Asianet Suvarna News Asianet Suvarna News

ಚುನಾವಣೆಯಲ್ಲಿ ಸೋಲು ಮತ್ತು ಗೆಲುವುಗಳು ಸಹಜ: ಮಾಜಿ ಸಚಿವ ನಾರಾಯಣಗೌಡ

ಕಾಂಗ್ರೆಸ್‌ ಪಕ್ಷ ಮತದಾರರಿಗೆ ನೀಡಿರುವ ಗ್ಯಾರಂಟಿ ಕಾರ್ಡ್‌ ಯೋಜನೆಗಳನ್ನು ಜಾರಿಗೊಳಿಸದಿದ್ದರೆ ಹೋರಾಟಕ್ಕಿಳಿಯುವುದಾಗಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಎಚ್ಚರಿಸಿದರು. 

Defeats and wins in elections are natural Says KC Narayana Gowda gvd
Author
First Published May 20, 2023, 9:02 PM IST

ಕೆ.ಆರ್‌.ಪೇಟೆ (ಮೇ.20): ಕಾಂಗ್ರೆಸ್‌ ಪಕ್ಷ ಮತದಾರರಿಗೆ ನೀಡಿರುವ ಗ್ಯಾರಂಟಿ ಕಾರ್ಡ್‌ ಯೋಜನೆಗಳನ್ನು ಜಾರಿಗೊಳಿಸದಿದ್ದರೆ ಹೋರಾಟಕ್ಕಿಳಿಯುವುದಾಗಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಎಚ್ಚರಿಸಿದರು. ಪಟ್ಟಣದ ಬಸವೇಶ್ವರ ನಗರದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮರ್ಪಣಾ ಮತ್ತು ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಸೋಲು ಮತ್ತು ಗೆಲುವುಗಳು ಸಹಜ. ಚುನಾವಣೆಯ ಸೋಲಿನಿಂದ ನಾನು ಧೃತಿಗೆಟ್ಟಿಲ್ಲ. ಕಳೆದ 10 ವರ್ಷಗಳಿಂದ ಕ್ಷೇತ್ರದ ಶಾಸಕನಾಗಿ ಮತ್ತು ಸಚಿವನಾಗಿ ಸಾವಿರಾರು ಕೋಟಿ ರು ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ದಿಪಡಿಸಿದರೂ ನಾನು ಮೂರನೇ ಸ್ಥಾನಕ್ಕೆ ತಳಲ್ಪಟ್ಟ ಬಗ್ಗೆ ನೋವಿದೆ ಎಂದರು. 

ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ, ಕ್ಷೇತ್ರ ರಾಜಕಾರಣದಿಂದ ಹೊರಹೋಗುವುದಿಲ್ಲ. ಕಳೆದ 10 ವರ್ಷಗಳಿಂದ ನನ್ನ ಮುಖ ನೋಡಿ ನೋಡಿ ಬೇಸರವಾಗಿ ಜನ ಹೊಸ ಮುಖಕ್ಕೆ ಮಣೆ ಹಾಕಿರಬಹುದು. ನನ್ನ ಸೋಲನ್ನು ಅರಗಿಸಿಕೊಂಡು ಸುಧಾರಿಸಿಕೊಂಡು ಮುನ್ನಡೆಯುತ್ತೇನೆ ಎಂದರು. ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ. ನನ್ನ ತಾಯಿ ಸಂಕಲ್ಪದಿಂದ ತಾಲೂಕಿನಲ್ಲಿ ಸಮಾಜ ಸೇವೆ ಸಲ್ಲಿಸುತ್ತಿದ್ದೇನೆ. ಇಲ್ಲಿಗೆ ಸೇವಕನಾಗಿ ಬಂದವನು. ಸೇವಕನಾಗಿಯೇ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ತಾಲೂಕು ಬಿಟ್ಟು ಓಡಿ ಹೋಗಲ್ಲ ಎಂದು ತಿಳಿಸಿದರು. 

ಮೌಢ್ಯ ತೊರೆದು ಚಾಮರಾಜನಗರ ಜಿಲ್ಲೆ ಉದ್ಘಾಟಿಸಿದ್ದ ಸಿದ್ದರಾಮಯ್ಯ

ಮನ್ಮುಲ್‌ ನಿರ್ದೇಶಕ ಡಾಲು ರವಿಯ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ನನ್ನದೇ ಊರಿನ ವ್ಯಕ್ತಿಯೊಬ್ಬ ನನ್ನ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾನೆ. ನನ್ನ ಬಗ್ಗೆ ಮಾತನಾಡುವವರು ನಾರಾಯಣಗೌಡ ಹತ್ತಿರ ಬರೋಕೆ ಆಗಲ್ಲ ಎಂದು ಡಾಲು ರವಿಗೆ ಟಾಂಗ್‌ ನೀಡಿದರು. ಕ್ಷೇತ್ರದ ಅಭಿವೃದ್ಧಿಗಾಗಿ ಸಹಕರಿಸುತ್ತೇನೆ. ಏಳು ವಸತಿ ಶಾಲೆ, ಒಂದು ನವೋದಯ ಶಾಲೆ, ವಿಭಾಗೀಯ ಕಚೇರಿ ತಂದಿದ್ದೇನೆ. 108 ಕೆರೆ ತುಂಬಿಸುವ ಕಾಮಗಾರಿಗಳು ಆರಂಭಗೊಂಡಿವೆ. ಅನುದಾನದ ಕೊರತೆಯಿಂದ ಇವು ನಿಲ್ಲಬಾರದು. ನಾನು ಸೋತಿದ್ದರೂ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಿಸುವ ಶಕ್ತಿ ನನಗಿದೆ. ನನ್ನ ಶಕ್ತಿ ಬಳಸಿ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ ಎಂದು ಹೇಳಿದರು. 

ಸಭೆಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್‌, ಮುಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್‌, ಪುರಸಭಾ ಸದಸ್ಯ ಬಸ್‌ ಸಂತೋಷ್‌ಕುಮಾರ್‌, ತಾಪಂ ಮಾಜಿ ಅಧ್ಯಕ್ಷ ಜವರಾಯಿಗೌಡ, ಪಿಎಲ್ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಬಂಡಿಹೊಳೆ ಅಶೋಕ್‌, ಬಿಜೆಪಿ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್‌, ಮುಖಂಡ ಛೇಟುಸಿಂಗ್‌ ಆತ್ಮಾವಲೋಕನಾ ಸಭೆಯಲ್ಲಿ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷರಾದ ಕಿಕ್ಕೇರಿ ಪ್ರಭಾಕರ್‌, ಬೇಲದಕೆರೆ ಪಾಪೇಗೌಡ, ಪುರಸಭೆ ಅಧ್ಯಕ್ಷೆ ಮಹಾದೇವಿ, ಮುಖಂಡರಾದ ಬಿಗ್‌ಬಾಸ್‌ ಮೋಹನ್‌, ಡಿ.ಪಿ.ಪರಮೇಶ್‌, ಬಿಜೆಪಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ರಮೇಶ್‌, ಪುರಸಭಾ ಸದಸ್ಯರಾದ ಕೆ.ಎಸ್‌.ಪ್ರಮೋದ್‌, ಶುಭ ಗಿರೀಶ್‌, ಶೋಭಾದಿನೇಶ್‌, ಮೋದೂರು ಮಂಜು, ಜಾಗಿನಕೆರೆ ನಾರಾಯಣ, ಬಿಲ್ಲೇನಹಳ್ಳಿ ಕುಮಾರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕಾಂಗ್ರೆಸ್‌ ಗ್ಯಾರಂಟಿ ಭರವಸೆಗಳಿಂದ ಸೋಲು: ಸಿ.ಎಸ್‌.ಪುಟ್ಟರಾಜು

ಕಾಂಗ್ರೆಸ್‌ ಪಕ್ಷ ಮತದಾರರಿಗೆ ನೀಡಿರುವ ಗ್ಯಾರಂಟಿ ಕಾರ್ಡ್‌ ಯೋಜನೆಗಳನ್ನು ಜಾರಿಗೊಳಿಸದಿದ್ದರೆ ಹೋರಾಟಕ್ಕಿಳಿಯುವೆ.ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ, ಕ್ಷೇತ್ರ ರಾಜಕಾರಣದಿಂದ ಹೊರಹೋಗುವುದಿಲ್ಲ. ಕಳೆದ 10 ವರ್ಷಗಳಿಂದ ನನ್ನ ಮುಖ ನೋಡಿ ನೋಡಿ ಬೇಸರವಾಗಿ ಜನ ಹೊಸ ಮುಖಕ್ಕೆ ಮಣೆ ಹಾಕಿರಬಹುದು.
-ಕೆ.ಸಿ ನಾರಾಯಣ ಗೌಡ, ಮಾಜಿ ಸಚಿವ

Follow Us:
Download App:
  • android
  • ios