Asianet Suvarna News Asianet Suvarna News

ದಾವಣಗೆರೆಗೆ ಬೀಗರಂತೆ ಬಂದು ಹೋಗೋ ಉಸ್ತುವಾರಿ ಸಚಿವರು, ಸೊರಗಿದ ಬಿಜೆಪಿ ಶಾಸಕರು!

  • ಅಧಿಕಾರವೆಂಬ ಶಕ್ತಿ ಇದ್ದರೂ ಅವಕಾಶ ಇಲ್ಲದೇ ಸೊರಗಿದ  ಬಿಜೆಪಿ ಶಾಸಕರು
  • ಸಮ್ಮಿಶ್ರ, ಬಿಜೆಪಿ ಸರ್ಕಾರದ ಅವಧಿಯಲ್ಲೂ ಪರ ಜಿಲ್ಲೆಯ ಸಚಿವರಿಗೆ ಪಟ್ಟ
  • ಬಿಜೆಪಿ ಮೊದಲ ಸಲ ಅಧಿಕಾರಕ್ಕೆ ಬಂದಾಗ ಇದ್ದ ಬಿಜೆಪಿ ಜಿಲ್ಲಾ ನಾಯಕರ ಖದರ್‌ ಈಗ ಇಲ್ಲ
district incharge minister byrathi basavaraj not visiting to davangere properly gow
Author
Bengaluru, First Published Jun 24, 2022, 12:11 PM IST

ದಾವಣಗೆರೆ (ಜೂನ್ 24): ಬೀಗರ ಮನೆಗೆ ಬಂದು ಹೋಗುವಂತೆ ಬಂದು ಹೋಗುವ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರವೆಂಬ ಶಕ್ತಿ ಇದ್ದರೂ ಅವಕಾಶ ಇಲ್ಲದೇ ಸೊರಗಿದ ಜಿಲ್ಲೆಯ ಬಿಜೆಪಿ ಶಾಸಕರು, ಪ್ರಭಾವಿ ನಾಯಕರಿದ್ದರೂ ಪಟ್ಟು ಹಿಡಿದು ಸಚಿವ ಸ್ಥಾನ ಪಡೆಯಲಾಗದ ಅಸಹಾಯಕ ಸ್ಥಿತಿಯಲ್ಲಿ ಆಡಳಿತ ಪಕ್ಷದ ಜಿಲ್ಲೆಯ ಕೇಸರಿ ಪಕ್ಷದ ನಾಯಕರು, ತಾಳ ಮೇಳ ಇಲ್ಲದಂತಾದ ಪಾಲಿಕೆ ಆಡಳಿತ ಯಂತ್ರ!

ಸದ್ಯ, ಇದು ದಾವಣಗೆರೆ ನಗರ, ಜಿಲ್ಲೆಯಲ್ಲಿ ಕಂಡು ಬರುತ್ತಿರುವ ಸ್ಥಿತಿ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡರಲ್ಲಿ ವಿಪಕ್ಷ ಶಾಸಕರಿದ್ದರೆ, ಉಳಿದ 5ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಆದರೆ, ಜಿಲ್ಲೆಯವರಿಗೆ ಅಧಿಕಾರದ ಚುಕ್ಕಾಣಿ ಇಲ್ಲದೇ, ಆಡಳಿತ ವ್ಯವಸ್ಥೆಯೇ ಅಧಿಕಾರಿಗಳ ಮೇಲೆ ಅವಲಂಬಿತವಾಗಿದೆ. ನಾನು ಭೇಟಿ ನೀಡಿದ್ದೇನೆ, ನಾನು ಸಂಪರ್ಕದಲ್ಲಿದ್ದೇನೆ, ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂಬ ಸಿದ್ಧ ಮಾತುಗಳನ್ನೇ ಆಡುವ ಜಿಲ್ಲಾ ಉಸ್ತುವಾರಿ ಸಚಿವರಿಗೆ (ಬೈರತಿ ಬಸವರಾಜ್) ದಾವಣಗೆರೆಗೆ ಬರುವುದಕ್ಕೆ ಕಷ್ಟಇರಬಹುದು. ಸದ್ಯದ ಜಿಲ್ಲಾ ಉಸ್ತುವಾರಿ ಎಂಬುದು ಒಲ್ಲದವರ ಬಾಯಲ್ಲಿ ಕಡುಬು ತುರುಕಿದಂತಾಗಿರುವುದು ಸುಳ್ಳಲ್ಲ. ಕನಿಷ್ಠ ಪಕ್ಷ ಸ್ಥಳೀಯ ಐವರು ಶಾಸಕರ ಪೈಕಿ ಯಾರಿಗಾದರೂ ಸಚಿವ ಸ್ಥಾನ ನೀಡಿದ್ದರೆ ಅಧಿಕಾರಿ, ನೌಕರರಿಗೂ ಒಂದಿಷ್ಟುಭಯ ಇರುತ್ತಿತ್ತು.

BBMP New 243 Ward List ಸರಿ ಇಲ್ವಾ? ಈಗಲೇ ದೂರು ನೀಡಿ

ಉಗಿಯಲೂ ಆಗದೇ, ನುಂಗಲೂ ಆಗದ ದುಸ್ಥಿತಿ!: ಆದರೆ, ಹಿಂದಿನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಮೊದಲ ಬಾರಿಗೆ ಪರ ಸ್ಥಳದವರಿಗೆ ಜಿಲ್ಲಾ ಉಸ್ತುವಾರಿ ನೀಡಿದ್ದರ ಪರಿಣಾಮ ಇಂದಿಗೂ ದಾವಣಗೆರೆ ಸ್ಥಳೀಯರಿಗೆ ಸಚಿವ ಸ್ಥಾನ ಇಲ್ಲದಂತಾಗಿದೆ. ಒಮ್ಮೆ ಜಿಲ್ಲೆಯ ಹಿಡಿತ ತಪ್ಪಿದ ಪರಿಣಾಮ ಅದರ ನೋವು, ಸಂಕಟ ಈಗ ಜಿಲ್ಲೆಯ ಬಿಜೆಪಿ ಜನ ಪ್ರತಿನಿಧಿಗಳೂ ಅನುಭವಿಸುತ್ತಿದ್ದಾರೆ. ಈ ಕಹಿ ಸತ್ಯವನ್ನು ನುಂಗುವಂತೆಯೂ ಇಲ್ಲ, ಉಗುಳುವ ಪರಿಸ್ಥಿತಿಯಲ್ಲೂ ಇಲ್ಲ. ಆತ್ಮೀಯರ ಬಳಿ ಜಿಲ್ಲೆಯ ಸ್ಥಿತಿ, ಮುಂದಿನ ಬಿಜೆಪಿ ಭವಿಷ್ಯದ ಬಗ್ಗೆ ಚಿಂತೆಯನ್ನು ಮಾಡುವುದಕ್ಕೆ ಸೀಮಿತವಾಗಿದ್ದಾರೆ.

ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆಯಾದ ದಾವಣಗೆರೆ ಕಳೆದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ, ಈಗಿನ ಬಿಜೆಪಿ ಸರ್ಕಾರದಲ್ಲೂ ಕಡೆಗಣಿಸಲ್ಪಡುತ್ತಿದೆ. ಇದರಲ್ಲಿ ಬಿಜೆಪಿ ಸ್ಥಳೀಯ ನಾಯಕರ ಸ್ವಯಂ ಕೃತಾಪರಾಧವೂ ಇಲ್ಲದಿಲ್ಲ. ಒಂದಾಗಿ ಬನ್ನಿ ನೋಡೋಣ ಎಂಬ ಸಂದೇಶ ರಾಜ್ಯಮಟ್ಟದಿಂದ ಬಂದರೂ ಇಲ್ಲಿನವರು ಒಂದಾಗಿ, ಪಟ್ಟು ಹಿಡಿಯಲಿಲ್ಲ. ಒಂದು ರೀತಿ ದಾವಣಗೆರೆ ಜಿಲ್ಲೆಯವರಿಗೆ ಸಚಿವ ಸ್ಥಾನ ಸಿಗುವ ವಿಚಾರವಂತು 7 ಕೋಟಿ ಜನ ಸೇರಲಿಲ್ಲ, ಮೈಲಾರ ಲಿಂಗಪ್ಪನ ಶನಿ ಹರಿಯಲಿಲ್ಲ ಎಂಬ ಗಾದೆಯ ಮಾತಿನಂತಾಗಿರುವುದು ಸುಳ್ಳಲ್ಲ. ದಶಕದ ಹಿಂದೆ ಜಿಲ್ಲೆಗೆ ಅಧಿಕಾರ, ಹುದ್ದೆಗಳ ಭರಪೂರ ಸುಗ್ಗಿಯೇ ಆಗಿತ್ತು. ಆಗಂತೂ ಮೂವರಿಗೆ ಸಚಿವ ಸ್ಥಾನ ಸಿಕ್ಕಿತ್ತು. ನಾಲ್ವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.

ಆಘಾತ ತಂದ ಪಿ.ಯು ಫಲಿತಾಂಶ, ಚಿತ್ರದುರ್ಗದಲ್ಲಿ ಆತ್ಮಾವಲೋಕನ ಸಭೆ

ಪುರುಷ-ಮಹಿಳಾ ಆಕಾಂಕ್ಷಿಗಳ ಬಗ್ಗೆ ಸಮೀಕ್ಷೆ?!: ಇನ್ನು ಕೆಲ ತಿಂಗಳಲ್ಲೇ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆದಿವೆ. ಈಗಾಗಲೇ ಯಾರ ಅಭ್ಯರ್ಥಿ ಮಾಡಬೇಕೆಂಬ ಸಮೀಕ್ಷೆ ಒಳಗೊಳಗೆ ನಡೆಯುತ್ತಿದೆ. ಅನೇಕರಿಗೆ ಬೆಂಗಳೂರು ಇತರೆ ಕಡೆಯಿಂದ ಕರೆ ಮಾಡಿ, ಇಂತಿಂತಹವರ ಬಗ್ಗೆ, ಪಕ್ಷಕ್ಕೆ, ಕೊಡುಗೆ, ಜನರೊಡನೆ ಒಡನಾಟ, ಭಾಷಾ ವೈಖರಿ, ವೈಯಕ್ತಿಕ ಕೊಡುಗೆ, ಸಮಾಜಮುಖಿ ಸೇವೆ, ಅಭಿವೃದ್ಧಿ ಪರ ಚಿಂತನೆ ಹೀಗೆ ಪುರುಷ-ಮಹಿಳೆಯರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಸಾಮಾನ್ಯ ವರ್ಗ, ಹಿಂದುಳಿದ ವರ್ಗ, ಪರಿಶಿಷ್ಟರು ಹೀಗೆ ಎಲ್ಲಾ ಜಾತಿ ವರ್ಗದ ಪುರುಷ-ಮಹಿಳೆಯರ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ಏಜೆನ್ಸಿಗಳ ಹೆಸರಿನಲ್ಲಿ ನಡೆಯುತ್ತಿದೆ. ಆದರೆ, ಜಿಲ್ಲೆಗೊಂದು ಸಚಿವ ಸ್ಥಾನ ನೀಡುವ ಬಗ್ಗೆ ಮಾತ್ರ ಆಡಳಿತ ಪಕ್ಷ, ವರಿಷ್ಠರು ಚಿತ್ತ ಹರಿಸದಿರುವುದು ಮುಂಬರುವ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಲಾಭ ಮಾಡಿದರೆ, ಮತ್ತೊಂದಕ್ಕೆ ಲುಕ್ಸಾನು ಮಾಡಿದರೂ ಅಚ್ಚರಿ ಇಲ್ಲ.

Follow Us:
Download App:
  • android
  • ios