ಡಿಕೆಶಿ, ನಾನು ಪ್ರತ್ಯೇಕ ಬಸ್‌ ಯಾತ್ರೆ  ಬಸ್‌ ಸಿದ್ಧವಾಗಿದೆ, ಕೋಲಾರಕ್ಕೆ ಟೆಸ್ಟ್‌ರನ್‌ ಆಗಿದೆ, ಯಾತ್ರೆ ಆರಂಭಕ್ಕೆ ಜ್ಯೋತಿಷ್ಯ ನೋಡಲ್ಲ ಡಿಸೆಂಬರ್‌ ಮೊದಲ ವಾರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಬಿಡುಗಡೆ

ಮೈಸೂರು (ನ.16) : ಕಾಂಗ್ರೆಸ್‌ ಬಸ್‌ ಯಾತ್ರೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಬಸ್‌ ಸಿದ್ಧವಾಗುತ್ತಿದೆ, ಕೋಲಾರಕ್ಕೆ ಹೋಗಿ ಟೆಸ್ಟ್‌ ರನ್‌ ಆಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ನಾನು ಪ್ರತ್ಯೇಕವಾಗಿ ಎರಡು ಕಡೆ ಸಂಚಾರ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಸ್‌ ಯಾತ್ರೆ ಆರಂಭಕ್ಕೆ ನಾವೇನು ಜೋತಿಷ್ಯ ನೋಡುವುದಿಲ್ಲ. ಶೂನ್ಯ ಮಾಸದಲ್ಲಿ ಹುಟ್ಟಿದ ಮಕ್ಕಳೆಲ್ಲ ಏನ್‌ ಸತ್ತು ಹೋಗ್ತಾರಾ? ನಮಗೆ ರಾಹುಕಾಲ, ಗುಳಿಗ ಕಾಲ, ಯಮಗಂಡ ಕಾಲ ಯಾವುದೂ ಇಲ್ಲ. ಎಲ್ಲ ಒಳ್ಳೆಯ ಕಾಲವೇ ಎಂದರು. ಜತೆಗೆ, ನವೆಂಬರ್‌ ಕೊನೆ ಅಥವಾ ಡಿಸೆಂಬರ್‌ ಮೊದಲ ವಾರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿರಿಲೀಸ್‌ ಮಾಡುತ್ತೇವೆ ಎಂದು ತಿಳಿಸಿದರು.

'ಸಿದ್ದುಗೆ ವರುಣಾ ಸೇಫ್‌, ಕೋಲಾರದಲ್ಲಿ ನಿಂತು ಸೋಲಬಾರದು'

ಬಲವಂತದ ಮತಾಂತರಕ್ಕೆ ವಿರೋಧ: ಬಲವಂತದ ಮತಾಂತರಕ್ಕೆ ನನ್ನ ವಿರೋಧವಿದೆ ಎಂದು ಇದೇ ವೇಳೆ ತಿಳಿಸಿದ ಅವರು, ಯಾರನ್ನೂ ಬಲವಂತವಾಗಿ ಮತಾಂತರ ಮಾಡಕೂಡದು. ಯಾರು, ಯಾವ ಧರ್ಮ ಬೇಕಾದರೂ ಪಾಲನೆ ಮಾಡಬಹುದು. ಈ ವಿಚಾರದಲ್ಲಿ ಸುಪ್ರೀಂ ಕೋರ್ಚ್‌ ಆದೇಶದ ಪರ ನಾವಿದ್ದೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಸೋಲಿಸಲು ಕಾಂಗ್ರೆಸ್ಸಿನವರೇ ಸಾಕು ಎಂಬ ಕುಮಾರಸ್ವಾಮಿ ಹೇಳಿಕೆ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ, ನಾನು ಅವರು ಇವರ ಹೇಳಿಕೆಗಳಿಗೆ ಪ್ರತಿಕ್ರಿಯೆ ಕೊಡುತ್ತಾ ಕೂರಲ್ಲ. ಜನರ ಸಮಸ್ಯೆ ಬಗ್ಗೆ ಏನಾದ್ರು ಕೇಳಿ ಮಾತನಾಡುತ್ತೇನೆ. ಅವರು ಹೇಳಿದ್ರು, ಇವರು ಹೇಳಿದ್ರು ಅಂತ ನನ್ನ ಮುಂದೆ ಕೇಳಬೇಡಿ ಎಂದು ಮಾಧ್ಯಮದವರ ಮುಂದೆ ಗರಂ ಆದರು.

ಗುಂಬಜ್‌ ಒಡೆಯುತ್ತೇನೆ ಅನ್ನುವುದಕ್ಕೆ ಪ್ರತಾಪ್‌ ಸಿಂಹ ಯಾರು?: ಸಿದ್ದರಾಮಯ್ಯ

ನಾನು 8 ಬಾರಿ ಗೆದ್ದಿದ್ದೇನೆ ಇದಕ್ಕೆ ಏನು ಹೇಳ್ತೀರಾ? ಯಾರನ್ನೇ ಗೆಲ್ಲಿಸೋದು, ಸೋಲಿಸೋದು ಜನರ ತೀರ್ಮಾನ. ಕುಮಾರಸ್ವಾಮಿ ಹೇಳಿದ, ಕಟೀಲ್‌ ಹೇಳಿದ ಅಂದ್ರೆ ಆಗುತ್ತಾ? ಜನ ತೀರ್ಮಾನ ಮಾಡ್ತಾರೆ ಎಂದು ಪ್ರತಿಕ್ರಿಯಿಸಿದರು.