ಮುಂಬರುವ 2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಉಮಾದೇವಿ

ದಾಬಸ್‌ಪೇಟೆ(ಅ.22):  ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆಯವರು ಆಯ್ಕೆಯಾಗಿರುವುದು ನಮಗೆಲ್ಲ ಹೆಮ್ಮೆ ತಂದಿದೆ ಎಂದು ನೆಲಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ನಾಯಕಿ ಉಮಾದೇವಿ ತಿಳಿಸಿದರು.

ಸೋಂಪುರ ಹೋಬಳಿಯ ಕೆಂಗಲ್‌ ಗೊಲ್ಲರಹಟ್ಟಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮದ ಮಹಿಳೆಯರಿಗೆ ಸೀರೆ, ಬಾಗಿನ ವಿತರಿಸಿ ಮಾತನಾಡಿದ ಅವರು, ಮುಂಬರುವ 2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಮುಂದಿನ ಐದು ವರ್ಷಗಳು ಜನಪರ ಸರ್ಕಾರದ ಆಡಳಿತ ನೀಡಲಿದ್ದೇವೆ. ನಮ್ಮ ರಾಜ್ಯದ ಹಿರಿಯ ನಾಯಕರು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿರುವುದರಿಂದ ಹೆಚ್ಚಿನ ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳಿದರು.

ಬಿಜೆಪಿ ಜೋಡೆತ್ತು ಯಾತ್ರೆ 2.0; ನಾಳೆಯಿಂದ ಸಿಎಂ- ಬಿಎಸ್‌ವೈ 2ನೇ ಹಂತದ ರಾಜ್ಯ ಪ್ರವಾಸ

ದೀಪಾವಳಿ ಹಬ್ಬ ಬೆಳಕಿನ ಹಬ್ಬ ಎಲ್ಲರೂ ಜಾತ್ಯತೀತತೆಯಿಂದ ಆಚರಿಸುವ ಹಬ್ಬವಾಗಿದ್ದು, ಹಬ್ಬದ ಪ್ರಯುಕ್ತ ಕ್ಷೇತ್ರಾದ್ಯಂತ ಮಹಿಳೆಯರಿಗೆ ಸೀರೆ ಬಾಗಿನ ನೀಡಿ ಶುಭಾಶಯಗಳನ್ನು ಕೋರುತ್ತಿದ್ದೇನೆ. ನಾನು ನೆಲಮಂಗಲ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದು, ಪಕ್ಷ ಟಿಕೆಟ್‌ ಕೊಡುವ ನಿರೀಕ್ಷೆ ಇದೆ ಎಂದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಹಾವು ಕಚ್ಚಿ ಮೃತರಾಗಿದ್ದ ಯುವತಿ ಜಯಲಕ್ಷ್ಮಮ್ಮ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಧನಸಹಾಯ ಮಾಡಿ ಹಾಗೂ ಮನೆ ಕಟ್ಟಿಕೊಳ್ಳಲು ಇನ್ನು ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ಮಹದೇವಯ್ಯ, ನಾಗೇಶ್‌, ಇಮಚೇನಹಳ್ಳಿ ಷಡಕ್ಷರಿ, ಹೊನ್ನೇನಹಳ್ಳಿ ಜಗದೀಶ್‌ ಮತ್ತಿತರಿದ್ದರು.