲುವುದು ಬಿಜೆಪಿಯವರಿಗೆ ಸವಾಲಾಗಿದೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುತ್ತೇವೆ.
-ಲಕ್ಷ್ಮಣ ಸವದಿ, ಶಾಸಕರು.

Follow Us:
Download App:
  • android
  • ios