Asianet Suvarna News Asianet Suvarna News

ಡಿಕೆ ಸಹೋ​ದ​ರರ ಕ್ಷೇತ್ರ​ದಿಂದಲೇ ಬಿಜೆಪಿ ರಣ ಕಹಳೆಗೆ ಸಿದ್ಧತೆ

ಹಳೇ ಮೈಸೂ​ರಿ​ನಲ್ಲಿ ಕಮಲ ಅರ​ಳಿ​ಸಲು ಬಿಜೆಪಿ ಹೊಸ ಪ್ಲಾನ್‌. ಪಕ್ಷ ಸಂಘ​ಟ​ನೆಗೆ ಉಸ್ತು​ವಾ​ರಿ​ಗ​ಳಾಗಿ ಕೇಂದ್ರ ಸಚಿ​ವ​ರ ನೇಮಕ. ಡಿಕೆ ಸಹೋ​ದ​ರರ ಕ್ಷೇತ್ರ​ ಆರಿಸಿದ ಬಿಜೆಪಿ.

DK brothers Ramanagara constituency BJP  battleground for  Assembly Election gow
Author
Bengaluru, First Published Aug 13, 2022, 5:48 AM IST

ಎಂ.ಅ​ಫ್ರೇಜ್ ಖಾನ್‌

ರಾಮ​ನ​ಗರ (ಅ.12): ಹಳೇ ಮೈಸೂರು ಭಾಗ​ದಲ್ಲಿ ಪಕ್ಷ ಸಂಘ​ಟನೆಗೆ ಮುಂದಾ​ಗಿ​ರುವ ಆಡ​ಳಿತರೂಢ ಬಿಜೆಪಿ ಇಡೀ ರಾಜ್ಯ​ದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿ​ಸಿ​ರುವ ಬೆಂಗ​ಳೂರು ಗ್ರಾಮಾಂತರ ಲೋಕ​ಸಭಾ ಕ್ಷೇತ್ರ​ದಿಂದಲೇ ಚಾಲನೆ ನೀಡಲು ಮುಂದಾ​ಗಿದೆ. ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಅವರ ಸಹೋ​ದರ ಸಂಸದ ಡಿ.ಕೆ.​ಸು​ರೇಶ್‌ ಪ್ರತಿ​ನಿ​ಧಿ​ಸುವ ಕ್ಷೇತ್ರ​ದ​ಲ್ಲಿಯೇ ಬಿಜೆಪಿ ರಣ​ಕ​ಹಳೆ ಮೊಳ​ಗಿ​ಸಲು ಅಖಾಡ ಸಜ್ಜು​ಗೊ​ಳಿ​ಸು​ತ್ತಿದೆ. ಇದ​ಕ್ಕಾಗಿ ಕೇಂದ್ರ ಸಚಿ​ವ​ರನ್ನು ನಿಯೋ​ಜನೆ ಮಾಡಿ​ದೆ. ಹಳೇ ಮೈಸೂರು ಭಾಗ​ದ ಲೋಕ​ಸಭಾ ಕ್ಷೇತ್ರ​ಗ​ಳಲ್ಲಿ ಬಿಜೆಪಿ ಪಕ್ಷದ ಸಂಘ​ಟ​ನೆ​ಗಾಗಿ ಕೇಂದ್ರ ಸಚಿ​ವ​ರನ್ನು ಉಸ್ತು​ವಾ​ರಿ​ಗಳನ್ನಾಗಿ ನೇಮಕ ಮಾಡ​ಲಾ​ಗಿದೆ. ಅದ​ರಂತೆ ಬೆಂ.ಗ್ರಾ. ಲೋಕ​ಸಭಾ ಕ್ಷೇತ್ರಕ್ಕೆ ವಿದೇ​ಶಾಂಗ ಸಚಿವ ಜೈಶಂಕರ್‌ ಅವ​ರಿಗೆ ಸಂಘ​ಟನೆ ಜವಾ​ಬ್ದಾರಿ ನೀಡ​ಲಾ​ಗಿದೆ. ಮುಂಬ​ರುವ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಮಿಷನ್‌ 150 ಕಾರ್ಯ​ಗ​ತ​ಗೊ​ಳಿ​ಸುವ ಹಾಗೂ ಸಂಸತ್‌ ಚುನಾ​ವಣೆ ಉದ್ದೇ​ಶ​ದಿಂದ ಪಕ್ಷ ಸಂಘ​ಟನೆ ದುರ್ಬ​ಲ​ವಾ​ಗಿ​ರುವ ಭಾಗ​ದಲ್ಲಿ ಹೆಚ್ಚು ಸ್ಥಾನ ಗಳಿ​ಸಲು ಪಕ್ಷ ಸಂಘ​ಟ​ನೆಯ ಹೆಸ​ರಿ​ನಲ್ಲಿ ಬಿಜೆಪಿ ಹೊಸ ತಂತ್ರ ರೂಪಿ​ಸಿ​ದೆ.

ಬೂತ್‌ಗಳ ವಿಂಗ​ಡಣೆ: ಬಿಜೆಪಿ ಬೂತ್‌ ಗಳನ್ನು ಎಬಿಸಿ ಎಂದು 3 ವಿಧ​ಗ​ಳಾಗಿ ವಿಂಗ​ಡಿ​ಸಿದೆ. ‘ಎ‘ ಎಂದರೆ ಬಿಜೆಪಿ ಅಧಿ​ಕಾರಕ್ಕೆ ಬರು​ತ್ತದೆ ಎಂಬ ವಿಶ್ವಾಸ, ‘ಬಿ‘ ಎಂದರೆ ಬಿಜೆ​ಪಿಗೆ ಮತ​ಗಳು ಬರು​ತ್ತವೆ ಆದರೆ, ಅಭ್ಯರ್ಥಿ​ಗಳು ಇಲ್ಲ ಎನ್ನು​ವುದು. ‘ಸಿ‘ ಎಂದರೆ ಇಲ್ಲಿ ಬೇರೆ ಪಕ್ಷ​ಗ​ಳದೇ ಮೇಲುಗೈ ಎನ್ನು​ವುದು. ಈ ಆಧಾ​ರದ ಮೇಲೆ ಬಿಜೆಪಿ ತಳ​ಮ​ಟ್ಟ​ದಲ್ಲಿ ಪಕ್ಷ ಸಂಘ​ಟ​ನೆಗೆ ಕೈ ಹಾಕಿದೆ.

ಇದರ ಮೊದಲ ಭಾಗವಾಗಿ ಆ. 13ರಂದು ವಿದೇಶಾಂಗ ಸಚಿವ ಜೈ ಶಂಕರ್‌ ಕನ​ಕ​ಪುರ ಹಾಗೂ ರಾಮ​ನ​ಗರ ವಿಧಾ​ನ​ಸಭಾ ಕ್ಷೇತ್ರ​ಗ​ಳಿಗೆ ಭೇಟಿ ನೀಡು​ತ್ತಿ​ದ್ದಾರೆ. ಸರ್ಕಾರಿ ಕಾರ್ಯ​ಕ್ರ​ಮದ ಜತೆಗೆ ಪಕ್ಷ ಸಂಘ​ಟ​ನೆಗೆ ಪೂರ​ಕ​ವಾಗಿ ಪಾದ​ಯಾತ್ರೆ ಹಾಗೂ ಬಿಜೆಪಿ ನಾಯ​ಕ​ರೊಂದಿಗೆ ಸಭೆ​ಯನ್ನು ಸಚಿ​ವರು ನಡೆ​ಸುವ​ರು.

ಕನ​ಕ​ಪುರ ಕ್ಷೇತ್ರ ವ್ಯಾಪ್ತಿಯ ಹಾರೋ​ಹ​ಳ್ಳಿಯಲ್ಲಿ 1 ಕಿ.ಮೀ ಪಾದ​ಯಾತ್ರೆ ನಡೆ​ಸು​ವ ಜೈಶಂಕರ್‌, ಜೈನ್‌ ಯೂನಿ​ವ​ರ್ಸಿ​ಟಿ​ಯಲ್ಲಿ ವಿದ್ಯಾ​ರ್ಥಿ​ಗ​ಳೊಂದಿಗೆ ಸಂವಾದದಲ್ಲಿ ಪಾಲ್ಗೊ​ಳ್ಳು​ವರು. ನಂತರ ಬೆಂಗ​ಳೂರು - ಕನ​ಕ​ಪುರ ರಾಷ್ಟ್ರೀಯ ಹೆದ್ದಾರಿ -209 ವೀಕ್ಷಣೆ ಮಾಡ​ಲಿ​ದ್ದಾರೆ.

ನಂತರ ರಾಮ​ನ​ಗರಕ್ಕೆ ಭೇಟಿ ನೀಡುವ ಸಚಿ​ವರು, ಅಂಬೇ​ಡ್ಕರ್‌ ಭವ​ನ​ದಲ್ಲಿ ಫಲಾ​ನು​ಭ​ವಿ​ಗ​ಳೊಂದಿಗೆ ಚರ್ಚೆ ನಡೆ​ಸು​ವರು. ಬಳಿಕ ಶಿಲ್ಹಾಂದ್ರ ರೆಸಾರ್ಚ್‌ನಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯ​ಕ​ರ್ತ​ರೊಂದಿಗೆ ಜೈಶಂಕರ್‌ ಸಭೆ ನಡೆ​ಸು​ವರು. ಇವ​ರಿಗೆ ರಾಜ್ಯ​ಸಭಾ ಸದಸ್ಯ ಜಗ್ಗೇಶ್‌ ಹಾಗೂ ಜಿಲ್ಲಾ ಉಸ್ತು​ವಾರಿ ಸಚಿವ ಅಶ್ವತ್ಥ ನಾರಾ​ಯಣ ಸಾಥ್‌ ನೀಡ​ಲಿ​ದ್ದಾ​ರೆ.

ಬಿಜೆ​ಪಿಯ ಹೊಸ ಕಾರ್ಯ​ತಂತ್ರ: ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಒಬ್ಬೊಬ್ಬರು ಕೇಂದ್ರ ಸಚಿವರು, ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ತಿಂಗಳಿಗೆ ಮೂರು ದಿನ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಪಾದ​ಯಾತ್ರೆ ನಡೆ​ಸಿ ಜನರ ಕಷ್ಟಸುಖಗಳನ್ನು ಆಲಿಸಬೇಕು. ಮುಂದಿನ 18 ತಿಂಗಳವರೆಗೂ ಈ ಪ್ರಕ್ರಿಯೆ ಚಾಲ್ತಿಯಲ್ಲಿರಬೇಕು ಎಂಬುದು ಬಿಜೆಪಿ ಚಿಂತ​ನೆ.

ಇದಕ್ಕೆ ಪ್ರಮುಖ ಕಾರಣ ಬೆಂ.ಗ್ರಾ, ಮಂಡ್ಯ ಹಾಗೂ ಹಾಸನ ಲೋಕ​ಸಭಾ ಕ್ಷೇತ್ರ​ಗಳು. 2019ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿತ್ತು.

ಚುನಾವಣೆಯಲ್ಲಿ ಬಿಟ್ಟಿ ಭಾಗ್ಯಗಳ ಘೋಷಣೆ, ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಛೀಮಾರಿ!

ಬೆಂ. ಗ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್‌, ಮಂಡ್ಯದಲ್ಲಿ ಪಕ್ಷೇತರ, ಹಾಸನದಲ್ಲಿ ಜೆಡಿಎಸ್‌ ಗೆಲುವು ಸಾಧಿ​ಸಿತ್ತು. ಹೀಗಾಗಿ ಈ ಮೂರು ಕ್ಷೇತ್ರಗಳಲ್ಲಿಯೂ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಮಾತ್ರವಲ್ಲದೆ ವಿಧಾನಸಭೆ ಚುನಾವಣೆಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬಿಜೆಪಿ ಮುಂದಿನ 18 ತಿಂಗಳ ವರೆಗೂ ಬಿಜೆ​ಪಿ ಈ ತಂತ್ರ ಅನುಸರಿಸಲಿದೆ.

ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ತಲಾ 13 ಎಂಪಿ ಸೀಟು: ಮೋದಿ ಸ್ಥಾನಕ್ಕೆ ಯಾರು?

ಬಿಜೆಪಿ ಕರ್ನಾ​ಟ​ಕ​ದಲ್ಲಿ ಬೆಂಗ​ಳೂ​ರು ಗ್ರಾಮಾಂತರ ಲೋಕ​ಸಭಾ ಕ್ಷೇತ್ರ ಸೇರಿ ಮೂರು ಕ್ಷೇತ್ರಗಳನ್ನು ಗುರಿ​ಯಾ​ಗಿ​ಟ್ಟು​ಕೊಂಡಿದೆ. ಹೀಗಾ​ಗಿಯೇ ಕೇಂದ್ರ ಸಚಿ​ವರ ಜತೆಗೆ ಸಿನಿಮಾ ನಟ,​ ನ​ಟಿ​ಯರು ಹಾಗೂ ಆಯಾ​ಯ ಜಿಲ್ಲಾ ಉಸ್ತು​ವಾರಿ ಸಚಿ​ವರ ತಂಡ​ವನ್ನು ಸಿದ್ದ​ಪ​ಡಿ​ಸಿದೆ. ಈಗ ಕಾಂಗ್ರೆಸ್‌ ಸಂಸದ ಪ್ರತಿ​ನಿ​ಧಿ​ಸುವ ಕ್ಷೇತ್ರ​ದಿಂದಲೇ ಬಿಜೆಪಿ ತನ್ನ ಸಂಘ​ಟನೆ ಶುರು ಮಾಡಿದೆ.

Follow Us:
Download App:
  • android
  • ios