Asianet Suvarna News Asianet Suvarna News

ಗೃಹಲಕ್ಷ್ಮೀಯಿಂದ ಅತ್ತೆ ಸೊಸೆಗೆ ಜಗಳ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಬಿಜೆಪಿ: ಡಿಕೆಶಿ

ಭಾರತ ಜೋಡೊ ಪಾದಯಾತ್ರೆಯ ಶ್ರಮ ಕರ್ನಾಟಕದಲ್ಲಿ ಫಲ ನೀಡಿತು. ಸುಮಾರು 500 ಕಿಲೋ ಮೀಟರ್ ಪಾದಯಾತ್ರೆ ಕರ್ನಾಟಕದಲ್ಲಿ ಸಾಗಿದ ಪರಿಣಾಮ ಕಾಂಗ್ರೆಸ್ ಪಕ್ಷ ಅಕಾರಕ್ಕೆ ಬಂದಿತು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. 

DCM DK Shivakumar Slams On BJP And HD Kumaraswamy gvd
Author
First Published Sep 8, 2023, 12:32 PM IST

ರಾಮನಗರ (ಸೆ.08): ಭಾರತ ಜೋಡೊ ಪಾದಯಾತ್ರೆಯ ಶ್ರಮ ಕರ್ನಾಟಕದಲ್ಲಿ ಫಲ ನೀಡಿತು. ಸುಮಾರು 500 ಕಿಲೋ ಮೀಟರ್ ಪಾದಯಾತ್ರೆ ಕರ್ನಾಟಕದಲ್ಲಿ ಸಾಗಿದ ಪರಿಣಾಮ ಕಾಂಗ್ರೆಸ್ ಪಕ್ಷ ಅಕಾರಕ್ಕೆ ಬಂದಿತು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಐಜೂರು ವೃತ್ತದಲ್ಲಿ ಭಾರತ್ ಜೋಡೋ ಯಾತ್ರೆಯ ನೆನಪಿನಾರ್ಥ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.

ದೇಶದ ಸಮಗ್ರತೆ, ಐಕ್ಯತೆ, ಶಾಂತಿ ಕಾಪಾಡಲು ರಾಹುಲ್ ಗಾಂರವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ ಪರಿಣಾಮ ಇಂದು ನಾವು ದೇಶದಲ್ಲಿ ಬದಲಾವಣೆ ಕಾಣುತ್ತಿದ್ದೇವೆ ಎಂದರು. ಕಾಂಗ್ರೆಸ್ ಪಕ್ಷ ಈ ದೇಶದ ಶಕ್ತಿ, ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರು ಅಧಿಕಾರಕ್ಕೆ ಬಂದಂತೆ. ಅಧಿಕಾರಕ್ಕೆ ಬಂದ ತಕ್ಷಣ ಆರ್ಥಿಕವಾಗಿ ನಮ್ಮ ಜನರನ್ನು ಸದೃಢ ಮಾಡುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದು ನಿಜವಾದ ಬದಲಾವಣೆ ಎಂದು ತಿಳಿಸಿದರು.

ನಾಯಿಗಳಂತೆ ಕಿತ್ತಾಡುತ್ತಿದ್ದವರೀಗ ಭಾಯಿ-ಭಾಯಿ: ಎಚ್‌ಡಿಕೆ-ಸಿಪಿಐ ವಿರುದ್ದ ಸಂಸದ ಸುರೇಶ್ ವಾಗ್ದಾಳಿ

ಅತ್ತೆ ಸೊಸೆಗೆ ಜಗಳ ತಂದಿಟ್ಟ ಬಿಜೆಪಿ: ನಾವು ಅಧಿಕಾರಕ್ಕೆ ಬಂದು ಮೂರು ದಿನಗಳು ಆಗಿರಲಿಲ್ಲ. ಆಗಲೇ ಗ್ಯಾರಂಟಿ ಎಲ್ಲಿ ಎಂದು ಪ್ರಶ್ನೆ ಮಾಡುತ್ತಿದ್ದರು. ಗೃಹಲಕ್ಷ್ಮೀ ಯೋಜನೆಯಿಂದ ಅತ್ತೆ ಸೊಸೆಗೆ ಜಗಳ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದಲ್ಲಿ ರಾಮನಗರಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿವಿ ಘೋಷಣೆ ಮಾಡಿದರು. ಅದನ್ನು ಏಕೆ ಮಾಡಲಿಲ್ಲ. ಕಾಂಗ್ರೆಸ್ ಶಾಸಕರು ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆಗ ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡಿದ್ದರು. ಆದರೆ ಈಗ ವಿರೋಧ ಮಾಡುತ್ತಿದ್ದಾರೆ. ಅಲ್ಲಿನ ಜನರು ರಾಮನಗರದ ಪ್ರಜೆಗಳಲ್ಲವೇ? ಏಕೆ ರಾಜಕೀಯ ಮಾಡುತ್ತಾ ಇದ್ದೀರಿ ಎಂದು ಪ್ರಶ್ನಿಸಿದರು.

ರಾಮನಗರ ಬಂದ್ ಮಾಡಲಿ ಬೇಡ ಅಂದವರು ಯಾರು. ಆರೋಗ್ಯ ವಿವಿಯೇ ಬೇರೆ, ಮೆಡಿಕಲ್ ಕಾಲೇಜೆ ಬೇರೆ. ಕನಕಪುರದಲ್ಲಿ ಮೆಡಿಕಲ್ ಕಾಲೇಜು ಇರುತ್ತದೆ. ರಾಮನಗರದಲ್ಲಿಯೂ ಮೆಡಿಕಲ್ ಕಾಲೇಜು ಇರಲಿದೆ. ಯಾರು ಬೇಕಾದರು ಪ್ರತಿಭಟನೆ ಮಾಡಲಿ. ಬೇಕಾದರೆ ತಮಟೆ ನಗಾರಿಯನ್ನು ನಾನೇ ಕಳುಹಿಸಿಕೊಡುತ್ತೇನೆ ಎಂದು ಹೋರಾಟಗಾರರು ವಿರುದ್ಧ ಹರಿಹಾಯ್ದರು.

ಕಳೆದ ವರ್ಷ ನೆರೆ ಬಂದು ಜನರ ಬದುಕು ಕೊಚ್ಚಿ ಹೋಯಿತು. ಬಿಜೆಪಿ ಸರ್ಕಾರ ಒಂದೇ ಒಂದು ರುಪಾಯಿ ಪರಿಹಾರ ಕೊಡಲಿಲ್ಲ. ನಾವು ಪ್ರಸ್ತುತ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದು ಸೂಕ್ತ ಪರಿಹಾರವನ್ನು ಸಂತ್ರಸ್ತರಿಗೆ ನೀಡುತ್ತೇವೆ ಎಂದರು. ರಾಮನಗರದ ಇಂದಿನ ದುಸ್ಥಿತಿಗೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಅವರ ಕುಟುಂಬದವರೇ ನೇರ ಕಾರಣ. 20 ವರ್ಷ ಅವರೇ ಅಧಿಕಾರದಲ್ಲಿ ಇದ್ದವರು. ಶಾಸಕರ ಸಭೆಯಲ್ಲಿ ಇಕ್ಬಾಲ್ ಹುಸೇನ್ ಅವರು ರಾಮನಗರ ದುಸ್ಥಿತಿಯ ಫೋಟೋ ತೋರಿಸಿದಾಗ ನನಗೆ ಭಯವಾಯಿತು. ಇಲ್ಲಿ ಅವರು 20 ವರ್ಷ ಏನು ಮಾಡಿದರು ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

ರಾಮನಗರ ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್ ಬಿಟ್ಟರೆ ಯಾರೂ ಗೆಲ್ಲುವುದಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ವರ್ಷ ಮಾಗಡಿ ಹಾಗೂ ರಾಮನಗರದಲ್ಲಿ ನಮ್ಮ ಶಾಸಕರನ್ನು ಗೆಲ್ಲಿಸಿದ್ದೀರಿ. ನಿಮಗೆ ಶಕ್ತಿ ತುಂಬುವ ಕೆಲಸ ನಾವು ಮಾಡುತ್ತೇವೆ. ಮಾಗಡಿಯ ಬಾಲಕೃಷ್ಣ ಮತ್ತು ರಾಮನಗರದ ಇಕ್ಬಾಲ್ ಹುಸೇನ್ ಅವರನ್ನು ಬೆನ್ನಿಗೆ ಕಟ್ಟಿಕೊಂಡು ಇಡೀ ರಾಜ್ಯದಲ್ಲಿ ರಾಮನಗರವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮಾಂಕಾಳ ವೈದ್ಯ, ಸಂಸದ ಡಿ.ಕೆ.ಸುರೇಶ್ , ಶಾಸಕರಾದ ಇಕ್ಬಾಲ್ ಹುಸೇನ್ , ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಸ್. ರವಿ ಮತ್ತಿತರರು ಉಪಸ್ಥಿತರಿದ್ದರು.

ಕಾವೇರಿ ನೀರು ವಿಚಾರದಲ್ಲಿ ಡಿಕೆಶಿಗೆ ಕರ್ನಾಟಕ ಜನರ ಕಷ್ಟ ಗೊತ್ತಿಲ್ಲ: ಸಿ.ಪಿ.ಯೋಗೇಶ್ವರ್

ರೆಡಿಮೇಡ್ ಗಂಡುಗಳ ತರಹ ನಾನು, ಡಿ.ಕೆ.ಸುರೇಶ್ , ಎಸ್ .ರವಿ, ಬಾಲಕೃಷ್ಣ, ಇಕ್ಬಾಲ್ ಹುಸೇನ್ ಇದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಏಕೆ ವಯಸ್ಸು ಹಾಳು ಮಾಡಿಕೊಳ್ಳುತ್ತೀರಿ. ನಿಮಗೆ ಸಹಾಯ ಮಾಡುವುದಕ್ಕೆ ನಾವು ಸಿದ್ಧರಿದ್ದೇವೆ. ಈ ಜಿಲ್ಲೆ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಿದ್ದೇವೆ. ಇದರ ನೇತೃತ್ವ ವಹಿಸಲು ನಾವು ಐದು ಜನ ಇದ್ದೇವೆ. ಹೋರಾಟ ಎಲ್ಲ ಏಕೆ ಬಿಟ್ಟು ಬಿಡಿ. ನಮ್ಮೊಂದಿಗೆ ಕೈಜೋಡಿಸಿ. ಎಲ್ಲ ಜನರು ಒಟ್ಟಾಗಿ ಬದುಕೋಣ.
- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

Follow Us:
Download App:
  • android
  • ios