ಗುಜರಾತ್‌ನಲ್ಲಿ ನಾವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ ಭತ್ಯೆ ನೀಡುವುದಾಗಿ ಎಎಪಿ ಭರವಸೆ ನೀಡಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಈ ಘೋಷಣೆ ಮಾಡಿದ್ದಾರೆ. 

ಗುಜರಾತ್‌ ಪ್ರವಾಸದಲ್ಲಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಅರವಿಂದ್‌ ಕೇಜ್ರಿವಾಲ್‌ ಭರ್ಜರಿ ಘೋಷಣೆಯೊಂದನ್ನು ಮಾಡಿದ್ದಾರೆ. ಗುಜರಾತ್‌ನಲ್ಲಿ ಆಪ್‌ ಪಕ್ಷವನ್ನು ಅಧಿಕಾರಕ್ಕೆ ತರಲು ತನ್ನೆಲ್ಲಾ ಪ್ರಯತ್ನ ಮಾಡುತ್ತಿರುವ ಆಮ್‌ ಆದ್ಮಿ ಪಕ್ಷ (Aam Aadmi Party) ಈಗ ಗುಜರಾತ್‌ನ ಮಹಿಳೆಯರ ಮತಗಳ ಮೆಲೆ ಕಣ್ಣಿಟ್ಟಿದೆ.

ಗುಜರಾತ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ 18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೆ ಮಾಸಿಕ ರೂ. 1,000 ಭತ್ಯೆ ನೀಡುವುದಾಗಿ ಎಎಪಿ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಭರವಸೆ ನೀಡಿದ್ದಾರೆ. ಈ ಅನುದಾನ ತೆಗೆದುಕೊಳ್ಳಲು ಒಪ್ಪುವ ಎಲ್ಲ ಮಹಿಳೆಯರಿಗೆ ಕೊಡುವುದಾಗಿಯೂ ಚುನಾವಣಾ ಪೂರ್ವ ಆಶ್ವಾಸನೆ ನೀಡಿದ್ದಾರೆ.

ಮೋದಿಗೆ ಠಕ್ಕರ್, ಗುಜರಾತ್ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಆಪ್!

ಗುಜರಾತ್‌ನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಕೇಜ್ರಿವಾಲ್‌ ಈಗಾಗಲೇ ಐದನೇ ಆಶ್ವಾಸನೆ ನೀಡಿದ್ದು, ಅಧಿಕಾರಕ್ಕೆ ಬಂದರೆ ಈ ಎಲ್ಲ ಆಶ್ವಾಸನೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಗುಜರಾತ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇನ್ನು, ನೂರಾರು ಮಹಿಳೆಯರ ಎದುರು ಈ ಘೋಷಣೆ ಮಾಡಿದ ಅರವಿಂದ್ ಕೇಜ್ರಿವಾಲ್, ರೂ. 1,000 ಉಚಿತ ಅಲ್ಲ. ಅದು ನಿಮ್ಮ ಹಕ್ಕು. ಜನರ ಹಣ ಜನರಿಗೇ ಸೇರಬೇಕು, ಸ್ವಿಸ್ ಬ್ಯಾಂಕ್‌ನಲ್ಲಿ ಅಲ್ಲ’’ ಎಂದು ಹೇಳಿದ್ದಾರೆ. 

ಈ ಹಿಂದೆ ಪ್ರತಿ ಕುಟುಂಬಕ್ಕೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವುದಾಗಿ ಕೇಜ್ರಿವಾಲ್‌ ಭರವಸೆ ನೀಡಿದ್ದರು. ಅಲ್ಲದೆ, ರಾಜ್ಯದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಯುವಕರಿಗೆ ರೂ. 3,000 ಮಾಸಿಕ ಭತ್ಯೆ ನೀಡುವುದಾಗಿಯೂ ತಿಳಿಸಿದ್ದಾರೆ.

ಹಿಮಾಚಲ, ಗುಜರಾತ್‌ನಲ್ಲಿ ಕಾಂಗ್ರೆಸ್‌ ಸೋಲಿನ ಭವಿಷ್ಯ: ಪ್ರಶಾಂತ್ ಕಿಶೋರ್ ಟ್ವೀಟ್‌ನಲ್ಲಿ ಅಚ್ಚರಿಯ ವಿಚಾರ!

ಉತ್ತರ ಪ್ರದೇಶದಲ್ಲಿ ಬಿಜೆಪಿ ಉನ್ನತ ನಾಯಕತ್ವದ ವಿರುದ್ಧ ಯೋಗಿ ಬಂಡಾಯ: ಎಎಪಿ
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಉನ್ನತ ನಾಯಕತ್ವದ ವಿರುದ್ಧ ಯೋಗಿ ಆದಿತ್ಯನಾಥ್‌ ಬಂಡಾಯವೆದ್ದಿದ್ದಾರೆ ಎಂದು ಎಎಪಿ ಬುಧವಾರ ಹೇಳಿದೆ. ಇದಕ್ಕೆ ಕಾರಣ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ 60 ವರ್ಷ ಮೇಲ್ಪಟ್ಟ ಮಹಿಳಾ ಹಿರಿಯ ನಾಗರಿಕರಿಗೆ ಉಚಿತ ಬಸ್‌ ಪ್ರಯಾಣವನ್ನು ಘೋಷಿಸಿರುವುದು. ಅಲ್ಲದೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಕೇಜ್ರಿವಾಲ್‌ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಪ್ರಧಾನಿ ಮೋದಿ ಉಚಿತವಾಗಿ ನೀಡುವುದನ್ನು ವಿರೋಧಿಸಿದರೂ ಯುಪಿ ಸಿಎಂ ಉಚಿತ ಕೊಡುಗೆ ಘೋಷಣೆ ಮಾಡಿದ್ದಾರೆ ಎಂದು ಎಎಪಿ ಹೇಳಿಕೊಂಡಿದೆ.

ಶೀಘ್ರದಲ್ಲೇ ಉತ್ತರ ಪ್ರದೇಶದಲ್ಲಿ 60 ವರ್ಷ ಮೇಲ್ಪಟ್ಟ ತಾಯಿಯಂದಿರು ಹಾಗೂ ಸಹೋದರಿಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಸಿದ್ಧತೆ ಮಾಡುತ್ತೇವೆ ಎಂದು ಯೋಗಿ ಆದಿತ್ಯನಾಥ್‌ ಬುಧವಾರ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದರು. ಯೋಗಿ ಅವರ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಎಎಪಿ ರಾಷ್ಟ್ರೀಯ ವಕ್ತಾರ ಹಾಗೂ ರಾಜಸಭಾ ಸಂಸದ ಸಂಜಯ್ ಸಿಂಗ್, ಬಿಹಾರದ ನಂತರ ಉತ್ತರ ಪ್ರದೇಶದಲ್ಲಿ ಮೋದಿ ಜೀ ವಿರುದ್ಧ ಬಂಡಾಯ ಎದ್ದಿರುವ ಹಾಗಿದೆ ಎಂದು ಮೈಕ್ರೋ ಬ್ಲಾಗಿಂಗ್ ಜಾಲತಾಣದಲ್ಲಿ ಘೋಷಿಸಿದ್ದರು. ಅಲ್ಲದೆ, ಮೋದಿ ಉಚಿತ ಕೊಡುಗೆಗಳನ್ನು ವಿರೋಧಿಸುತ್ತಾರೆ, ಆದರೆ ಯೋಗಿ ಉಚಿತ ಕೊಡುಗೆ ಘೋಷಿಸುತ್ತಾರೆ ಎಂದು ಎಎಪಿ ನಾಯಕಿ ಅತೀಷಿ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದ್ದಾರೆ. 

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಎಎಪಿ ನಾಯಕರ ಈ ಟ್ವೀಟ್‌ಗಳನ್ನು ರೀಟ್ವೀಟ್‌ ಮಾಡಿದ್ದಾರೆ. ಆದರೆ, ಈ ಸಂಬಂಧ ಅವರು ಯಾವುದೇ ಕಾಮೆಂಟ್‌ಗಳನ್ನು ಮಾಡಿಲ್ಲ.