‘ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಪದೇ ಪದೇ ಹೇಳಿಕೆ ನೀಡಿ ಬೇರೆಯವರು ಮಾತನಾಡಲು ಪ್ರಚೋದನೆ ನೀಡುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್‌ ಶಿಸ್ತಿನ ಪಕ್ಷ. ಎಲ್ಲರೂ ಶಿಸ್ತು ಪಾಲಿಸಬೇಕು’ ಎಂದು ಇಕ್ಬಾಲ್‌ ಹುಸೇನ್‌ , ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಾಂಗ್‌ ನೀಡಿದ್ದಾರೆ.

ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಪದೇ ಪದೇ ಹೇಳಿಕೆ ನೀಡಿ ಬೇರೆಯವರು ಮಾತನಾಡಲು ಪ್ರಚೋದನೆ ನೀಡುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್‌ ಶಿಸ್ತಿನ ಪಕ್ಷ. ಎಲ್ಲರೂ ಶಿಸ್ತು ಪಾಲಿಸಬೇಕು’ ಎಂದು ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಅವರು ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಾಂಗ್‌ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪದೇ ಪದೇ ತಂದೆಯ ಪರ ಈ ರೀತಿ ಮಾತನಾಡುವುದು ಹೈಕಮಾಂಡ್‌ಗೆ ಸಹ್ಯವಾಗುವುದಿಲ್ಲ. ಬೇರೆ ಯಾವುದೇ ನಾಯಕರು ಮಾತನಾಡಿದರೆ ಅದಕ್ಕೆ ಒಂದು ಗೌರವ-ಬೆಲೆ ಇರುತ್ತದೆ. ನೀವು ದಯವಿಟ್ಟು ಮಾತನಾಡಬೇಡಿ. ತಂದೆ ಮೇಲೆ ಮಕ್ಕಳಿಗೆ, ಮಕ್ಕಳ ಮೇಲೆ ತಂದೆಗೆ ಪ್ರೀತಿ ಇರುವುದು ಸಹಜ. ಆದರೆ, ಇದು ರಾಜಕಾರಣ. ನಾವೆಲ್ಲರೂ ಶಿಸ್ತಿನಿಂದ ನಡೆದುಕೊಳ್ಳಬೇಕು. ಸುಮ್ಮನೆ ಈ ರೀತಿ ಹೇಳಿಕೆ ಕೊಟ್ಟು ನಾವು ಮಾತನಾಡಲು ಅವಕಾಶ ನೀಡಬೇಡಿ’ ಎಂದು ಹೇಳಿದರು.

ನೋಟಿಸ್‌ ವಿಚಾರದಲ್ಲಿ ಎಲ್ಲರಿಗೂ ಒಂದೇ ನ್ಯಾಯ:

ಸಿಎಂ ಬದಲಾವಣೆ ವಿಚಾರ ಮಾತನಾಡಿದ್ದಕ್ಕೆ ನನಗೆ ನೋಟಿಸ್‌ ಕೊಟ್ಟಿದ್ದರು. ನನಗಾದಂತೆ ಎಲ್ಲರಿಗೂ ಆಗಬೇಕು. ನಾನು ಶಾಸಕ, ಅವರೂ(ಯತೀಂದ್ರ) ಶಾಸಕ. ಎಲ್ಲರಿಗೂ ಒಂದೇ ನ್ಯಾಯ ಸಿಗಬೇಕು. ಆಡಳಿತ ನಡೆಸುವ ಸ್ಥಾನದಲ್ಲಿ ಇರುವವರು ನ್ಯಾಯ ಕೊಡುವುದು ಅವರ ಧರ್ಮ. ಯತೀಂದ್ರಗೆ ಏಕೆ ನೋಟಿಸ್ ಕೊಟ್ಟಿಲ್ಲ ಎಂದು ನಾನು ಕೇಳಲ್ಲ. ನನಗೆ ಇನ್ನೂ 10 ನೋಟಿಸ್‌ ಕೊಟ್ಟರೂ ನನ್ನ ನಿರ್ಧಾರ ಒಂದೇ. ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಬೇಕು ಎಂದು ಪುನರುಚ್ಚರಿಸಿದರು.

ಡಿಕೆಶಿ ಪರ 80-90 ಶಾಸಕರ ಮನವಿ:

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಡಿ.ಕೆ.ಶಿವಕುಮಾರ್‌ ಅವರ ಹೋರಾಟ, ಬೆವರು, ಶ್ರಮ ಬಹಳಷ್ಟಿದೆ. ಈ ಶ್ರಮಕ್ಕೆ ಬೆಲೆ ಸಿಗಬೇಕು. ಡಿ.ಕೆ.ಶಿವಕುಮಾರ್‌ಗೆ ಅವಕಾಶ ನೀಡಬೇಕು ಎಂದು ಸುಮಾರು 80-90 ಶಾಸಕರು ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ. ಈಗ ಅವಕಾಶ ಕೊಟ್ಟರೆ ಮುಂದೆಯೂ ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ನಾವು ಆಸೆ ಪಡುತ್ತಿದ್ದೇವೆ ಎಂದರು.

ಡಿಕೆಶಿಗೆ ಸಾಮಾಜಿಕ ನ್ಯಾಯ ಕೊಡಿ:

ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಐದು ವರ್ಷ, ಈ ಅವಧಿಯಲ್ಲಿ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿ ಗೌರವ ತಂದಿದ್ದಾರೆ. ರಾಜಕೀಯದಲ್ಲಿ ಇಬ್ಬರೂ ಸಮಾನರಾಗಿದ್ದಾರೆ. ಡಿ.ಕೆ.ಶಿವಕುಮಾರ್‌ಗೆ ಈ ಅವಧಿಯಲ್ಲೇ ಒಂದು ಅವಕಾಶ ಕೊಡಬೇಕು. ಸಾಮಾಜಿಕ ನ್ಯಾಯದ ಬಗ್ಗೆ ಹೇಳುವ ನೀವು ಡಿ.ಕೆ.ಶಿವಕುಮಾರ್‌ಗೆ ಅವಕಾಶ ನೀಡಿ ಸಮಾನವಾಗಿ ನಡೆದುಕೊಳ್ಳಬೇಕು ಎಂದು ಇಕ್ಬಾಲ್‌ ಹುಸೇನ್‌, ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡದಂತೆ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಹೇಳಿದ್ದಾರೆ. ಆದರೂ ನಾನು ಮಾತನಾಡುತ್ತಿದ್ದೇನೆ. ಇದು ಪ್ರಜಾಪ್ರಭುತ್ವ. ನಾನು ಸ್ವತಂತ್ರವಾಗಿ ಮಾತನಾಡುತ್ತೇನೆ. ನನಗೆ ಯಾರ ಅಡ್ಡಿಯೂ ಇಲ್ಲ ಎಂದು ಶಾಸಕ ಇಕ್ಬಾಲ್‌ ಹುಸೇನ್‌ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಬದಲಾವಣೆಯಿಂದ ರಾಜ್ಯ ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಬದಲಾವಣೆ ಆಗಲ್ಲ. ಶಾಸಕರು, ಮಂತ್ರಿಗಳು, ಅಧಿಕಾರಿಗಳು ಅವರವರೇ ಇರುತ್ತಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್‌ ವಿವೇಚನೆಗೆ ಬಿಟ್ಟಿದ್ದೇವೆ. ಡಿ.ಕೆ.ಶಿವಕುಮಾರ್‌ಗೂ ಸಮಾನ ಅವಕಾಶ ನೀಡುವ ನಂಬಿಕೆ ಇದೆ

- ಇಕ್ಬಾಲ್‌ ಹುಸೇನ್‌, ಶಾಸಕ